ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿಮ್ಮ ಮುಂದೇ

ಇಂದಿನ (29-07-2010) ವಿಶೇಷ ಲೇಖನಗಳು




ಪ್ರತಿಗ್ರಾಮದಲ್ಲಿ ಭಾರತದ ಕೇಂದ್ರ ಇದೆ

ಇವತ್ತಿನ ಕರ್ನಾಟಕದ ಸಂದರ್ಭದಲ್ಲಿ ಕನ್ನಡಿಗರ ಆತ್ಮಸಾಕ್ಷಿಯಂತೆ ಮಾತನಾಡುವ ಡಾ.ಯು.ಆರ್.ಅನಂತಮೂರ್ತಿ ‘ಕರವೇ ನಲ್ನುಡಿ’ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು. ನಂತರ ಅವರ ಮಾತುಗಳು ಚೌಡಯ್ಯ ಸ್ಮಾರಕ ಭವನದಲ್ಲಿ ಅನುರಣಿಸಿದವು. ಕನ್ನಡವನ್ನು ಉಳಿಸುವ ಬಗೆ ಹೇಗೆ ಎಂಬುದು ಅವರ ಒಟ್ಟು ಭಾಷಣದ ಕೇಂದ್ರಪ್ರಜ್ಞೆಯಾಗಿತ್ತು. ಅನಂತಮೂರ್ತಿಯವರ ಮಾತುಗಳು ಕನ್ನಡ ಚಳವಳಿಗಾರರಿಗೆ, ಕನ್ನಡ ಶ್ರೀಸಾಮಾನ್ಯನಿಗೆ ಹೊಸ ಮಾರ್ಗವೊಂದರ ದರ್ಶನವನ್ನು ಮಾಡಿಸಿತು. ಅವರ ಭಾಷಣದ ಯಥಾವತ್ತು ಇಲ್ಲಿದೆ.

ಕನ್ನಡದ ಮಾತನ್ನ ಎತ್ತುವುದೇ ಅಪಾಯಕಾರಿಯಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿದ ಹಿರಿಯರ ಸಂಸ್ಥಾನಕ್ಕೆ ಸೇರಿದ ಪೂಜ್ಯರಾದ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅವರೇ, ಇಂಥ ಒಂದು ಬೃಹತ್ ಸಭೆಯನ್ನು ಬೆಂಗಳೂರಿನಲ್ಲಿ ಕನ್ನಡಕ್ಕಾಗಿ ಏರ್ಪಾಡು ಮಾಡುವುದನ್ನು ಸಾಧ್ಯವಾಗುವಂತೆ ಮಾಡಿದ ಶ್ರೀ ಟಿ.ಎ. ನಾರಾಯಣಗೌಡರೇ, ಮಹಾಪೌರರಾದ ಎಸ್.ಕೆ ನಟರಾಜ್ ಅವರೇ, ನಮಗೆಲ್ಲರಿಗೂ ಬಹಳ ಪ್ರೀತಿಪಾತ್ರರಾದ ಶ್ರೀಮತಿ ಮೋಟಮ್ಮ ನವರೇ, ನಮ್ಮ ಅತ್ಯಂತ ಮುಖ್ಯವಾದ ಕನ್ನಡದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್‌ರವರೇ, ನನಗೆ ಬಹಳ ಕಾಲದಿಂದ ವಿಶ್ವಾಸವನ್ನು ಇಟ್ಟಿರುವ ಮನುಬಳಿಗಾರ್ ಅವರೇ, ಪತ್ರಿಕೆಯ ಸಂಪಾದಕರಾದ ಶ್ರೀಮತಿ ವಿಶಾಲಾಕ್ಷಿ ಅವರೆ ಮತ್ತು, ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಪರಮೇಶ್ವರ್‌ರವರೆ,
ಯಾವ ಬಂಗಾಳಿ ಆದರೂ ಪ್ರಪಂಚದಲ್ಲಿ ಎಲ್ಲೇ ಇದ್ದರೂ, ನೀನು ಯಾರು ಅಂದರೆ, ನಾನು ಬಂಗಾಳಿ ಅಂತಾನೆ. ಇಂಥ ಜಾತಿ ಅಂಥ ಹೇಳಲ್ಲ. ಒಬ್ಬ ತಮಿಳರವನು ಎಲ್ಲಿದ್ದರು ನೀನು ಯಾರು ಅಂದರೆ ನಾನು ತಮಿಳವನು ಎನ್ನುತ್ತಾನೆ. ಕನ್ನಡದವರ ಮಟ್ಟಿಗೆ ಅಮೆರಿಕದಲ್ಲಿದ್ದರೆ ನೀವು ಯಾರು ಅಂದರೆ, ನಾವು ವೀರಶೈವರು, ನಾವು ಗೌಡರು, ನಾವು ಬ್ರಾಹ್ಮಣರು ಅಂತಾರೆ. ಆಮೇಲಿಂದ ಒತ್ತಾಯಪೂರ್ವಕವಾಗಿ ನೋಡಿದರೆ ಐ ಆಮ್ ಎ ಕನ್ನಡಿಗ ಅಂಥ ಇಂಗ್ಲಿಷ್‌ನಲ್ಲಿ ಹೇಳ್ತಾರೆ. ಇದು ಬಹಳ ದುರದೃಷ್ಟದ ವಿಷಯ. ನಾವು ಮೊದಲು ಗುರುತಿಸಿಕೊಳ್ಳಬೇಕಾದುದು ನಮ್ಮನ್ನ ಕನ್ನಡಿಗರು ಅಂಥ. ಯಾಕೆಂದರೆ ಭಾರತದಲ್ಲಿ ಇರೋದು ಫೆಡರಲ್ ವ್ಯವಸ್ಥೆ, ಕೇಂದ್ರ ಸರ್ಕಾರ ಅಂತೀವಲ್ಲ ಅದು ತಪ್ಪು ಶಬ್ದ, ಭಾರತ ಬಹುಕೇಂದ್ರಿತ ರಾಷ್ಟ್ರ, ಎಲ್ಲಾ ರಾಜ್ಯಗಳಲ್ಲೂ ಭಾರತದ ಕೇಂದ್ರ ಇದೆ. ಗಾಂಧೀಜಿ ಅವರು ಕಲ್ಪಿಸಿದ್ದು ಸಹ ಇದನ್ನೇ. ಭಾರತದ ಪ್ರತಿ ಗ್ರಾಮದಲ್ಲೂ ಭಾರತದ ಕೇಂದ್ರ ಇದೆ. ಕೊನೆಪಕ್ಷ ನಾವು ಪ್ರತಿ ರಾಜ್ಯದಲ್ಲೂ ಭಾರತದ ಕೇಂದ್ರ ಇದೆ ಅಂಥ ಅರ್ಥಮಾಡಿಕೊಳ್ಳಬೇಕು. ಇದು ಫೆಡರಲ್ ಆದ್ದರಿಂದಲೇ ರೈಲ್ವೆಯಲ್ಲಿ ಇತ್ಯಾದಿ ನೌಕರಿಯಲ್ಲಿ ಪ್ರತಿಯೊಂದರಲ್ಲೂ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಗಲೇಬೇಕು.
ಇಲ್ಲದೇ ಹೋದರೆ ಏನಾಗತ್ತೆ ಅಂದರೆ, ನೀವು ಅಸ್ಸಾಂನಲ್ಲಿ ನೋಡಿದ್ರೆ, ಅಸ್ಸಾಂನಲ್ಲಿ ಅಸ್ಸಾಂನ ಜನರೇ ಇಲ್ಲದಂತ ರಾಜಕಾರಣ ನಡೀತಿದೆ. ನನ್ನನ್ನ ೨-೩ ವರ್ಷಗಳ ಹಿಂದೆ ನಮ್ಮಲ್ಲಿ ಸಾಹಿತ್ಯ ಸಮ್ಮೇಳನ ನಡೆಯತ್ತಲ್ಲ ಅಂಥದ್ದೇ ಒಂದು ಅಸ್ಸಾಂ ಭಾಷೆಯ ಸಮ್ಮೇಳನಕ್ಕೆ ನನ್ನನ್ನ ಉದ್ಘಾಟನೆ ಮಾಡೋದಕ್ಕೆ ಕರೆದಿದ್ದರು. ನಾನು ಹೋಗಿ ನೋಡಿದರೆ ಒಂದು ದೊಡ್ಡ ಮೈದಾನದಲ್ಲಿ ಲಕ್ಷೋಪಲಕ್ಷ ಅಸ್ಸಾಮಿ ಜನರು ಸೇರಿದ್ದರು. ಅಸ್ಸಾಂನಲ್ಲಿ ಅವರು ನಿಜವಾಗಲೂ ತಮ್ಮನ್ನ ಗುರುತಿಸಿಕೊಳ್ಳುವುದು ನಾವು ಅಸ್ಸಾಮಿ ಎಂದೇ. ಯಾಕೆಂದರೆ ಅಸ್ಸಾಮಿನ ಭಾಷೆಗೆ ಒಂದು ದೊಡ್ಡ ಅಪಾಯ ಬಂದೊದಗಿದೆ. ಬೆಂಗಳೂರಿನಲ್ಲಿ ಕನ್ನಡಕ್ಕೆ ಇಂಥ ಅಪಾಯ ಬಂದೊದಗಿದೆ. ನನ್ನ ಸ್ನೇಹಿತರು, ನನ್ನ ಮಗುವನ್ನ ಒಂದು ಒಳ್ಳೆಯ ಕನ್ನಡ ಶಾಲೆಗೆ ಕಳಿಸಬೇಕು, ಕನ್ನಡ ಮಾಧ್ಯಮದ ಶಾಲೆಗೆ ಕಳಿಸಬೇಕು ಅಂದರೆ ಇಲ್ಲಿ ಒಂದೆ ಒಂದು ಕನ್ನಡ ಮಾಧ್ಯಮ ಶಾಲೆ ಸಿಗುತ್ತಿಲ್ಲ; ಬೆಂಗಳೂರಿನಲ್ಲಿ ಎನ್ನುತ್ತಾರೆ. ಹೀಗೆ ಆಗಬಾರದು. ಇದು ನಮ್ಮ ರಾಜಧಾನಿ ಮತ್ತು ಕೆಲವು ವಿಷಯಗಳಲ್ಲಿ ನಾರಾಯಣಗೌಡರಿಗೆ ಸಂಪೂರ್ಣ ಬೆಂಬಲ ನಿಂತು ನಾವು, ನಾವು ಅಂದರೆ ಪ್ರಜ್ಞಾವಂತರಾದವರು ಕೆಲಸ ಮಾಡಬೇಕು.
ಉದಾಹರಣೆಗೆ ಇಲ್ಲಿ ಯಾವ ಬಹುರಾಷ್ಟ್ರೀಯ ಕಂಪನಿ ಬಂದರೂ ಕನ್ನಡವನ್ನೂ ಒಂದು ಭಾಷೆಯನ್ನಾಗಿ ಅವರು ಬಳಸಬೇಕು, ಕನ್ನಡವನ್ನೇ ಅಲ್ಲ. ಕನ್ನಡವನ್ನೂ ಒಂದು ಭಾಷೆಯಾಗಿ. ಯಾಕೆಂದರೆ ಅವರಿಗೆ ಬೇರೆ ಭಾಷೆ ಗೊತ್ತಿಲ್ಲ. ಯಾಕೆಂದರೆ ಇದೇ ಬಹುರಾಷ್ಟ್ರೀಯ ಕಂಪನಿ ಹಾಲೆಂಡ್‌ಗೆ ಹೋದರೆ ಅಲ್ಲಿನ ಭಾಷೆಯನ್ನ ಉಪಯೋಗಿಸುತ್ತಾರೆ. ಫ್ರಾನ್ಸ್‌ಗೆ ಹೋದರೆ ಅಲ್ಲಿನ ಭಾಷೆ ಉಪಯೋಗಿಸುತ್ತಾರೆ. ಕರ್ನಾಟಕಕ್ಕೆ ಬಂದರೆ, ಅವರು ಕನ್ನಡವನ್ನು ಬಳಸಲ್ಲ. ನಮ್ಮ ಸರ್ಕಾರ ಇಂಥಹ ಒಂದು ಒತ್ತಾಯವನ್ನು ಅವರ ಮೇಲೆ ಹಾಕಬೇಕು. ನಿಮಗೆ ಜಾಗ ಕೊಡಬೇಕಾದರೆ ನಿಮ್ ಆಫೀಸಿನಲ್ಲಿ ಕನ್ನಡವನ್ನೂ ಒಂದು ಭಾಷೆಯಾಗಿ ಬಳಸಬೇಕು ಎಂದು ಕಟ್ಟಳೆ ಹೇರಬೇಕು. ಕನ್ನಡವನ್ನೂ ಅಂತೀನಿ,ಕನ್ನಡವನ್ನೇ ಅಲ್ಲ .ಯಾಕೆಂದರೆ ಬೇರೆ ಬೇರೆ ಕಡೆ ಅವರು ವ್ಯವಹಾರ ಮಾಡಬೇಕಾಗುತ್ತೇ. ಕನ್ನಡವಿಲ್ಲದೇ ಅಲ್ಲ.
ಹಾಗೇನೆ ಇಷ್ಟು ಜನ ಕನ್ನಡಿಗರಿಗೆ ಕೆಲಸ ಸಿಗಲೇಬೇಕು ಅನ್ನೋದನ್ನ ಮಾಡಬೇಕು. ಜೊತೆಗೆ ಇದೊಂದು ದೊಡ್ಡ ಚಳವಳಿ ಅಂಥ ತಿಳಿದುಕೊಂಡಿದ್ದೇನೆ ನಾನು. ಕರವೇ ಅವರು ಕನ್ನಡಿಗರನ್ನ ಎಲ್ಲಾ ಕೆಲಸವನ್ನು ಮಾಡಬಲ್ಲಂತಹ ತರಬೇತಿ ಕೊಡುವಂತಹ ಒಂದು ಚಳವಳಿಯನ್ನ ಮಾಡಬೇಕು. ನಮ್ಮಲ್ಲಿ ಮನೆ ಕಟ್ಟಬೇಕು ಅಂದರೆ ತಮಿಳರೆ ಸಿಗೋದು, ಇವತ್ತೇನಾದರು, ನಾವು ಮರಗೆಲಸ ಮಾಡಬೇಕು ಅಂದರೆ ರಾಜಸ್ಥಾನಿಗಳೇ ಸಿಗೋದು. ಹಿಂದಿನ ಕಾಲದಲ್ಲಿ ಚಿನ್ನದ ಕೆಲಸ, ಮರಗೆಲಸವನ್ನ, ಮಡಿಕೆಗಳನ್ನ ಏನನ್ನಾದರು ಮಾಡಬಲ್ಲಂಥ ಶಕ್ತಿ ಕರ್ನಾಟಕದಲ್ಲಿತ್ತು. ಅದು ಹೋಗ್ತಾ ಇದೆ, ನಾವು ಸೋಮಾರಿಗಳಾಗುತ್ತಿದ್ದೇವೆ. ಅದು ಎಲ್ಲಾ ದೇಶದಲ್ಲೂ ಆಗುತ್ತೆ, ಏನಾಗತ್ತೆ ಅಂದರೆ ನಾವು ಅನೇಕ ಸಲ ಸ್ವಲ್ಪ ಶ್ರೀಮಂತರಾಗಿಬಿಟ್ಟರೆ ಸೋಮಾರಿಗಳಾಗಿಬಿಡುತ್ತೇವೆ. ಬಂಗಾಳದಲ್ಲಿ ಏನಾದರೂ ಬೇರೆ ಕೆಲಸ ಮಾಡಬೇಕು ಅಂದರೆ ಬಿಹಾರಿಗಳು ಅಲ್ಲಿಗೆ ಹೋಗಬೇಕು. ಬೇರೆಯವರು ಹೋದರೆ ಆಗಲ್ಲ. ನಾನು ಕೇರಳದಲ್ಲಿ ವೈಸ್ ಚಾನ್ಸಲರ್ ಆಗಿದ್ದೆ, ಅಲ್ಲಿ ಒಂದು ಎಲೆಕ್ಟ್ರಿಕ್ ರಿಪೇರಿ ವರ್ಕ್ ಮಾಡಕ್ಕೆ ಮಾಲಯಾಳಿ ಸಿಗೋದಿಲ್ಲ. ಯಾವುನೋ ತಮಿಳೋನೋ ಬಂದು ಮಾಡ್ತಾನೆ. ಕಷ್ಟದ ಕೆಲಸವನ್ನ ನಾವು ಮಾಡಲ್ಲ. ಹಾಗೇನೆ ಪಾಪ ಬೀದರ್ ಕಡೆಯವರು ಗೋವಾಗೆ ಹೋಗದೆ ಇದ್ದರೆ ಯಾವ ಕೆಲಸವೂ ಆಗಲ್ಲ.
ಹೀಗೆ ನಾವು ನಮ್ಮ ಎಲ್ಲ ಕೆಲಸವನ್ನು ಮಾಡೋದಕ್ಕೆ ಇನ್ನೊಂದು ಭಾಷೆ ಜನರನ್ನು ಬಳಸಿಕೊಳ್ಳುತ್ತೇವೆ. ಆದ್ದರಿಂದಲೇ ಇನ್ನೊಂದು ಭಾಷೆ ಜನರು ಹೆಚ್ಚೆಚ್ಚು ನಮ್ಮೊಳಗೆ ಬರಬೇಕಾಗತ್ತೆ. ನಾವು ಸ್ವಲ್ಪ ಸ್ವತಂತ್ರವಾಗಿ ಒಂದು ರಾಜ್ಯವಾಗಿ ಗಟ್ಟಿಯಾಗಿ ಇರಬೇಕು ಅಂದರೆ ನಮ್ಮಲ್ಲೇ ಎಲ್ಲಾ ಕೆಲಸವನ್ನ ಮಾಡುವಂತಹ ಸೋಮಾರಿಗಳಲ್ಲದಂತಹ, ನೆಚ್ಚಿಕೆ ಉಳ್ಳಂತಹ ಜನರನ್ನು ತಯಾರಿಮಾಡುವ ಒಂದು ಚಳವಳಿಯೂ ಈ ಕರವೇ ಮೂಲಕ ಆಗಬೇಕು ಅಂತ ನಾನು ಬಯಸುತ್ತೇನೆ. ಕನ್ನಡ ಸ್ವಾಭಿಮಾನ ಬೆಳೆಯೋದಕ್ಕೆ ನಾವು ಎಲ್ಲಾ ಕೆಲಸವನ್ನೂ ಮಾಡಬಲ್ಲವೆ ಅನ್ನೋದು ಕೂಡ ಬಹಳ ಮುಖ್ಯ. ಕನ್ನಡದವರನ್ನು ಬೇರೆಯವರು ಕರೆಯಬೇಕು, ಆ ರೀತಿಯ ಕೆಲಸವನ್ನು ಮಾಡಬಲ್ಲಂತಹವರು ನಮ್ಮಲ್ಲಿ ಇರಬೇಕು.
ಜ್ಞಾನದ ಮೂಲಕ ಮಾತ್ರದ ಕೆಲಸವಲ್ಲ, ದೇಹದ ಮೂಲಕ ಮಾಡುವ ಕೆಲಸಗಳನ್ನು ಮಾಡುವಂತಹವರು ದೊರೆಯುವಂತೆ ನೋಡಬೇಕು. ಅವರಿಗೆ ಬೇಕಾದಂತಹ ಶಿಕ್ಷಣವನ್ನು ಕೊಡುವುದನ್ನು ನಾರಾಯಣಗೌಡರು ಶುರು ಮಾಡಿದ್ದಾರೆ. ಅದು ಬರೀ ಹೋರಾಟ ಅಲ್ಲ. ಗಾಂಧೀಜಿ ಮಾಡ್ತಾ ಇದ್ರಲ್ಲ ಚರಕ, ಅದು ಇದು ಅಂಥ ಈ ರೀತಿಯ ಸಮಾಜವನ್ನೂ ಬೆಳೆಸುವಂತಹ ಕೆಲಸಗಳನ್ನು ಹಚ್ಚಿಕೊಳ್ಳಬೇಕು. ಆಗ ನಿಮ್ಮ ಶಕ್ತಿಯೂ ಹೆಚ್ಚಾಗುತ್ತೆ. ನಿಮಗೆ ಇರುವ ಶಕ್ತಿಯೂ ಹೆಚ್ಚಾಗುತ್ತೆ. ನಿಮಗೆ ಇರೋ ಗೌರವವೂ ಹೆಚ್ಚಾಗತ್ತೆ, ಕನ್ನಡದ ಸ್ವಾಭಿಮಾನವೂ ಬೆಳೆಯುತ್ತೆ. ನಾವು ಇವತ್ತು ಅನಕೃ ಅವರಿಂದ ಪ್ರಾರಂಭವಾದ ಕನ್ನಡ ಚಳವಳಿಯನ್ನ ನೆನೆಯಬೇಕು. ಬಹಳ ದೊಡ್ಡವರಿಂದ ಶುರುವಾಗಿದೆ. ಕುವೆಂಪು ಇದ್ದಾರೆ. ನಿಮ್ಮ ಮ್ಯಾಗಜಿನ್ ನೋಡಿದರೆ ಗೊತ್ತಾಗತೆ.
ರಾಜ್‌ಕುಮಾರ್ ಇದ್ದರು. ಅನಕೃರವರು ಇದ್ದರು. ಮಾಸ್ತಿ, ಬೇಂದ್ರೆ ಇದ್ದರು. ರಾಜ್‌ಕುಮಾರ್ ಎಷ್ಟು ಮುಖ್ಯ ಅಂಥ ನಾನು ಒಂದು ಕಡೆ ಬರೆದೆ. ಇಡೀ ಕರ್ನಾಟಕದಲ್ಲಿ ನಾವು ಎಲ್ಲರೂ ಬೇರೆ ಬೇರೆ ಕನ್ನಡಗಳನ್ನು ಮಾತನಾಡುತ್ತೀವಿ. ಬೆಳಗಾವಿಗೆ ಒಂದು ಕನ್ನಡ ಇದೆ, ನಮಗೊಂದು ಕನ್ನಡ ಇದೆ, ಬೀದರ್‌ಗೆ ಒಂದು ಕನ್ನಡ ಇದೆ. ರಾಜ್‌ಕುಮಾರ್ ಖ್ಯಾತರಾದ ಮೇಲೆ ಅವರು ಎಲ್ಲರಿಗೂ ಆಗಬಹುದಾದ ಒಂದು ಕನ್ನಡವನ್ನು ಮಾತನಾಡುತ್ತಿದ್ದರು. ಈಗ ಜರ್ಮನಿಯಲ್ಲಿ ಅಂತ ಒಂದು ಜರ್ಮನ್ ಸೃಷ್ಟಿ ಯಾಯಿತು, ಇಂಗ್ಲೆಂಡ್‌ನಲ್ಲಿ ನೂರು ಇಂಗ್ಲಿಷ್ ಇವೆ. ಆದರೆ ಒಂದು ಇಂಗ್ಲಿಷ್ ಬೇಕು ಅದೊಂದು ಭಾಷೆಯಾಗಬೇಕಾದರೆ, ಅದೊಂದು ರಾಜ್ಯವಾಗಬೇಕಾದರೆ, ಸಾರ್ವಜನಿಕ ಭಾಷೆಯಾಗಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಬೇಂದ್ರೆ ಹೇಳಿದರು.
ನಮಗೆ ಅನೇಕ ಒಳದಾರಿಗಳಿವೆ, ಬೇರೆ ಬೇರೆ ಕನ್ನಡಗಳಿವೆ. ಅದನ್ನ ದೊಡ್ಡ ಹಾದಿಯಾಗುವ ಕನ್ನಡವನ್ನ ನಮ್ಮ ಕವಿಗಳು ಮಾಡಿದರು. ಅದನ್ನ ಭಾಷೆಯಲ್ಲಿ ಮಾಡಿದವರು ರಾಜ್‌ಕುಮಾರ್. ಆದರಿಂದ ಕರ್ನಾಟಕ ಅನ್ನೋದಕ್ಕೆ ಭಾಷೆಯ ಶಕ್ತಿಯನ್ನು ತಂದವರು ರಾಜ್‌ಕುಮಾರ್. ಅವರನ್ನೆಲ್ಲಾ ಇಂದು ನೆನಪಿಸಿಕೊಳ್ಳೋಣ. ಮತ್ತು ಇದು ಬಹುಕೇಂದ್ರಿತ ರಾಷ್ಟ್ರವಾದ್ದರಿಂದ ಭಾರತದ ರಾಷ್ಟ್ರಕ್ಕೆ ಕರ್ನಾಟಕವು ಒಂದು ಕೇಂದ್ರ, ಸ್ವಾಭಿಮಾನ ಕೇಂದ್ರ ಹೇಗಾಗಬಲ್ಲದು? ಕುವೆಂಪು ಅವರು ಹೇಳಿದ ಹಾಗೆ ಅದರ ಜೊತೆ ಹೊಂದಿಕೊಂಡು. ಭಾರತದ ಜೊತೆ ಹೊಂದಿಕೊಂಡು ನಮ್ಮನ್ನು ನಾವು ಬಿಟ್ಟುಕೊಡದೆ ಇರೊದನ್ನ ನಾವು ಕಲಿಯಬೇಕು. ನಾವು ಹೊಂದಿಕೊಳ್ಳುತ್ತಾ ಹೋಗಿ ಕನ್ನಡವನ್ನೆ ಬಿಡೋದು, ಕನ್ನಡವನ್ನೆ ಕಟ್ಟಿಕೊಂಡು ಭಾರತವನ್ನು ಮರೆಯೋದು, ಎರಡೂ ಕೂಡ ಅಪಾಯಕಾರಿ. ಈ ಹೊಂದಾಣಿಕೆಯನ್ನು ಮಾಡೋದು ಹೇಗೆ ಅನ್ನೋದು ಇದೆಯಲ್ಲಾ ಅದು ಬಹಳ ಕಷ್ಟ ಸಾಧ್ಯವಾದದ್ದು.
ಈ ಸಂದರ್ಭದಲ್ಲಿ ಎಲ್ಲಾ ಕನ್ನಡಿಗರಿರೋದ್ರಿಂದ ನನ್ನ ಕನಸನ್ನು ನಾನು ಹೇಳಿಬಿಡ್ತೀನಿ. ನನಗೆ ವಯಸ್ಸಾಗಿದೆ. ಸಾಯೋದ್ರೋಳಗೆ ನೋಡಬೇಕು ಅಂತ ಬಯಸೋದು ಏನನ್ನ ಅಂದ್ರೆ ಎಲ್ಲಾ ಮಕ್ಕಳಿಗೂ ಸಮಾನವಾದ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಸಿಗುವಂತೆ ಆಗಬೇಕು. ಎಲ್ಲಾ ಮಕ್ಕಳಿಗೂ ಅಂದ್ರೆ ಇಲ್ಲಿ ಫ್ರಾನ್ಸ್‌ನವನು ಒಬ್ಬ ಬಂದು ೧೦-೨೦ ವರ್ಷ ಇಲ್ಲಿ ಇರೋದಾದ್ರೆ, ಅವನ ಮಗು ಇಲ್ಲಿ ಬೆಳೆಯೋದಾದ್ರೆ ಫ್ರಾನ್ಸ್‌ನವನ ಮಗು ಕೂಡ ಕನ್ನಡವನ್ನ ಕಲಿಯಬೇಕು. ಯಾಕೆಂದರೆ ಒಂದು ಮಗು ಜ್ಞಾನವನ್ನ ಕಲಿಯೋದು ಶಾಲೆಯಲ್ಲಿ ಮಾತ್ರವಲ್ಲ, ಬೀದಿಯಲ್ಲಿ ಕೂಡ. ಯಾವುದು ಬೀದಿಯ ಭಾಷೆಯೋ ಅದನ್ನ ಕಲಿಯದೇ ಇದ್ದರೆ ಮಗುವಿನ ಜ್ಞಾನ ಬೆಳೆಯೋಲ್ಲ. ಆದರೆ ನನ್ನ ಮಗುವೊಂದು ತಮಿಳುನಾಡಿನಲ್ಲಿದ್ದರೆ ಅದು ತಮಿಳಿನಲ್ಲಿ ಕಲಿಯಬೇಕು. ನಾನು ಕನ್ನಡಿಗನಿರಬಹುದು ನಾನು ತಮಿಳುನಾಡಿನಲ್ಲಿ ಇದ್ದರೆ ತಮಿಳಿನಲ್ಲಿ ಕಲಿಯಬೇಕು. ತಮಿಳಿನವನೊಬ್ಬ ಕನ್ನಡನಾಡಿನಲ್ಲಿ ಇದ್ದರೆ ಕನ್ನಡದಲ್ಲಿ ಕಲಿಯಲಿ. ಯಾಕೆಂದರೆ ಇದು ಸಾರ್ವತ್ರಿಕವಾಗಿ ಒಬ್ಬ ಶಿಕ್ಷಣ ವೇದಿತನಾಗಿ ನಾನು ಹೇಳೋದು. ನಾನು ಸ್ಪೇನ್‌ನಲ್ಲಿದ್ದರೆ ಸ್ಪ್ಯಾನಿಷ್‌ನಲ್ಲಿ ಕಲಿಯಬೇಕು. ಏಕೆಂದರೆ ಇಡೀ ಬೀದಿಯಲ್ಲಿ ಸ್ಪ್ಯಾನಿಷ್ ಮಾತಾಡುತ್ತಾರೆ. ನನ್ನ ಮಗುಗೆ ಸ್ಪ್ಯಾನಿಷ್ ಬರದೇ ಇದ್ದರೆ?
ಇದನ್ನ ಹೆಂಗಸರು ಕಲಿತಿರುತ್ತಾರೆ, ಅವರು ಅಂಗಡಿಯಲ್ಲಿ ಸಾಮಾನು ತಗೋಬೇಕಾಗಿರೋತ್ತೆ. ಹಾಗಾಗಿ ಅವರು ಯಾವ ಭಾಷೆಯವರಾಗಿದ್ದರೂ ಸ್ವಲ್ಪ ಕನ್ನಡ ಕಲಿತಿರುತ್ತಾರೆ. ಆದರೆ ಈಗ ಬಹುರಾಷ್ಟ್ರೀಯ ಕಂಪನಿಗಳ ದೊಡ್ಡ ದೊಡ್ಡ ಮಾಲ್‌ಗಳು ಬರೋದಕ್ಕೆ ಶುರುವಾಗಿರೋದರಿಂದ ಆ ಅಗತ್ಯವೂ ಕೂಡ ಹೋಗಿ ಬಿಟ್ಟಿದೆ. ಈಗ ಹೆಂಗಸರು ಕೂಡ ಕನ್ನಡವನ್ನು ಕಲಿಯೋದಿಲ್ಲ. ಮಕ್ಕಳು ಕಲಿಯೋದಿಲ್ಲ. ಹಿಂದೆ ಹಾಗಲ್ಲ, ತರಕಾರಿಯವನ ಹತ್ತಿರ ವಾದ ಮಾಡೊದಕ್ಕೆ ಅವನು ೧೦ ರೂಪಾಯಿ ಅಂದರೆ ೫ ರೂಪಾಯಿಗೆ ಇಳಿಸೋದಕ್ಕೆ ಉತ್ತರ ಭಾರತದವರಿಗೂ ಕನ್ನಡ ಬರುತ್ತಿತ್ತು, ತಮಿಳರಿಗೂ ಕನ್ನಡ ಬರುತಿತ್ತು. ಈಗ ಕನ್ನಡದ ಅಗತ್ಯವೇ ಇಲ್ಲದಂತಹ ಸ್ಥಿತಿ ಬಂದಿದೆ. ಆದ್ದರಿಂದ ಇವತ್ತು ಹುಟ್ಟುವ ಮಕ್ಕಳಿಗೆಲ್ಲಾ ಎಷ್ಟು ಶ್ರೀಮಂತನ ಮಗುವಾಗಿರಲಿ, ಯಾವ ಭಾಷೆಯವನ ಮಗುವಾಗಿರಲಿ ಸಮಾನ ಶಿಕ್ಷಣ ಸಾಮಾನ್ಯ ಶಾಲೆಯಲ್ಲಿ ಸಿಗಬೇಕು. ಮನೆಮಾತಾಗಿ ಎಲ್ಲಾ ಭಾಷೆಗಳು ಉಳಿಯಬೇಕು.
ಕರ್ನಾಟಕದ ಒಂದು ಹೆಚ್ಚುಗಾರಿಕೆ ಏನು ಅಂಥ ನೀವು ನನ್ನ ಕೇಳಿದರೆ, ಬೇರೆ ಎಲ್ಲಾ ಭಾಷೆಗಳಿಗಿಂತಲೂ ಹೆಚ್ಚುಗಾರಿಕೆ ಏನಂದರೆ ನಾನು ಒಬ್ಬ ಬರಹಗಾರನಾಗಿ ನಿಮಗೆ ಹೇಳ್ತೀನಿ ಇವತ್ತು ಕನ್ನಡದ ಒಂದು ನಾವೆಲ್ ತಗೊಂಡರೆ, ಆ ನಾವೆಲ್‌ನನ್ನು ಒಬ್ಬ ಕೊಂಕಣಿ ಮಾತನಾಡುವವನು ಬರೆದಿದ್ದರೆ, ಈ ಯಶವಂತ ಚಿತ್ತಾಲರು ಅಂಥವರು ಬರೆದಿದ್ದರೆ ಅಲ್ಲಿರುವ ಪಾತ್ರಗಳೆಲ್ಲಾ ಮಾತನಾಡುತ್ತಿರುವುದು ಕೊಂಕಣಿಯಲ್ಲೇ. ಆದರೆ ಅದು ಬರೆದಿರುವುದು ಕನ್ನಡದಲ್ಲಿ. ಕೊಂಕಣಿ ಕನ್ನಡದಲ್ಲಿ ಸಾನ್ನಿಧ್ಯವನ್ನು ಪಡೆದಿದೆ. ಚೋಮನದುಡಿ ಬಹಳ ದೊಡ್ಡ ಕಾದಂಬರಿ ಕಾರಂತರದ್ದು. ಚೋಮನದುಡಿಯಲ್ಲಿ ಎಲ್ಲಾ ನಡೆಯುವ ಘಟನೆಗಳು, ಅಲ್ಲಿರುವ ಪಾತ್ರಗಳೆಲ್ಲಾ ಮಾತನಾಡುತ್ತಿರುವುದು ತುಳುವಿನಲ್ಲಿ, ಆದರೆ ಅದು ಇರೋದು ಕನ್ನಡದಲ್ಲಿ. ಮರಾಠಿ ಮಾತು ಕನ್ನಡದ ಒಳಗೆ ಬಂದಿದೆ. ತುಳುವಿನ ಮಾತು ಕನ್ನಡದ ಒಳಗೆ ಬಂದಿದೆ. ಕೊಂಕಣಿ ಮಾತು ಕನ್ನಡದ ಒಳಗೆ ಬಂದಿದೆ, ಅಂದರೆ ಕನ್ನಡ ಹಲವು ಭಾಷೆಗಳನ್ನ ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡಿದೆ. ಇದು ತಮಿಳಿನ ಬಗ್ಗೆ ಅಥವಾ ಮರಾಠಿ ಬಗ್ಗೆ ನಿಜವಲ್ಲ. ಇದು ಕನ್ನಡದ ಬಗ್ಗೆ ನಿಜ. ಆದ್ದರಿಂದ ಕನ್ನಡವನ್ನು ನಾನು ಮಿನಿ ಇಂಡಿಯಾ ಅಂತ ಕರೆಯುತ್ತೇನೆ. ನಿಜವಾಗಿಯೂ ನಾನು ಒಬ್ಬ ಭಾಷಾತಜ್ಞನಾಗಿ ಹೇಳ್ತಾ ಇದೀನಿ. ಒಂದು ಸರಿ ಈ ಚೋಮನ ದುಡಿ ತುಳುವಿಗೆ ಟ್ರಾನ್ಸ್‌ಲೇಟ್ ಆಯ್ತು. ಟ್ರಾನ್ಸ್‌ಲೇಟ್ ಆದಾಗ ನಾನು ಹೇಳಿದೆ, ಇದು ಮೂಲ ಭಾಷೆಗೆ ಹೋಯ್ತು ಅಂತ. ಮೂಲ ಇರುವುದು ತುಳುವಿನಲ್ಲಿ ಆದರೆ ಇರೋದು ಕನ್ನಡದಲ್ಲಿ. ಆದ್ದರಿಂದ ಈ ಕನ್ನಡಕ್ಕೆ ಇರುವ ವಿಶಿಷ್ಟತೆಯನ್ನ ಕನ್ನಡ ಚಳವಳಿಗಾರರು ಅರಿಯಬೇಕು. ಏಕೆಂದರೆ ಕನ್ನಡ ಒಳಗೊಳ್ಳುವ ಭಾಷೆ. ಇದನ್ನ ನನ್ನ ಸ್ನೇಹಿತರೊಬ್ಬರು ಬರೆಯುತ್ತಾರೆ. ಸಾವಿರ ವರ್ಷದ ಹಿಂದೆ ನಮ್ಮಲ್ಲಿ ಕವಿರಾಜಮಾರ್ಗ ಹುಟ್ಟಿಕೊಂಡಿತು.
ಸುಮಾರು ಒಂದು ಸಾವಿರ ವರ್ಷದ ಹಿಂದೆ ನಮ್ಮ ಭಾಷೆಯಲ್ಲಿ ಬರೆಯೋದೆ ಆದರೆ ಬರವಣಿಗೆ ಹೇಗಿರಬೇಕು, ಅದರ ಲಕ್ಷಣಗಳೇನು? ಎನ್ನುವ ಗ್ರಂಥ ಪ್ರಪಂಚದ ಯಾವ ಭಾಷೆಯಲ್ಲೂ ಇಲ್ಲ. ತಮಿಳಿನಲ್ಲೊಂದು ತೊಲಕಾಪಿಯಂ ಅಂತಿದೆ. ಆದರೆ ಆ ಗ್ರಂಥದ ಲಕ್ಷಣ ಬೇರೆ. ನಮ್ಮದು ಹೇಗೆ ಬರೆಯಬೇಕು ಅಂತಿದೆ, ಅದು ಕವಿರಾಜಮಾರ್ಗ; ಸಾವಿರ ವರ್ಷದ ಹಿಂದಿನದು. ನೀವು ಅದನ್ನು ತಗೊಂಡು ದೊಡ್ಡ ಸಭೆಯನ್ನು ಮಾಡಬೇಕು. ಕವಿರಾಜಮಾರ್ಗನಿಗೆ ಜೈ ಎನ್ನಬೇಕು. ಏಕೆಂದರೆ ಕನ್ನಡ ಕೊಟ್ಟವನು ಅವನು. ಆ ಸಾವಿರ ವರ್ಷ ಹಿಂದೆ ಹುಟ್ಟಿಕೊಂಡ ಕನ್ನಡದ ಬೆಳವಣಿಗೆ ಸತತವಾಗಿ ನಡೆದುಕೊಂಡು ಬಂದಿದೆ.
ಇವತ್ತು ಭಾರತೀಯ ಭಾಷೆಗಳಲ್ಲಿ ಅತ್ಯಂತ ಮೇಲಿರುವ ಭಾಷೆಗಳ ಪೈಕಿ ಕನ್ನಡವೂ ಒಂದು. ಹಿಂದೆ ಬಂಗಾಳಿಗೆ ಆ ಸ್ಥಾನವಿತ್ತು. ಈಗ ನಾವು ಹೆಚ್ಚು ಕಡಿಮೆ ಆ ಸ್ಥಾನದಲ್ಲಿದ್ದೇವೆ. ಏಕೆಂದರೆ ನಮ್ಮದು ಸ್ವೀಕಾರದ ಭಾಷೆ. ಆ ಸ್ವೀಕಾರದ ಭಾಷೆ ಅನ್ನೋದಕ್ಕೆ ಒಂದೇ ಒಂದು ಉದಾಹರಣೆ ಕೊಡುತ್ತೇನೆ. ತಮಿಳಿನಲ್ಲಿ ಕ್ಲಿಂಟನ್ ಅಂತ ಬರೆಯೋಕೆ ಆಗಲ್ಲ, ಗ್ಲಿಂಟನ್ ಆಗ್ತಾನೆ. ತಮಿಳಿನಲ್ಲಿ ಗಾಂಧಿ ಕಾಂತಿ ಆಗ್ತಾನೆ. ಕನ್ನಡದಲ್ಲಿ ಗಾಂಧಿ ಅಂತ ಬರೀಬಹುದು ಕ್ಲಿಂಟನ್ ಅಂತ ಬರಿಬಹುದು, ಯಾಕೆಂದರೆ ನಮಗೆ ಬೇಕಾಗಿಲ್ಲದ ಅಕ್ಷರಗಳನ್ನು ಮೊದಲೇ ತೆಗೆದುಕೊಂಡಿದ್ದೀವಿ. ಕನ್ನಡ ಭಾಷೆಯನ್ನ ಬರೆಯೋದಕ್ಕೆ ಅಗತ್ಯವಿಲ್ಲದ ಅಕ್ಷರಗಳೂ ಕೂಡ ನಮ್ಮ ೫೨ ಅಕ್ಷರದಲ್ಲಿ ಇದೆ.
ಆದ್ದರಿಂದ ಯಾವ ಭಾಷೆ, ಯಾವ ಶಬ್ದವನ್ನಾದರೂ ಕನ್ನಡದಲ್ಲಿ ಬರೆಯೋದಕ್ಕೆ ಸಾಧ್ಯ. ಇದು ಕನ್ನಡದ ಸ್ವೀಕಾರದ ಶಕ್ತಿಯನ್ನ ಹೆಚ್ಚಿಸಿದೆ. ನಾನು ಭಾಷೆಗಳಲ್ಲಿ ಎರಡು ತರಹ ಅಂತೀನಿ: ಒಂದು ಚಲಿಸುವ ಭಾಷೆ, ಇನ್ನೊಂದು ಚಲಿಸದ ಭಾಷೆ. ನಮ್ಮದು ಚಲಿಸುವ ಭಾಷೆಯಲ್ಲ. ಇದು ಕರ್ನಾಟಕಕ್ಕೆ ಸೀಮಿತವಾದದ್ದು. ಕೆಲವು ಭಾಷೆಗಳು ಊರಿಂದ ಊರಿಗೆ ಚಲಿಸುತ್ತಾ ಹೋಗುತ್ತವೆ. ಆದರೆ ಚಲಿಸದ ಭಾಷೆಯಾದರೂ ಕೂಡ ಕವಿರಾಜ ಮಾರ್ಗ ಕನ್ನಡದ ಕಾವೇರಿಯಿಂದ ಗೋದಾವರಿವರೆಗೂ ಹರಡಿ ಇಡೀ ಪ್ರಪಂಚದಲ್ಲೇ ಪ್ರತಿಫಲಿತವಾಗಿದೆ. ನಮ್ಮ ಗೋವಿನ ಹಾಡು ಬರೆದವರು ‘ಧರಣಿ ಮಂಡಲ ಮದ್ಯದೊಳಗೆ ಮೆರೆಯುತಿಹ ಕರ್ನಾಟಕದೊಳು ದೇಶವನು’ ಎಂದರು. ಅಂದರೆ ಪ್ರಪಂಚದ ನಡುವಿನಲಿ ಕರ್ನಾಟಕ ಇದೆ ಅಂತ. ಆ ರೀತಿಯ ಒಂದು ಭಾವನೆ ನಮ್ಮಲ್ಲಿದೆ.
ನಮ್ಮಲ್ಲಿ ನೊಬೆಲ್ ಪ್ರೈಜ್ ಬರುವಂತಹ ಯೋಗ್ಯತೆಯುಳ್ಳ ಬಹಳಷ್ಟು ರೈಟರ್ ಬಂದಿದ್ದಾರೆ. ಅವರಿಗೆ ಸಿಗದೆ ಇರೋದು ಮುಖ್ಯ ಅಂತ ನೀವು ತಿಳಿಯಬಾರದು. ಆ ಯೋಗ್ಯತೆ ಇರೋರು ಇದಾರಾ? ಇದ್ದಾರೆ. ಕನ್ನಡ ಬೆಳೆದಿದೆಯಾ ಬೆಳೆದಿದೆ. ಭಾರತದ ಬಹುಮುಖ್ಯ ಭಾಷೆಗಳಲ್ಲಿ ಒಂದಾ? ಹೌದು. ಹಾಗೆ ಉಳಿದಿದೆಯೋ ಇಲ್ಲೋ.. ಯಾಕೆಂದರೆ ನಮಗೆ ಕನ್ನಡ ಶಾಲೆಗಳಿಲ್ಲ. ನಾವೆಲ್ಲಾ ಕನ್ನಡ ಶಾಲೆಗಳಲ್ಲಿ ಓದಿ ಬಂದವರು, ನಾನು ಕನ್ನಡ ಮಾದ್ಯಮದಲ್ಲಿ ಓದಿದವನು. ಆಮೇಲೆ ಇಂಗ್ಲೆಂಡ್‌ನಲ್ಲಿ ಹೋಗಿ ಓದಿ ಬಂದವನು. ನಾನು ಇಂಗ್ಲೆಂಡ್‌ನಲ್ಲಿ ಇಂಗ್ಲಿಷ್ ಫ್ರೊಫೆಸರ್ ಆಗಬಹುದಾದಷ್ಟು ವಿದ್ಯೆಯನ್ನು ಪಡೆದವನು. ಇದು ಒಂದು ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಇದು ಸಾಧ್ಯವಿತ್ತು. ಮೂರ್ತಿರಾಯರು, ಬಿ.ಎಂ ಶ್ರೀಕಂಠಯ್ಯನವರಿದ್ದರು, ಮಾಸ್ತಿ ಅವರಿದ್ದರು, ಎಲ್ಲರೂ ಇದ್ದರು. ಇವತ್ತು ಅದು ಸಾಧ್ಯವೇ ಆಗದೆ ಇರೋ ಹಾಗೆ ಆಗ್ತಿದೆ. ಈ ತಪ್ಪಿಗೆ ಕಾರಣ ಬೇರೆ ಯಾರು ಅಲ್ಲ, ನಮ್ಮ ಅಭಿಮಾನ ಶೂನ್ಯತೆ. ನಮ್ಮ ಮಕ್ಕಳು ಕನ್ನಡವನ್ನು ಕನ್ನಡದಲ್ಲಿ ಬರೆಯಬೇಕು.
ನಾನು ಇಂಗ್ಲಿಷ್ ಕಲಿಯಿರಿ ಕನ್ನಡದಲ್ಲಿ ಕಲಿಸಿರಿ ಅಂದಿದ್ದೆ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಿರಿ ಅಂದಿದ್ದೆ. ಕನ್ನಡದಲ್ಲಿ ಕಲಿತಾಗ ಜ್ಞಾನ ಕೂಡ ಚೆನ್ನಾಗಿ ಬೆಳೆಯುತ್ತೆ. ಇನ್ನೊಂದು ಬಹಳ ಮುಖ್ಯವಾದ ವಿಷಯವನ್ನು ಹೇಳಿಬಿಡ್ತೀನಿ. ಆಮೇಲೆ ನನ್ನ ಮಾತು ಸಾಕು. ಇಲ್ಲಿ ಮನುಬಳಿಗಾರ್ ಇದ್ದಾರೆ. ಅವರಲ್ಲೂ ಕೂಡ ನಾನು ಸಂಕಟವನ್ನು ತೊಡಿಕೊಂಡಿದ್ದೇನೆ. ೮೦ ಎಕರೆ ಭೂಮಿಯನ್ನು ಕನ್ನಡ ವಿಶ್ವವಿದ್ಯಾಲಯದಿಂದ ಅವರು ತೆಗೆದುಕೊಂಡು ಬಿಟ್ಟಾಗ ಒಂದು ಚಳವಳಿ ಆಯ್ತು, ಆ ಚಳವಳಿಗೆ ನಿಜವಾಗಲು ಬೆನ್ನೆಲುಬಾಗಿ ನಿಂತವರು ಕರ್ನಾಟಕ ರಕ್ಷಣಾ ವೇದಿಕೆಯವರು. ಅದರ ಜೊತೆಯಲ್ಲೇ ನಾನು ಹೇಳಬೇಕು; ನಮ್ಮ ಮುಖ್ಯಮಂತ್ರಿಗಳು ಬಹಳ ದೊಡ್ಡ ಮನಸ್ಸು ಮಾಡಿ ಇದಕ್ಕೆ ಸ್ಪಂದಿಸಿ ೮೦ ಎಕರೆಯನ್ನು ಹಿಂದಕ್ಕೆ ಕೊಟ್ಟರು. ಅವರಿಗೆ ನಮ್ಮ ವಂದನೆಯನ್ನು ಹೇಳಬೇಕು. ಇದು ನಾನು ಯಾಕೆ ಹೇಳ್ತಿದೀನಿ, ಅಂದರೆ ಕನ್ನಡಕ್ಕೆ ಒಂದು ದನಿ ಇದೆ. ಅದನ್ನು ನಾವು ಉಳಿಸಿಕೊಳ್ಳಬೇಕು.
ನಾನು ಒಂದು ಮಾತು ಹೇಳಿ ಮುಗಿಸುತ್ತೇನೆ. ಕರ್ನಾಟಕದಲ್ಲಿ ಅಪಾರವಾದ ಆಸ್ತಿ ಇದೆ. ಅಂದರೆ ಅದನ್ನ ನಮ್ಮ ಗಣಿಗಾರಿಕೆ ಮಾಡುವ ನಮ್ಮ ಮಂತ್ರಿಗಳು ಸತತವಾಗಿ ಚೀಪಾಗಿ ಮಾರಿ, ಮೋಸ ಮಾಡಿ ಕನ್ನಡದ ಸಂಪತ್ತನ್ನೆಲ್ಲಾ ಲೂಟಿ ಮಾಡಿದ್ದಾರೆ. ಕನ್ನಡದ ಇಡೀ ಸಂಘಟನೆ ಇದಕ್ಕೆ ವಿರೋಧವಾಗಬೇಕು.
ಯಾಕೆ ಈ ಕರೆಯನ್ನು ನಾನು ಕೋಡುತ್ತಿದ್ದೇನೆ ಅಂದರೆ, ಲ್ಯಾಟಿನ್ ಅಮೆರಿಕದಲ್ಲಿ ನೀವು ಕೇಳಿರಬೇಕು ಕೆನಡಾ ಮತ್ತು ಅಮೆರಿಕದವರು ಗಣಿಗಾರಿಕೆ ಸಂಸ್ಥೆಗಳು ಪೆರುವಿನಲ್ಲಿ, ಚಿಲಿಯಲ್ಲಿ ಅವರ ಪ್ರತಿಯೊಂದು ಊರಿನಲ್ಲಿ ಎಲ್ಲಿ ಬಂಗಾರ ಸಿಗತ್ತೋ, ಪೆಟ್ರೋಲ್ ಸಿಗತ್ತೋ ಎಲ್ಲಿ ಯಾವ ಅದಿರು ಸಿಗತ್ತೋ ಅದನ್ನ ಅಗೆದು ಬಗೆದು ಅದನ್ನ ಚೀಪಾಗಿ ಮಾರಿ ಆ ದೇಶದಲ್ಲಿ ಜನ ವೇಶ್ಯಾವೃತ್ತಿಯಿಂದಲೇ ಬದುಕುವ ಹಾಗೆ ಮಾಡಿ ಅವರನ್ನ ದರಿದ್ರರನ್ನಾಗಿ ಮಾಡಿದ್ದಾರೆ. ಇವತ್ತು ಲ್ಯಾಟಿನ್ ಅಮೆರಿಕ ಮತ್ತೆ ತಲೆಎತ್ತಿ ನಿಂತು ಜಗಳವಾಡಕ್ಕೆ ಸಿದ್ಧವಾಗಿದೆ. ಲ್ಯಾಟಿನ್ ಅಮೆರಿಕದ ಇಡೀ ಸಂಸ್ಕೃತಿಯನ್ನ ಅಮೆರಿಕ ಮತ್ತು ಕೆನಡಾ ನಾಶ ಮಾಡಿತು. ಕರ್ನಾಟಕದ ಸಂಸ್ಕೃತಿಯನ್ನ ಇವತ್ತು ಗಣಿಗಾರಿಕೆಯವರು ನಾಶ ಮಾಡುತ್ತಿದ್ದಾರೆ. ನಮ್ಮ ಸಂಪತ್ತನ್ನ ನಾಶ ಮಾಡುತ್ತಿದ್ದಾರೆ. ಇನ್ನೊಂದು ೧೦ ವರ್ಷದಲ್ಲಿ ಏನು ಉಳಿದಿರೋಲ್ಲ.
ಇದನ್ನು ನಿಲ್ಲಿಸಬೇಕು. ನಮ್ಮ ಮೊಮ್ಮಕ್ಕಳಿಗೆ ಕನ್ನಡನೂ ಉಳಿಬೇಕು, ಗಣಿ ಅದಿರೂ ಸಹ ಉಳಿಬೇಕು ಅನ್ನೋದಾದರೆ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು. ಒಂದು, ಗಣಿಗಾರಿಕೆ ನಡೆಸುವುದು ಅಗತ್ಯವಾದರೆ ಅದನ್ನ ಸರ್ಕಾರವೇ ನಡೆಸಬೇಕು. ಎರಡನೇದು ಅನಿವಾರ‍್ಯವಾಗಿ ಗಣಿಗಾರಿಕೆ ಮಾಡಬೇಕಾಗಿ ಬಂದರೆ ನಾವೇ ಉಕ್ಕನ್ನು ತಯಾರಿಸುವ ಸಾಧ್ಯತೆಯನ್ನು ನೋಡಿಕೊಳ್ಳಬೇಕು. ಅಥವಾ ನಮಗೆ ಯಾವುದೋ ಒಂದು ಅದಿರು ಬೇಕಾಗಿರುತ್ತೆ, ಅದು ನಮ್ಮಲ್ಲಿ ಇಲ್ಲದಿದ್ದರೆ ನಮ್ಮ ಅದಿರನು ಕೊಟ್ಟು ಇನ್ನೊಂದು ಅದಿರನ್ನು ತೆಗೆದುಕೊಳ್ಳಬೇಕು. ಒಂದು ರಾಜ್ಯಕ್ಕೆ ನೈತಿಕವಾದ ಸ್ವಾರ್ಥವು ಇರಬೇಕು. ಇದು ನೈತಿಕವಾದ ಸ್ವಾರ್ಥದಿಂದ ನಾನು ಹೇಳುತ್ತಿದ್ದೇನೆ. ನಮ್ಮ ನಾಡು ಗಟ್ಟಿಯಾಗಿ ಉಳಿಯಬೇಕು ಅನ್ನುವ ಆಸೆಯಿಂದ ಹೇಳುತ್ತಿದ್ದೇನೆ. ಆದ್ದರಿಂದ ಇವತ್ತು ನಡೆಯುತ್ತಿರೋ ಗಣಿ ಲೂಟಿಯಿಂದ ನಮ್ಮ ಡೆಮಾಕ್ರಸಿ ಕೂಡ ಅರ್ಥಹೀನವಾಗಿ ಕೆಟ್ಟುಹೋಗಿದೆ. ನಮ್ಮ ಡೆಮಾಕ್ರಸಿಯನ್ನ ಮತ್ತೆ ನಾವು ಸ್ಕ್ಯಾನರ್ ಕೆಳಗೆ ಇಟ್ಟು ನೋಡಬೇಕಾಗುತ್ತೆ.
ನಕ್ಸಲೈಟರು ಅಲ್ಲಿ ವಿಜೃಂಭಿಸುತ್ತಿದ್ದಾರೆ ಯಾಕೆ ? ಅಲ್ಲೂ ಕೂಡ ಗಣಿಗಾರಿಕೆ, ಬಾಕ್ಸೈಟ್ ಅದಿರಿದೆ. ಅದು ಸಿಗೋದು ಗುಡ್ಡದಲ್ಲಿ ಹಾಗಾಗಿ ಗುಡ್ಡಗಳಲ್ಲಿ ಹೋಗಿ ಅಗೆಯಬೇಕು. ಆದ್ದರಿಂದ ಅಲ್ಲಿರುವ ಟ್ರೈಬಲ್ಸ್‌ನ ಅವರು ಓಡಿಸಬೇಕು. ಅವರು ಹೋಗಲ್ಲ ಅಂತಾರೆ, ಅಲ್ಲಿ ಹೋಗಿ ಇವರು ಕೂತಿದ್ದಾರೆ. ಯಾಕೆಂದರೆ ಅವರಿಗೆ ಆ ಬೆಟ್ಟಗಳು ದೇವತೆಗಳು. ನಾವು ಎಲ್ಲಾ ದೇವರನ್ನು ನಾಶಮಾಡುತ್ತಿದ್ದೇವೆ.
ಮುಸ್ಲಿಂರ ಮಸೀದಿಯನ್ನು ನಾಶ ಮಾಡಿದ್ರು.. ಸಿಕ್ಕರ ದೇವಸ್ಥಾನದ ಮೇಲೆ ದಾಳಿ ಆಯಿತು. ಈಗ ಆದಿವಾಸಿಗಳ ದೇವರನ್ನು ನಾಶ ಮಾಡಕ್ಕೆ ಹೊರಟಿದ್ದಾರೆ. ಆ ಹಕ್ಕು ನಮಗಿಲ್ಲ, ಅವರ ಜೀವನ ಕ್ರಮವನ್ನು ಬದಲಿಸುವ ಹಕ್ಕು ನಮಗಿಲ್ಲ. ಆದ್ದರಿಂದ ಪ್ರಪಂಚದಲ್ಲೆಲ್ಲಾ ಒಂದು ಎಚ್ಚರ ಇದೆ, ಅದು ಗಣಿಗಾರಿಕೆ ನಡೆಯುವುದು ಅನಿವಾರ‍್ಯವಾದರೆ ಅದು ಹೇಗೆ ನಡೆಯಬೇಕು, ಎಷ್ಟು ಶುದ್ಧವಾಗಿ ನಡೆಯಬೇಕು, ಯಾವ ಹದದಲ್ಲಿ ನಡೆಯಬೇಕು, ಯಾವ ಕಾರಣಕ್ಕಾಗಿ ನಡೆಯಬೇಕು. ಅದು ಎಷ್ಟು ಕಾಲ ಉಳಿದಿರಬೇಕು. ಇದೆಲ್ಲವನ್ನೂ ನಾವು ಯೋಚಿಸಬೇಕು. ಸಂಪತ್ತು ನಮ್ಮ ಮೊಮ್ಮಕ್ಕಳ ಕಾಲಕ್ಕೂ ಉಳಿದಿರೋ ಹಾಗೆ ನೋಡಬೇಕು.
ಅಮೆರಿದಲ್ಲಿ ಸಿಕ್ಕಾಪಟ್ಟೆ ಪೆಟ್ರೋಲ್ ಇದೆ. ಅವರು ಅದನ್ನು ತೆಗೆದು ಮಾರುತ್ತಾರೇನು? ಯಾಕೆಂದರೆ ಮುಂದೆ ಆಪತ್ತು ಕಾಲ ಬಂದರೆ ಅಂತ ಪೆಟ್ರೋಲ್ ಅನ್ನು ಉಳಿಸಿಕೊಂಡಿದ್ದಾರೆ. ಕರ್ನಾಟಕಕ್ಕೆ ಮತ್ತೆ ಆರೀತಿಯ ನೈತಿಕವಾದ ಸ್ವಾರ್ಥದ ಚಿಂತೆ ಬೇಕು. ಅದನ್ನ ಕನ್ನಡಿಗರು ಒತ್ತಾಯ ಮಾಡಿ ನಮ್ಮ ಸರ್ಕಾರದ ಮೇಲೆ ಹೇರಬೇಕು. ಕನ್ನಡ ಉಳಿಯುವುದೇ ಆದರೆ, ಕನ್ನಡದ ಅದಿರು ಉಳಿದಿರಬೇಕು, ಕನ್ನಡದ ಮಾನವು ಉಳಿದಿರಬೇಕು.
ಕೊನೆ ಮಾತು; ನಂದೊಂದು ಆಸೆ ಇದೆ, ಒಂದು ಕಾಲದಲ್ಲಿ ಕರ್ನಾಟಕದವರು ಗವರ್ನರ್‌ಗಳು ಆಗುತ್ತಿದ್ದರು, ಐಎಎಸ್ ಆಫೀಸರ್‌ಗಳಾಗುತ್ತಿದ್ದರು, ಹೀಗೆಲ್ಲಾ ಆಗೊದ್ರಿಂದ ಅಲ್ಲಿ ನಮ್ಮ ದೆಹಲಿಯಲ್ಲಿ ನಮ್ಮದೊಂದು ಶಕ್ತಿ ಇರುತ್ತೆ, ಬಲ ಇರುತ್ತೆ. ಈಗ ಬಿಹಾರ್‌ನವರಿಗೆ ಬಲ ಇದೆ, ನಮ್ಮ ಕೇರಳದವರಿಗೆ ಬಲ ಇದೆ, ತಮಿಳವರಿಗೆ ಬಲ ಇದೆ. ಕನ್ನಡದವರಿಗೆ ಬಲವೇ ಇಲ್ಲ. ನಮ್ಮ ಮಾತನ್ನು ಆಡುವವರು ಬಹಳ ಕಡಿಮೆ ಆಗಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚುವ ಹಾಗೆ ಮಾಡಬೇಕು. ಯಾಕೆಂದರೆ ಭಾರತ ಬಹು ಕೇಂದ್ರೀತ ರಾಷ್ಟ್ರ ಅಂದರೆ ಫೆಡರಲ್ ವ್ಯವಸ್ಥೆ ಇದೆ, ಈ ರಾಜ್ಯಕ್ಕೂ ಒಂದು ಬೆಲೆ ಬರಬೇಕು ಅಂದರೆ ಫೆಡರಲ್ ವ್ಯವಸ್ಥೆಯಲ್ಲಿ ನಮ್ಮವರು ದೆಹಲಿಯಲ್ಲಿ ಕೂಡ ಇರಬೇಕು. ಅದಕ್ಕೋಸ್ಕರವಾಗಿ ಈ ಸಂಘಟನೆ ಹೋರಾಡಲಿ, ಮತ್ತು ಬೇರೆ ಭಾಷೆಯ ಜನರನ್ನು ಕನ್ನಡಿಗರನ್ನಾಗಿ ಮಾಡುವ ಕೆಲಸ ಮಾಡಲಿ.
ಒಂದೇ ಒಂದು ಡೆಫನೇಷನ್ ಕನ್ನಡಿಗ ಅಂದರೆ ಕನ್ನಡ ಬಲ್ಲವನು ಕನ್ನಡಿಗ. ತಮಿಳಿನವನಿಗೆ ಕನ್ನಡ ಬಂದರೆ, ಅವನು ಕನ್ನಡ ಮಾತನಾಡಿದರೆ ಅವನು ಕನ್ನಡಿಗ. ಯಾವ ಭಾಷೆಯವನೇ ಆಗಲಿ ಕನ್ನಡ ಭಾಷೆ ಕಲಿತಕೂಡಲೇ, ಬಳಸೋದಕ್ಕೆ ಶುರು ಮಾಡಿದ್ರೆ ಅವನು ಕನ್ನಡಿಗ. ಆವಾಗ ಅನಗತ್ಯವಾದ ಹಿಂಸೆ ಯಾವುದು ಇರೋದಿಲ್ಲ. ಆದರೆ, ಕನ್ನಡ ಮಾತ್ರ ಕಡ್ಡಾಯ. ಅದು ನಮ್ಮ ಘೋಷಣೆ ಆಗಬೇಕು.
ಈ ಪತ್ರಿಕೆ ಬಹಳ ಚೆನ್ನಾಗಿ ಬಂದಿದೆ. ನನ್ನದೇ ಎರಡು ಲೇಖನ ಬಳಸಿಕೊಂಡಿದ್ದಾರೆ. ನಾರಾಯಣಗೌಡರು ಈ ಪತ್ರಿಕೆಯನ್ನು ತುಂಬಾ ಚೆನ್ನಾಗಿ ಸಿದ್ಧಪಡಿಸಿದ್ದಾರೆ. ಅದರ ಸಂಪಾದಕ ವರ್ಗದವರು ಬಹಳ ಚೆನ್ನಾಗಿ ದುಡಿದಿದ್ದಾರೆ. ಇದು ಪ್ರತಿ ತಿಂಗಳು ಬಂದು ಕನ್ನಡದವರನ್ನು ಬರೀ ಹೋರಾಟಕ್ಕೆ ಮಾತ್ರ ಎಚ್ಚರಿಸದೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಕೂಡ ಮೂಡಿಸುವಂತಹ ಕೆಲಸವನ್ನು ಮಾಡಲಿ ಅಂತ ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಜೈ ಕರ್ನಾಟಕ.
ಡಾ.ಯು.ಆರ್.ಅನಂತಮೂರ್ತಿ

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿಮ್ಮ ಮುಂದೇ

ಇಂದಿನ (28-07-2010)ಲೇಖನಗಳು


ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿಮ್ಮ ಮುಂದೇ

ಇಂದಿನ (27-07-2010)ಲೇಖನಗಳು

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿ
ಮ್ಮ ಮುಂದೇ  
ಇಂದಿನ (26-07-2010)ಲೇಖನಗಳು



ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿ
ಮ್ಮ ಮುಂದೇ
ಇಂದಿನ (25-07-2010)ಲೇಖನಗಳು


ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿಮ್ಮ ಮುಂದೇ
ಇಂದಿನ (೨೪-೦೭-೨೦೧೦)ಲೇಖನಗಳು


ನಮ್ಮ ಬೆ೦ಗಳೂರು

ರಾಜಧಾನಿ ಬೆ೦ಗಳೂರಿನ ಜನಸ್ತೋಮದ ವಿಶಿಷ್ಟ ಜೀವನ ಶೈಲಿ ಹಾಗೂ ಸದಾ ಚಟುವಟಿಕೆಗಳಿ೦ದ ಕೂಡಿದ ನಗರದ ಆಡ೦ಭರವು ಸೇರಿ ಉದ್ಯಾನ ನಗರಿಗೆ ಭಾರತದಲ್ಲಿ ಪ್ರತ್ಯೇಕ ಸ್ಥಾನ ದೊರಕಿದೆ. ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಉನ್ನತ ಶಿಕ್ಷಣವನ್ನೋ, ಕೆಲಸವನ್ನೋ ಅರಿಸಿ ಬ೦ದವರಿಗೆ ಇಲ್ಲಿನ ತಾ೦ತ್ರಿಕತೆಯ ಅರಿವಾಗಲು ೧ ವರ್ಷವೇ ಬೇಕು. ಸೂಕ್ಷ್ಮ ಗ್ರಹಣ ಶಕ್ತಿ ಉಳ್ಳವರು ಇಲ್ಲಿನ ಜನರನ್ನು ಅವರವರ ವ್ಯವಹಾರಕ್ಕನುಗುಣವಾಗಿ ಸುಲಭವಾಗಿ ಪ್ರತ್ಯೇಕಿಸಬಹುದು ಮತ್ತು ಅವರ ನಡೆ ನುಡಿಗಳನ್ನು ಊಹಿಸಬಹುದು.



ಜನ ಸಾಮಾನ್ಯರು : ಬೆಳಗಿನ ಹೊತ್ತು ಅಪ್ಪಿತಪ್ಪಿ ನೀವೆಲ್ಲಾದರೂ ನಿಮ್ಮ ಸ್ಕೂಟರಿನ ಹೆಡ್ ಲೈಟ್ ಉರಿಸುತ್ತಾ ಹೋದಲ್ಲಿ ಹತ್ತಾರು ಸಮಾಜ ಸೇವಕರು ಕೈ, ಕಾಲು ಏನೇನೋ ಅಡ್ಡ ಹಾಕಿ ನಿಮ್ಮ ಗಮನ ಸೆಳೆದು ನಡು ರಸ್ತೆಯಲ್ಲಿ ಅಭಿನಯಪೂರಿತ ಕಲಾತ್ಮಕ ಏಕಪಾತ್ರಾಭಿನಯವೊ೦ದನ್ನು ನಟಿಸಿ ಸ೦ಜ್ನಾ ಭಾಷೆಗಳಿ೦ದಲೇ ಲೈಟ್ ಆರಿಸಲು ಇನ್ನಿಲ್ಲದ೦ತೆ ಪ್ರೇರೇಪಿಸುತ್ತಾರೆ. ಹೆಡ್ ಲೈಟ್ ಆರಿದ ಕೂಡಲೇ ಯಾವುದೋ ಭಯಾನಕ ಅನಾಹುತ ತಪ್ಪಿಸಿದ ತ್ರಪ್ತಿಯೊ೦ದಿಗೆ ಸ೦ತಸದಿ೦ದ ಹಿ೦ದಿರುಗುವುದನ್ನು ನೋಡಬಹುದು. ಇದೇ ಆಸಕ್ತಿ, ರಾತ್ರಿ ಹೊತ್ತಿನಲ್ಲಿ ಹೆಡ್ ಲೈಟ್ ಇಲ್ಲದೇ ಅಪಾಯಕಾರಿಯಾಗಿ ಓಡಾಡುವ ವಾಹನಗಳನ್ನು ಎಚ್ಚರಿಸುವಲ್ಲಿ ಸುತಾರಾ೦ ಇಲ್ಲವಾದುದು ವಿಚಿತ್ರ ! ದಾರಿಹೋಕನೊಬ್ಬ ಯಾವುದೋ ಸ್ಥಳಕ್ಕೆ ಹೋಗುವ ದಾರಿ ಕೇಳಿದಾಗ ಎಲ್ಲಿಲ್ಲದ ಕರ್ತವ್ಯ ಪ್ರಜ್ನೆ ಕಾಡಿ, ಆತನಿಗೆ ಹತ್ತು ಹಲವು ಬಾರಿ ದಾರಿ ತೋರಿಸಿ, ಸ೦ಪೂರ್ಣ ಮನವರಿಕೆ ಆದ ಮೇಲೆ ಲಘುವಾಗಿ ಬೆನ್ನು ತಟ್ಟಿ ಕಳಿಸುತ್ತಾರೆ. "ಈ ಬಸ್ ಬನಶ೦ಕರಿ ಹೋಗತ್ತಾ ? " ಎ೦ದು ಪ್ರಯಾಣಿಕರಲ್ಲಿ ಕೇಳಿದರೆ ಆ ಬಸ್ ಓಡಡುವ ಇಡೀ ಮಾರ್ಗದ ನೀಲ ನಕ್ಷೆಯನ್ನೇ ನಿಮ್ಮ ಮು೦ದಿಡುತ್ತಾರೆ.



ಬಿ.ಎ೦.ಟಿ.ಸಿ. ಬಸ್ ಕ೦ಡಕ್ಟರ್ : ಬಸ್ ಸ್ವಲ್ಪ ಖಾಲಿಯಾಗಿದ್ದು ಕ೦ಡಕ್ಟರುಗಳಿಗೆ ಸ್ವಲ್ಪ ಬಿಡುವಿನ ವೇಳೆ ದೊರೆತಾಗ ಕೆಲವೊಮ್ಮೆ ಕುಚೋದ್ಯದಲ್ಲಿ ತೊಡಗುತ್ತಾರೆ. ಯಾವನೋ ಬೇರೆ ರಾಜ್ಯದ ಕನ್ನಡ ಬಾರದ ಪುಣ್ಯಾತ್ಮನೊಬ್ಬ ಸಿಕ್ಕರೆ ನಾಲ್ಕಾರು ಕನ್ನಡಿಗ ಪ್ರಯಾಣಿಕರ ವಿಶ್ವಾಸ ಸ೦ಪಾದಿಸಿ ಹೊರರಾಜ್ಯದನು ಕನ್ನಡ ಕಲಿಯದಿದ್ದುದೇ ಅಪರಾಧವೆ೦ದು ನಿರ್ಧರಿಸಿ ಕಾಲೇಜು ಹುಡುಗರ೦ತೆ ರಾಗಿ೦ಗ್ ಮಾಡುವುದನ್ನು ನೋಡಬಹುದು. ತಮ್ಮತಮ್ಮಲ್ಲೇ ಸ್ಪರ್ಧೆ ಏರ್ಪಟ್ಟು ಹೊರ ರಾಜ್ಯದವನ ಮೇಲೆ ಹಾರಿಸಿದ ಯಾರ ಹಾಸ್ಯ ಚಟಾಕಿ ಇತರರನ್ನು ಅತಿ ಹೆಚ್ಚು ನಗಿಸಿತೋ ಅವನೇ ಕನ್ನಡದ ಕುವರ, ನ೦ಬರ್ ವನ್ ಕನ್ನಡಾಭಿಮಾನಿ ಎ೦ದು ಹಿಗ್ಗುತ್ತಾರೆ. ಇನ್ನು ಟಿಕೆಟ್ ಕೊಟ್ಟು, ಉಳಿದ ಚಿಲ್ಲರೆ ಹಣ ತಮ್ಮ ಚೀಲದೊಳಗಿದ್ದರೂ ಆಮೇಲೆ ಕೊಡುವುದಾಗಿ ಭರವಸೆ ನೀಡಿ , ಟಿಕೆಟ್ ಹಿ೦ದೆ ಯಾರಿಗೂ ಅರ್ಥವಾಗದ ಲಿಪಿಯಲ್ಲಿ ಏನೇನೋ ಗೀಚಿ ಮಾಯವಾಗುತ್ತಾರೆ. ನೂರಾರು ಸ೦ಖ್ಯೆಯಲ್ಲಿ ಪ್ರಯಾಣಿಸುವಾಗ ಒಬ್ಬಿಬ್ಬರಾದರೂ ಮೆರೆತೇ ಮರೆಯುತ್ತಾರೆ. ಅಲ್ಲದೆ ಹೀಗೆ ಭರವಸೆ ನೀಡಿ ಹೋದ ಕ೦ಡಕ್ಟರ್ ಅಸಾಮಿ ಬೇಕೆ೦ದೆಲೇ ಕಣ್ಣು ತಪ್ಪಿಸಿ ಮಹಿಳೆಯರ ಗು೦ಪಿನಲ್ಲಿ ಲೀನವಾಗುತ್ತಾರೆ೦ಬ ಗುಮಾನಿ ನನಗೆ ! ಇನ್ನೊ೦ದು ಸರ್ವೇ ಸಾಮಾನ್ಯ ಉಪಾಯವೆ೦ದರೆ, ಸರಿಯಾದ ಜನ ನೋಡಿ ಟಿಕೆಟೇ ಕೊಡದೆ ನ್ಯಾಯ ಸಮ್ಮತವಾದ ಬೆಲೆಯೊ೦ದನ್ನು ನಿರ್ಧರಿಸಿ ಆ ಹಣವನ್ನು ಕೊ೦ಡು ಪ್ರಯಾಣಿಸಲು ಅನುಮತಿ ನೀಡುವುದು. ಇದು ಮಾತ್ರ ಸ್ವಲ್ಪ ಕಲಾತ್ಮಕವಾದ ವಹಿವಾಟು. ಎಲ್ಲಾ ಕಣ್ಣಲ್ಲೇ ಮುಗಿಯತಕ್ಕದ್ದು. ಮಾತಿಗೆ ಅವಕಾಶವಿಲ್ಲ. ಹೆಚ್ಚಾಗಿ ರಾತ್ರಿ ಹೊತ್ತು ಒ೦ದೋ ಎರಡೋ ಸ್ಟಾಪ್ ಪ್ರಯಾಣಿಸುವ ಪ್ರಯಾಣಿಕರಿ೦ದ ಈ ಲಾಭ ನಿರೀಕ್ಷಿಸಬಹುದು. ಸಾಮಾನ್ಯವಾಗಿ ಪ್ರಯಾಣಿಕರೇ ವ್ಯವಹಾರ ಶುರು ಮಾಡುತ್ತಾರೆ. ಸುಮ್ಮನೆ ಒ೦ದೋ ಎರಡೋ ರುಪಾಯಿ ಕೊಟ್ಟು ಪರ್ಸ್ ತೆಗೆದು ಇನ್ನೂ ಹಣ ಹುಡುಕುತ್ತಿರುವ೦ತೆ ನಟಿಸಬೇಕು. ೧೦-೧೫ ಸೆಕೆ೦ಡ್ ಬಳಿಕ ಕಣ್ಣೆತ್ತಿ ನೋಡಿದಾಗ ಕ೦ಡಕ್ಟರ್ ಅಲ್ಲಿ ಇಲ್ಲವೋ ವ್ಯಾಪರ ಮುಗಿಯಿತು ಎ೦ದರ್ಥ. ಇದ್ದರೆ ಪೂರ್ತಿ ಹಣ ನೀಡಿ ಟಿಕೇಟ್ ಕೊ೦ಡು ಮಾನ ಕಾಪಾಡಿಕೊಳ್ಳಬೇಕು. ಕೆಲವೊಮ್ಮೆ ಕ೦ಡಕ್ಟರುಗಳೇ ಪ್ರಾಮಾಣಿಕ ಪ್ರಯಾಣಿಕನೊಬ್ಬ ಸರಿಯಾದ ಹಣ ಕೊಟ್ಟರೂ ಅದರಲ್ಲೇ ಸ್ವಲ್ಪ ಹಿ೦ದಿರುಗಿಸಲು ಹೋದಾಗ "ಏಯ್ ಟಿಕೆಟ್ ಕೊಡಪ್ಪಾ ಸುಮ್ನೆ" ಎ೦ದಾಗ ಪೆಚ್ಚಾಗಿ ಹಿ೦ದಿರುಗುವುದೂ ಉ೦ಟು.



ಇ೦ಗ್ಲೀಷ್ ಪ್ರಭಾವ : ನೋಡಲು ಸ್ವಲ್ಪ ವಿದ್ಯಾವ೦ತರ೦ತೆ ಕ೦ಡರೆ ಅಥವಾ ಹೆಣ್ಣು ಮಕ್ಕಳನ್ನು ಕ೦ಡರೆ (ಹೇಗೆ ಕ೦ಡರೂ ಚಿ೦ತೆಯಿಲ್ಲ), ಕಸ್ಟಮರ್ ಕೇರ್ ನಿ೦ದ ಹಿಡಿದು ಆಟೋ ಡ್ರೈವರುಗಳೂ ತಮ್ಮ ಇ೦ಗ್ಲೀಷ್ ಪಾ೦ಡಿತ್ಯ ಪ್ರದರ್ಷಿಸಲು ಹಾತೊರೆಯುತ್ತಾರೆ. ಕತ್ತಿಗೆ ಯಾವುದೋ ಕ೦ಪೆನಿಯ ಗುರುತಿನ ಚೀಟಿ ನೇತು ಹಾಕಿದ್ದರೆ ಮುಗಿದೇ ಹೋಯ್ತು. ಮಧ್ಯಮ ವರ್ಗದ ವ್ಯಾಪಾರಿ ಮಳಿಗೆಯಲ್ಲಿ "ಸರ್ ವಾಟ್ ಈಸ್ ಯುವರ್ ಸೈಜ್ , ಪ್ಲೀಸ್ ಟ್ರೈ ದಿಸ್ .. ಟಸ್.. ಪುಸ್" ಹೀಗೇ ಏನೇನೋ ಪುರಾಣ ಬಿಚ್ಚುತ್ತಾರೆ. ನೀವು ಎಷ್ಟೇ ಕನ್ನಡದಲ್ಲಿ ಪ್ರಶ್ನಿಸಿದರೂ, ಅಲ್ಲಿನ ಇ೦ಗ್ಲೀಷ್ ವಾತಾವರಣ ಕಾಯ್ದುಕೊಳ್ಳಲು ಹಸೀ ಸುಳ್ಳುಗಳನ್ನು ಹೇಳುತ್ತಾ ಪದೇ ಪದೇ ಇ೦ಗ್ಲೀಷ್ ನಲ್ಲೇ ಉತ್ತರಿಸುವುದನ್ನು ನೋಡಬಹುದು. ಇನ್ನೇನು ಸರ್ಕಾರಿ ವ್ರತ್ತಿಯಿ೦ದ ನಿವ್ರತ್ತಿ ಹೊ೦ದಲಿರುವ ಹಿರಿಯ ನಾಗರಿಕರಲ್ಲೂ ಈ ಇ೦ಗ್ಲೀಷ್ ಚಪಲ ಸಾಮಾನ್ಯ. ತಮ್ಮ ಮಕ್ಕಳ ಸ್ನೇಹಿತರನ್ನು ಮೊದಲ ಬಾರಿಗೆ ಮನೆಗೆ ಕರೆತ೦ದರೆ, ಆತ ಇಲ್ಲೇ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಲೋಕಲ್ ಹುಡುಗನೆ೦ದು ಗೊತ್ತಿದ್ದರೂ ಉಭಯ ಕುಶಲಗಳೆಲ್ಲ ಇ೦ಗ್ಲಿಷಿನಲ್ಲಾದರೇ ಕಳೆ. ಸ್ವಲ್ಪ ಉನ್ನತ ವರ್ಗದ ಸ್ಕೂಲುಗಳಿಗೆ ಹೋಗುವ ಮಕ್ಕಳು ಮನೆಯಲ್ಲೂ "ವ್ಹಾಟ್ ಡಾ , ಕಮ್ ಡಾ , ಗೋ ಡಾ, ಬೀಡಾ ಜರ್ದ .. " ಎ೦ದು ಇ೦ಗ್ಲೀಷ್ ಮಾತಾಡುವುದನ್ನು ನೋಡಬಹುದು. ಇದಕ್ಕೆ ತ೦ದೆ ತಾಯಿಯರೇ ಪ್ರೋತ್ಸಾಹಿಸುವುದು ಆಘಾತಕಾರಿ ಸ೦ಗತಿ.



ಆಟೋ ರಿಕ್ಷಾ : ಹೊಸದಾಗಿ ಬೆ೦ಗಳೂರಿಗೆ ಬರುವ ಜನರನ್ನು ಗುರುತಿಸುವ ವಿಶೇಷ ವಿದ್ಯೆ ನಮ್ಮ ಆಟೋ ಚಾಲಕರಿಗೆ ವರದಾನವಾಗಿದೆ. ಬೆಳಗಿನ ಹೊತ್ತು ಯಶವ೦ತಪುರ, ರಾಜಾಜಿನಗರ, ನವರ೦ಗ್ ಹೀಗೆ ಅನೇಕ ಕಡೆಗಳಲ್ಲಿ ಪ್ರಯಾಣಿಕರು ಇಳಿಯುವುದನ್ನು ಸಾಲುಗಟ್ಟಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಕಾಯುವ೦ತೆ ಕಾಯುತ್ತಿರುತ್ತಾರೆ. ಸರಿ ... ದಕ್ಷಿಣ ಕನ್ನಡ, ಉತ್ತರ ಕನ್ನಡ , ಚಿಕ್ಕ ಮ೦ಗಳೂರು ಇತರ ಕಡೆಗಳಿ೦ದ ಬರುವ ವಯೋವ್ರದ್ಧ ದ೦ಪತಿಗಳು ಅಥವಾ ಮುಖದಲ್ಲಿ ಗೊ೦ದಲ ತೋರ್ಪಡಿಸುವ ಯಾವುದೇ ವರ್ಗದ ವ್ಯಕ್ತಿಯನ್ನು ಹಿಡಿದು ಮಕ್ಕಳಿಗೆ ಚಾಕ್ ಲೇಟ್ ಆಸೆ ತೋರಿಸುವ ರೀತಿ ಇವರನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ನಿಷ್ಕಾರಣವಾಗಿ "ಸರ್ ಫ್ಲೈ ಓವರ್ ಮೇಲೆ ಹೋಗ್ಲಾ ಕೆಳಗೆ ಹೋಗ್ಲಾ , ಯು ಟರ್ನ್ ತಗೋಳ್ಳಾ , ವಿ ಟರ್ನಾ .. , ರಸ್ತೆ ಮೇಲ್ ಹೋಗ್ಲಾ ಹಾರ್ಕೊ೦ಡ್ ಹೋಗ್ಲಾ ..." ಹೀಗೇ ಅಸ೦ಭದ್ದ ಪ್ರಶ್ನೆಗಳ ಸರಣಿ ಪೋಣಿಸುತ್ತಾರೆ. ಇದ್ಯಾವುದರ ಅರಿವೂ ಇಲ್ಲದ ಪ್ರಯಾಣಿಕ, ಸ್ಥಳದ ಬಗ್ಗೆ ತನಗಿರುವ ಮಾಹಿತಿ ಶೂನ್ಯ ಎ೦ದು ಮುಚ್ಚಿಡಲು ಏನೇನೋ ಹೇಳಿ ಕೊನೆಗೆ ಇಡೀ ಬೆ೦ಗಳೂರು ತಿರುಗಿ ಮನೆ ತಿಲುಪುತ್ತಾರೆ. ಒಮ್ಮೊಮ್ಮೆ ಕೇವಲ ೨-೩ ಕಿಲೋಮೀಟರ್ ದೂರಕ್ಕೆ ೫೦ರಿ೦ದ ೧೦೦ ರೂಪಾಯಿ ಕೇಳುವುದಕ್ಕಿ೦ತ ಅವರು ಕೊಡುವ ಕಾರಣಗಳು ಹಾಸ್ಯಾಸ್ಪದ. "ವಾಪಾಸ್ ಬರೋವಾಗ ಒಬ್ನೇ ಬರ್ಬೇಕು , ರಸ್ತೆ ಸರಿಯಿಲ್ಲ , ಜಾಗ ಸೆರಿಯಿಲ್ಲ , ಟೈಮ್ ಸರಿಯಿಲ್ಲ.." ಇತ್ಯಾದಿ ಇತ್ಯಾದಿ... ರಾತ್ರಿ ೧೦:೦೦ ಘ೦ಟೆ ಮೇಲೆ ೧.೫ ಚಾರ್ಜ್ ಆದರೂ ಸುಮಾರು ೯ಕ್ಕೇ ಈ ಸ್ವಯ೦ ಘೋಷಿತ ಕಾಯಿದೆ ಜಾರಿಗೆ ತರುತ್ತಾರೆ. ಐಡೆ೦ಟಿಟಿ ಕಾರ್ಡ್ ನೇತು ಹಾಕಿದ ಇ೦ಜಿನಿಯರುಗಳು ಸಿಕ್ಕರೆ ಹಬ್ಬ. ಹುಚ್ಚಾಪಟ್ಟೆ ಹಣ ಕೇಳಿ ಕೊನೆಗೆ ನಿಗದಿತ ಹಣಕ್ಕಿ೦ತ ಅರ್ಧಕ್ಕೆ ಚೌಕಾಶಿ ಮುಗಿದರೂ ಲಾಭ !



ಇ೦ಜಿನಿಯರಿ೦ಗ್ ವಿಧ್ಯಾರ್ಥಿಗಳು : ಬೇರೆ ಜಿಲ್ಲೆಯಿ೦ದ ಇ೦ಜಿನಿರಯರಿ೦ಗ್ ಓದಲು ಪ್ರತಿ ವರ್ಷ ಸಾವಿರಾರು ವಿಧ್ಯಾರ್ಥಿಗಳು ಬೆ೦ಗಳೂರಿಗೆ ಬರುವುದು ಸಾಮಾನ್ಯ ಸ೦ಗತಿ. ಹೀಗೆ ವಿವಿಧ ಜಿಲ್ಲೆಗಳಿ೦ದ ಕಲಿಕೆಯನ್ನೇ ಪ್ರಥಮ ಆದ್ಯತೆಯೆ೦ದು ನ೦ಬಿ ಬ೦ದ ಮುಗ್ಧ, ಸರಳ ವಿಧ್ಯಾರ್ಥಿಗಳಿಗೆ "ಗಾ೦ಧಿ" ಎ೦ಬ ಬಿರುದನ್ನು ನೀಡಿ "ಗೌರವಿ"ಸಲಾಗುತ್ತದೆ. ಈ ಗಾ೦ಧಿಗಳೇ ಮು೦ದೆ ೧-೨ ವರ್ಷ ಕಳೆದ ಮೇಲೆ ನಾಥೂರಾಮ್ ಗೋಡ್ಸೆಗಳ ಗು೦ಡಿಗೆ ಬಲಿಯಾಗಿ ತಮ್ಮ ಹವ್ಯಾಸಗಳ ವ್ಯಾಪ್ತಿಯನ್ನು ನಿಧಾನವಾಗಿ ವ್ರದ್ಧಿಸುತ್ತಾರೆ. ಪರೀಕ್ಷೆಗಳು ಮುಗಿಯುತ್ತಿದ್ದ೦ತೆ "ಬಾರೋ ಮಗಾ ಎಣ್ಣೆ ಹೋಡಿಯೋಣ" ಎ೦ಬ ಸರ್ವೇ ಸಾಮಾನ್ಯ ಡೈಲಾಗಿನೊ೦ದಿಗೆ ಸಮೀಪದ ಹಡಬಿಟ್ಟಿ ಡಾಭಾಗಳಿಗೆ ಕರೆದೊಯ್ಯುವುದು ಸಾಮನ್ಯ. ವರ್ಷವಿಡೀ ಕನಸು ಕಾಣುತ್ತಾ ಇನ್ನೇನು ಪರೀಕ್ಷೆಗೆ ೧ ವಾರ ಮಾತ್ರ ಇದೆ ಎನ್ನುವಾಗ ಊಟ, ನಿದ್ರೆ ಎಲ್ಲವನ್ನೂ ತ್ಯಜಿಸಿ ಹೇಗಾದರೂ ಪಾಸ್ ಆಗುವತ್ತ ತಮ್ಮ ಗಮನ ಕೇ೦ದ್ರೀಕರಿಸುತ್ತಾರೆ.



ಸಾಫ್ಟ್ ವೇರ್ ಇ೦ಜಿನಿಯರ್ಸ್ : ಲಕ್ಷಾ೦ತರ ಸ೦ಖ್ಯೆಯಲ್ಲಿರುವ ಈ ಸಾಫ್ಟ್ ವೇರ್ ಇ೦ಜಿನಿಯರ್ ಗಳ ಜೀವನ ಶೈಲಿಯಲ್ಲಾಗುವ ಹಠಾತ್ ನಾಟಕೀಯ ಬದಲಾವಣೆ ಮಾತ್ರ ಗಮನಾರ್ಹ. ಇ೦ಜಿನಿಯರಿ೦ಗ್ ಓದುವಾಗ ಫೈಲ್ ಆಗಿ ನಾಲಾಯಕ್ ಎನಿಸಿಕೊ೦ಡರೂ ಕೇರ್ ಮಾಡದವನು, ಕೆಲಸಕ್ಕೆ ಸೇರಿ ಕೆಲವೇ ದಿನಗಳಲ್ಲಿ ಆಕಾಶ ಕಳಚಿ ಬಿದ್ದ೦ತೆ ಏನೋ ಕಳವಳ, ತಳಮಳ. ಜೀವನಾಸಕ್ತಿ ಕಡಿಮೆಯಾಗಿ, ನಾಸ್ತಿಕರೆಲ್ಲ ಒಮ್ಮೆಲೇ ಆಸ್ತಿಕರಾಗಿ, ಲೌಕಿಕ ವಿಷಯಗಳಲ್ಲಿ ನ೦ಬಿಕೆ ಹೆಚ್ಚುತ್ತದೆ. ಇದ್ದಕ್ಕಿದ್ದ೦ತೆ ಕಲೆ, ಸ೦ಗೀತ, ಸಾಹಿತ್ಯ, ಭಾಷೆ, ಹಳೆಯ ಭಾವಗೀತೆ, ನಿಸರ್ಗ, ಚಾರಣ, ಸಮಾಜ ಸೇವೆ, ಛಾಯಾಗ್ರಹಣ ಹೀಗೇ ಯಾವ್ಯಾವುದೋ ವಿಷಯದ ಮೇಲೆ ರಾತ್ರೋ ರಾತ್ರಿ ಅಭಿಮಾನ ಉಕ್ಕಲು ಶುರುವಾಗುತ್ತದೆ. ಮುಖದಲ್ಲಿ ಹಿ೦ದೆ೦ದೂ ಇಲ್ಲದ ಗಾ೦ಭೀರ್ಯ. ಹಿ೦ದೆ೦ದಿಗಿ೦ತಲೂ ಹೆಚ್ಚು ಹಣ ಕೈಲಿದ್ದರೂ ಅನಾವಶ್ಯಕವಾದ ಆರ್ಥಿಕ ದುರ್ಭಲತೆ ಕಾಡುವುದು, "ಲೈಫೇ ಬೇಜಾರು" ಎನ್ನುವ ಮಾತುಗಳು, ಏನೋ ಕಳೆದುಕೋಳ್ಳುತ್ತಿರುವ ಭಯ.. ಇವೆಲ್ಲಾ ಚಿತ್ತ ಸ್ವಸ್ತ ಇ೦ಜಿನಿಯರ್ ನ ಗುಣಲಕ್ಷಣಗಳು. ಆದರೆ ಹೊರ ಸಮಾಜದಲ್ಲಿ ಇವರಿಗಾಗಿ ವಿಶೇಷ ಸ್ಥಾನ ಮಾನಗಳನ್ನು ಕಾಯ್ದಿರಿಸಲಾಗಿದೆ. ಅದರಲ್ಲೂ "ವಿಪ್ರೋ , ಇನ್ಫೋಸಿಸ್, ಟಿ.ಸಿ.ಎಸ್" ಈ ೩ ಕ೦ಪೆನಿಯ ಉದ್ಯಮಿಗಳು ದುಡ್ದನ್ನು ಕಪ್ಪೆ ಚಿಪ್ಪು ಎಣಿಸಿದ೦ತೆ ಇಟ್ಟಿರುತ್ತಾರೆನ್ನುವ ಭಾವನೆ !!



ಕಾಳ ಸ೦ತೆ : ಹಲವಾರು ಕಾಳಸ೦ತೆಗಳಲ್ಲಿ ಪ್ರಮುಖವಾದುವೆ೦ದರೆ ನ್ಯಾಷನಲ್ ಮಾರ್ಕೆಟ್, ಸ೦ಡೇ ಬಜಾರ್, ಮೆಜೆಸ್ಟಿಕ್. ಇಲ್ಲಿನ ವ್ಯಾಪಾರ ಶೈಲಿ ತಿಳಿದವರ ಒ೦ದು ವ್ಯೂಹವೇ ಇದೆ. ಒ೦ದಕ್ಕೆ ನಾಲ್ಕು ರೇಟು ಹೇಳಿ ಹೊಸ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಸಕಲ ಪ್ರಯತ್ನಗಳನ್ನೂ ಮಾಡುತ್ತಾರೆ. ಪೋಲೀಸರೊ೦ದಿಗೆ ಕೈ ಕೈ ಜೋಡಿಸಿ ನಕಲಿ ಸಿ.ಡಿ. , ದುಬಾರಿ ಇಲೆಕ್ಟ್ರಾನಿಕ್ ಉಪಕರಣಗಳು, ಬಟ್ಟೆ, ಬ್ಯಾಗು ಹೀಗೆ ಕಣ್ಣಿಗೆ ಕ೦ಡದ್ದನ್ನೆಲ್ಲಾ ಲಪಟಾಯಿಸಿ ಇಲ್ಲಿ ತ೦ದು ಅಗ್ಗದ ಬೆಲೆಗೆ ಮಾರುತ್ತಾರೆ. ಹೊಸಬ ಬ೦ದರೆ, ವಿಶೇಷವಾಗಿ ಬೇರೆ ಜಿಲ್ಲೆಯ ಕನ್ನಡ ಮಾತಾಡುತ್ತಾ ಬ೦ದರೆ ೧೦೦ ರೂಪಾಯಿಗೆ ೪೦೦ ರೂ. ಬೆಲೆ ಕಟ್ಟಿ , ಕೊನೆಗೆ ೨೦೦ ಕ್ಕೆ ವ್ಯಾಪಾರ ಕುದುರಿಸಿ, ಜನಗನಮನ ಎ೦ದು ಬಿಡುತ್ತಾರೆ. ಸ೦ಡೇ ಬಜಾರ್ ನ ಗಮ್ಮತ್ತೇ ಬೇರೆ. ಇಲ್ಲಿ ಸಿಗದ ವಸ್ತುವೇ ಇಲ್ಲ. ಎಲ್ಲವೂ ಕದ್ದು ತ೦ದ ಅಥವಾ ಗುಜರಿ ಸಾಮಾನುಗಳೇ. ನೀವು ಊಹಿಸಲೂ ಸಾಧ್ಯವಾಗದ ಬೆಲೆಗೆ ಕೊಡುತ್ತಾರೆ. ಕ೦ಪ್ಯೂಟರನ್ನು ೨೦೦೦ ಕ್ಕೆ... ೨೦೦ ರೂಪಾಯಿಗೆ ಕ್ಯಾಮರಾ ಇತ್ಯಾದಿ. ಆದರೆ ಇದು ಸುಸ್ಥಿತಿಯಲ್ಲಿದೆ ಎ೦ಬ ಭರವಸೆ ಯಾರೂ ಕೊಡುವುದಿಲ್ಲ. ಯಾರೂ ನಿರೀಕ್ಷಿಸುವುದೂ ಇಲ್ಲ ! ಕೆಲವು ಐಟಮ್ ಗಳಿಗ೦ತೂ ಮಣ್ಣು, ಸಗಣಿ ಏನೇನೋ ಮೆತ್ತಿಕೊ೦ಡು ಅದೇನೆ೦ದು ಗುರುತಿಸಲೂ ಸಾಧ್ಯವಾಗದ ಕರುಣಾಜನಕ ಸ್ಥಿತಿಯಲ್ಲಿರುತ್ತದೆ.



ಸ೦ಸ್ಕ್ರತ ಪಾ೦ಡಿತ್ಯ : ಬೇರೆನನ್ನಲ್ಲದಿದ್ದರೂ ಬೆ೦ಗಳೂರು ನಿಮಗೆ "ಸ೦ಸ್ಕ್ರತ ಭಾಷಾ ಪಾ೦ಡಿತ್ಯ"ವನ್ನು ಸ೦ಪಾದಿಸಿ ಕೊಡುತ್ತದೆ ! ಇದಿಲ್ಲದೆ ಇಲ್ಲಿ ಬದುಕುವುದೂ ಕಷ್ಟ ! ಸಭ್ಯವಾಗಿ ಕಿತ್ತಾಡುವುದನ್ನು ಬಿಟ್ಟು, ಕ್ಷುಲ್ಲಕ ಕಾರಣಗಳಿಗೆ ಅವಾಚ್ಯ ಶಬ್ಧಗಳನ್ನೂ, "ಅಮ್ಮ, ಅಪ್ಪ, ಅಕ್ಕ"೦ದಿರನ್ನೂ ಮಧ್ಯ ತರುತ್ತಾರೆ. ಕೈ ಕೈ ಮಿಲಾಯಿಸಿ ಗುದ್ದಾಡುವುದು ಅಪರೂಪವಾದರೂ, ಅಶ್ಲೀಲ ಶಬ್ಧಗಳಿ೦ದ ಕೂಡಿದ ನಿಘ೦ಟೊ೦ದನ್ನೇ ಬಿಚ್ಚಿ ಬಿಡುತ್ತಾರೆ. ಅನ್ಯರಿಗಾದರೆ ಕನಿಷ್ಠ ಶೇಖಡಾ ೭೦ % ವಾದರೂ ಅರ್ಥವೂ ಆಗದ ಜಟಿಲ ಪದಗಳು. ಬೇರೆ ಪ್ರದೇಷಗಳಲ್ಲಿ ಕಟುವಾಗಿ ಬಯ್ಯುವಾಗ ಮಾತ್ರ ಬಳಸುವ "ಬಡ್ಡಿ ಮಗ .. ಆ ಮಗ .. ಈ ಮಗ"ದ೦ತಹ ಪದಗಳನ್ನು ಇಲ್ಲಿ ಗೌರವ ಸೂಚಿಸುವಾಗ ಉಪಯೋಗಿಸುವ ಮಟ್ಟಕ್ಕೆ ಹೋಗಿದೆ ! ನಾಲ್ಕು ಜನರ ಮಧ್ಯ, ಹೋಗುತ್ತಿರುವ ತನ್ನ ಮಾನ ಕಾಪಾಡಿಕೊಳ್ಳಲು ಇರುವುದು ಒ೦ದೇ ದಾರಿ. ತನಗೂ ಸ೦ಸ್ಕ್ರತ ತಿಳಿದಿದೆ ಎ೦ದು ತೋರಿಸಿಕೊಡುವುದು !



ಇವೆಲ್ಲಾ ಏನೇ ಆದರೂ ನಿಸ್ಸ೦ದೇಹವಾಗಿ ಜೀವನಕ್ಕೆ ಅಗತ್ಯವಾದ ಅನೇಕ ಅಮೂಲ್ಯ ಪಾಠಗಳನ್ನು ಬೆ೦ಗಳೂರು ಕಲಿಸುತ್ತದೆ. ಇಲ್ಲಿನ ಮಾನವ ಸ೦ಪನ್ಮೂಲವೇ ಯಶಸ್ಸಿಗೆ ಕಾರಣವೆ೦ಬುದೂ ಸತ್ಯ

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು


  ಪ್ರತಿ ದಿನ ನಿಮ್ಮ ಮುಂದೇ
 

ಇಂದಿನ (೨೩-೦೭-೨೦೧೦)

ಲೇಖನಗಳು





ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಇಂದಿನಿಂದ ನಿಮ್ಮ ಮುಂದೇ ಪ್ರತಿ ದಿನ

ಇಂದಿನ (೨೨-೦೭-೨೦೧೦)ಲೇಖನಗಳು




ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

      ಇಂದಿನಿಂದ ನಿಮ್ಮ ಮುಂದೇ ಪ್ರತಿ ದಿನ 
ಇಂದಿನ ಲೇಖನಗಳು ಕರ್ನಾಟಕದ ರಾಜಕೀಯ ಆಗ ಮತ್ತು ಈಗ, ಮತ್ತು


ಗಣಿ ಧೂಳಿನಿಂದ ಎದ್ದಿರುವುದೇನು?



ಶ್ರೀಯುತ ಯಡಿಯೂರಪ್ಪನವರೆ,
ಬಳ್ಳಾರಿ ರೆಡ್ಡಿಗಳ ಬಗ್ಗೆ, ಗಣಿ ಲೂಟಿಯ ಬಗ್ಗೆ ವಿಶೇಷವಾಗಿ ನಾವು ಏನನ್ನೂ ಹೇಳಬೇಕಾಗಿಲ್ಲ. ಬಹುಶಃ ಇದೊಂದು ವಿಷಯದಲ್ಲಿ ನಾವು ಹೇಳಿದ್ದಕ್ಕೆಲ್ಲ ನೀವು ಸರಿ ಎನ್ನುತ್ತೀರೇನೋ?
ನೀವೇ ಒಮ್ಮೆ ಹೇಳಿದ್ದಿರಿ. ‘ ಈ ರಾಜ್ಯದ ಗಣಿ ಸಂಪತ್ತು ಪ್ರತಿನಿತ್ಯ ಲೂಟಿಯಾಗುತ್ತಿದೆ. ನಿತ್ಯವೂ ಕೋಟಿಗಟ್ಟಲೆ ಹಣ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಈ ಅನ್ಯಾಯವನ್ನೂ ನೋಡಿಯೂ ಏನನ್ನೂ ಮಾಡಲಾಗದೆ ಅಸಹಾಯಕನಾಗಿದ್ದೇನೆ’ ಎಂದಿದ್ದಿರಿ ನೀವು.
ನೀವು ಹೇಳಿದ್ದು ಅಕ್ಷರಶಃ ಸತ್ಯ. ಲೋಕಾಯುಕ್ತರು ನಿಮಗೆ ನೀಡಿದ ಅಕ್ರಮ ಗಣಿಗಾರಿಕೆ ಕುರಿತ ವರದಿಯೂ ಅದನ್ನೇ ಹೇಳುತ್ತದೆ. ಗಣಿ ರೆಡ್ಡಿಗಳು ಕರ್ನಾಟಕದ ಗಡಿಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಗಡಿರೇಖೆಯನ್ನೇ ಅಳಿಸಿದ ಮಹಾಪ್ರತಾಪಿಗಳು ಅವರು.
ನೀವು ಅವರ ಜತೆ ಜಗಳಕ್ಕೆ ಬಿದ್ದಿರಿ. ಅವರು ತಮ್ಮ ಪೌರುಷ ತೋರಿಸಿಕೊಂಡರು. ಇನ್ನೇನು ಯಡಿಯೂರಪ್ಪ ಕುರ್ಚಿ ಬಿಟ್ಟು ಎದ್ದರು ಎಂದು ನಾವೆಲ್ಲ ಅಂದುಕೊಳ್ಳುವ ಹೊತ್ತಿಗೆ ಅದೇನು ಒಪ್ಪಂದಗಳಾದವೋ ಏನೋ, ನೀವು ಸುಷ್ಮಾ ಸ್ವರಾಜ್ ನಿವಾಸದಲ್ಲಿ ರಾಜಿ ಮಾಡಿಕೊಂಡಿರಿ. ಅಡ್ವಾಣಿಯವರಿಗೆ ಒಟ್ಟಿಗೆ ಹೋಗಿ ಸಿಹಿ ತಿನ್ನಿಸಿ ಬಂದಿರಿ. ಅದುವರೆಗೆ ನಿಮ್ಮನ್ನು ಬೈದುಕೊಂಡು ಓಡಾಡುತ್ತಿದ್ದ ಜನಾರ್ದನರೆಡ್ಡಿ ಇದ್ದಕ್ಕಿದ್ದಂತೆ ಬಳ್ಳಾರಿಯ ಕಾರ್ಯಕ್ರಮದಲ್ಲಿ ನಿಮ್ಮನ್ನು ಅಭಿನವ ಕೃಷ್ಣದೇವರಾಯ ಎಂಬ ಅರ್ಥದಲ್ಲಿ ಮಾತನಾಡಿದರು. ವಿಜಯನಗರ ಕಾಲದ ವೈಭವವನ್ನು ಮರುಕಳಿಸುತ್ತಿರುವ ಮಹಾನ್ ಮುಖ್ಯಮಂತ್ರಿ ನೀವು ಎಂದು ಬಣ್ಣಿಸಿದರು. ನೀವೂ ಸಹ ಭಾವಪರವಶರಾಗಿ ನಾವೆಲ್ಲರೂ ಒಂದಾಗಿದ್ದೇವೆ, ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗದ್ಗದಿತರಾಗಿ ನುಡಿದಿರಿ.
ಹೀಗೆ ಪರಸ್ಪರ ಬೈದಾಡಿಕೊಂಡವರು ರಾಜಿಯಾದರಲ್ಲ, ಯಾವ ಹಿತಾಸಕ್ತಿ ಈ ರಾಜಿಯಲ್ಲಿ ಅಡಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ರೆಡ್ಡಿಗಳ ನಿಲುವಿಗೆ ವಿರುದ್ಧವಾಗಿ ನೀವು ವರ್ಗಾವಣೆ ಮಾಡಿದ್ದ ಬಳ್ಳಾರಿ ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಮತ್ತದೇ ಸ್ಥಾನಗಳಿಗೆ ಮರುಸ್ಥಾಪಿಸಿದಿರಿ. ಅವರ ತಾಳಕ್ಕೆ ತಕ್ಕಂತೆ ನೀವು ವರ್ತಿಸಿದಿರಿ.
ನಿಮ್ಮ ಮುಖ್ಯಮಂತ್ರಿ ಕುರ್ಚಿ ಹೋದರೂ ಚಿಂತೆಯಿಲ್ಲ, ಬಳ್ಳಾರಿಯಲ್ಲಿ ನಡೆಯುತ್ತಿರುವ ಗಣಿ ಲೂಟಿ ಇನ್ನು ಮೇಲಾದರೂ ನಿಲ್ಲುತ್ತದೆ ಎಂದು ಈ ರಾಜ್ಯದ ಮಾನವಂತ ಜನರು ನಿರೀಕ್ಷಿಸಿದ್ದರು. ಇನ್ನೇನು ಯಡಿಯೂರಪ್ಪ ಗಣಿ ಹಗರಣಗಳ ಕುರಿತಾಗಿ ಸಿಬಿಐ ತನಿಖೆಗೆ ಕೋರಿ ಆಂಧ್ರಪ್ರದೇಶ ಮುಖ್ಯಮಂತ್ರಿಯ ಮಾದರಿಯಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ ಎಂದು ರಾಜಕೀಯ ಪಂಡಿತರು ಭಾವಿಸಿದ್ದರು. ಆದರೆ ಹಾಗಾಗಲೇ ಇಲ್ಲ. ರಾಜಕಾರಣದ ಕೊಳಕು ಸಾಧ್ಯತೆಗಳೆಲ್ಲ ಅನಾವರಣಗೊಳ್ಳುವುದನ್ನು ನಾವೆಲ್ಲ ಮೂಕವಿಸ್ಮಿತರಾಗಿ ನೋಡಿದೆವು.
ಇವತ್ತು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಬಯಲು ಮಾಡಿದ ಕಾರವಾರ ಬಂದರಿನಿಂದ ಮಾಯವಾದ ಕಬ್ಬಿಣದ ಅದಿರಿನ ವಿವಾದವೊಂದೇ ಸಾಕು, ಈ ರಾಜ್ಯದಲ್ಲಿ ನಡೆಯುತ್ತಿರುವ ಗಣಿ ಸಂಪತ್ತಿನ ಲೂಟಿಯ ಆಳ-ಅಗಲವನ್ನು ಅಂದಾಜು ಮಾಡಬಹುದು. ಎಲ್ಲರಿಗಿಂತ ಹೆಚ್ಚು ಸ್ಪಷ್ಟವಾಗಿ ಅದು ನಿಮಗೆ ಗೊತ್ತಿದೆ. ಆದರೆ ನಿಮಗೆ ಕುರ್ಚಿ ಮೇಲೆ ಆಸೆ. ಹೀಗಾಗಿ ಮತ್ತೆ ಗಣಿ ರೆಡ್ಡಿಗಳನ್ನು ಎದುರು ಹಾಕಿಕೊಳ್ಳಲಾರಿರಿ. ಯಾವ ವರದಿ ಬಂದರೇನು? ಯಾವ ನ್ಯಾಯಾಲಯ ತೀರ್ಪು ಕೊಟ್ಟರೇನು? ರಕ್ಷಣೆಗೆ ನೀವಿರುವಾಗ ಬಳ್ಳಾರಿ ರೆಡ್ಡಿಗಳನ್ನು ತಡೆಯುವವರ‍್ಯಾರು?
ಬಳ್ಳಾರಿಯಲ್ಲಿ ಈಗ ಧೂಳೋ ಧೂಳು. ಅಲ್ಲಿ ಬೆಟ್ಟಗಳನ್ನು ಕಡಿದು ಪಾತಾಳದವರೆಗೆ ಅಗೆಯಲಾಗುತ್ತಿದೆ. ಪ್ರಕೃತಿಯ ಮೇಲೆ ನಿರಂತರ ಅತ್ಯಾಚಾರ. ಅಲ್ಲಿನ ಜನರಿಗೆ ಈಗಾಗಲೇ ಚಿತ್ರವಿಚಿತ್ರ ಖಾಯಿಲೆಗಳು. ಬಳ್ಳಾರಿಯ ಧೂಳಿನಿಂದ ಹೆಲಿಕಾಪ್ಟರ್‌ಗಳು ಏಳುತ್ತವೆ, ಕೋಟಿಧಣಿಗಳು ಇನ್ನೊಂದಷ್ಟು ಜಿಲ್ಲೆಗಳನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳು ಹರಸಾಹಸ ನಡೆಸುತ್ತಿದ್ದಾರೆ.
ಡಾ.ಯು.ಆರ್.ಅನಂತಮೂರ್ತಿಯವರು ಪದೇ ಪದೇ ಲ್ಯಾಟಿನ್ ಅಮೆರಿಕಾದ ಉದಾಹರಣೆ ಕೊಡುತ್ತಾರೆ. ಅಲ್ಲಿ ಮೈನಿಂಗ್ ಸಂಸ್ಥೆಗಳು ಅಲ್ಲಿನ ಎಲ್ಲ ಸಂಪನ್ಮೂಲಗಳನ್ನು ಲೂಟಿ ಹೊಡೆದು, ಅಲ್ಲಿನ ಜನರನ್ನು ವೇಶ್ಯಾವಟಿಕೆಗೆ ತಳ್ಳಿದ್ದವು.
ಕರ್ನಾಟಕದಲ್ಲೂ ಇಂಥ ದುರಂತಗಳು ಸಂಭವಿಸಬೇಕಾ ಯಡಿಯೂರಪ್ಪನವರೇ? ಎರಡು ವರ್ಷಗಳ ಅವಧಿಯಲ್ಲಿ ಮೈನಿಂಗ್ ಮಾಫಿಯಾ ಈ ಪರಿಯಲ್ಲಿ ಬೆಳೆಯಲು ಅವಕಾಶ ನೀಡಿದ್ದು ನಿಮ್ಮ ಸಾಧನೆಯೇ?