ಕರ್ನಾಟಕ ರಕ್ಷಣಾ ವೇದಿಕೆಯ ಸಾರ್ಥಕ ಹತ್ತು ದಶಕದ ಒಂದು ನೋಟ

ಕರ್ನಾಟಕ ರಕ್ಷಣಾ ವೇದಿಕೆಗೆ ಈಗ ಹತ್ತು ವರ್ಷ. ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸಿದ್ದನ್ನು ವಿರೋಧಿಸಿ ಕನ್ನಡ ಕಟ್ಟಾಳುಗಳು ನಡೆಸಿದ ಹೋರಾಟವೇ ಕರವೇ ಉದಯಕ್ಕೆ ಮುನ್ನುಡಿಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಸಾರ್ಥಕ ಹತ್ತು ವರ್ಷಗಳನ್ನು ಪೂರೈಸಿದ ಹೆಮ್ಮೆ ಕರ್ನಾಟಕ ರಕ್ಷಣಾ ವೇದಿಕೆಯದ್ದು.
ಹತ್ತು ವರ್ಷಗಳ ಹಿಂದೆ ಕನ್ನಡಪರ ಚಳವಳಿ ದಿಕ್ಕಿಲ್ಲದಂತಾಗಿತ್ತು. ಕನ್ನಡದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಡುವ ನೂರಾರು ಸಂಘಟನೆಗಳು ಇದ್ದವು ಎಂಬುದೇನೋ ನಿಜ. ಆದರೆ ಬಿಡಿಬಿಡಿಯಾದ ಹೋರಾಟಗಳು ಪರಿಣಾಮದ ದೃಷ್ಟಿಯಿಂದ ಸೋಲುತ್ತಿದ್ದವು. ಹೀಗಾಗಿ ಒಗ್ಗಟ್ಟಾದ ಹೋರಾಟ ಅನಿವಾರ್ಯತೆಯಿತ್ತು. ಇಂಥ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿ ರೂಪುಗೊಂಡಿದ್ದು ಕರ್ನಾಟಕ ರಕ್ಷಣಾ ವೇದಿಕೆ.
ಕನ್ನಡತನವೇ ಸಿದ್ಧಾಂತ
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಘೋಷವಾಕ್ಯದೊಂದಿಗೆ ಚಳವಳಿಯ ಕಣಕ್ಕೆ ಇಳಿಯಿತು. ‘ಕನ್ನಡವಿಲ್ಲದ ಸ್ವರ್ಗ ನನಗೆ ನರಕ ಸಮಾನ, ಕನ್ನಡವಿರುವ ನರಕ ನನಗೆ ಸ್ವರ್ಗ ಸಮಾನ’ ಎಂದು ಹೇಳಿದ ಮಹಾಕವಿ ಕುವೆಂಪು ಅವರೇ ಸಂಘಟನೆಗೆ ಆದರ್ಶ ಪುರುಷ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂಬುದು ವೇದಿಕೆಯ ಪ್ರಬಲ ಘೋಷಣೆಯಾಗಿ ಮೊಳಗಿತು. ಕನ್ನಡದ ಶತ್ರುಗಳೆಲ್ಲ ನಮ್ಮ ಶತ್ರುಗಳು ಎಂಬಂತೆ ಕರವೇ ಸಮರಾಂಗಣಕ್ಕೆ ಇಳಿಯಿತು. ಅದರ ಪರಿಣಾಮವಾಗಿ ಕನ್ನಡ ಚಳವಳಿಯ ಕ್ಷೇತ್ರದಲ್ಲಿ ಹೊಸ ಅಲೆಯೇ ಸೃಷ್ಟಿಯಾಯಿತು. ಕರ್ನಾಟಕದಲ್ಲಿ ಕನ್ನಡಿಗನೇ ಅಸಹಾಯಕನಾಗಿದ್ದ ಸನ್ನಿವೇಶದಲ್ಲಿ ತಮ್ಮ ನೆಲದಲ್ಲಿ ಆಗುತ್ತಿದ್ದ ಅನ್ಯಾಯಗಳ ವಿರುದ್ಧ ಜೀವದ ಹಂಗು ತೊರೆದು ಹೋರಾಡಲು ವೀರ ಕನ್ನಡಿಗರ ಪಡೆಯೇ ಸೃಷ್ಟಿಯಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಟಿ.ಎ.ನಾರಾಯಣಗೌಡರು ಅಧಿಕಾರ ವಹಿಸಿಕೊಂಡ ನಂತರ ಇಡೀ ರಾಜ್ಯಾದ್ಯಂತ ಹೊಸ ಸಂಚಲನವೇ ಮೂಡಿತು. ಹಳೆ ಮೈಸೂರು ಪ್ರಾಂತ್ಯದಲ್ಲಿ ಆಗಷ್ಟೆ ಬೇರುಬಿಡುತ್ತಿದ್ದ ಸಂಘಟನೆಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಿದ್ದು ನಾರಾಯಣಗೌಡರು. ಅವರ ಚುಂಬಕ ವ್ಯಕ್ತಿತ್ವಕ್ಕೆ ಮನಸೋತು ನಾಡಿನ ಲಕ್ಷಾಂತರ ಕಾರ್ಯಕರ್ತರು ರಕ್ಷಣಾ ವೇದಿಕೆಯೆಡೆಗೆ ಆಕರ್ಷಿತರಾದರು. ಪರಿಣಾಮವಾಗಿ ರಾಜ್ಯದಲ್ಲಿ ಹೊಸ ಕನ್ನಡ ಶಕ್ತಿ ಉದಯವಾಯಿತು. ಕನ್ನಡಿಗರ ಹತ್ತು ಹಲವು ಸಮಸ್ಯೆಗಳಿಗೆ ಉತ್ತರಗಳು ದಕ್ಕಿದವು. ಕನ್ನಡ ವಿರೋಧಿಗಳ ಅಟ್ಟಹಾಸ ತಕ್ಕಮಟ್ಟಿಗೆ ಅಡಗಿತು. ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಗರ ದೌರ್ಜನ್ಯವನ್ನು ಮಟ್ಟಹಾಕಲಾಯಿತು. ಕನ್ನಡದ ಜನತೆ ನಾರಾಯಣಗೌಡರಲ್ಲಿ ಹೊಸ ನಾಯಕನನ್ನು ಗುರುತಿಸಿತು.
ಉದ್ಯೋಗದ ಹೋರಾಟ
ಕನ್ನಡ ಚಳವಳಿ ಬಹುತೇಕ ಸಂದರ್ಭಗಳಲ್ಲಿ ಭಾವನಾತ್ಮಕ ವಿಷಯಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬದುಕಿನ ಸಮಸ್ಯೆಗಳನ್ನು ಕೈಗೆತ್ತಿಕೊಂಡಿತು. ಕನ್ನಡಿಗರಿಗೆ ಸರ್ಕಾರಿ, ಅರೆಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರೆಯಬೇಕು ಎಂಬುದು ರಕ್ಷಣಾ ವೇದಿಕೆಯ ಪ್ರಧಾನ ಉದ್ದೇಶವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು, ಕಛೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ತೀವ್ರ ಸ್ವರೂಪದ ಹೋರಾಟಗಳನ್ನು ಸಂಘಟಿಸಿತು.
ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ದೊರೆಯದಂಥ ಸಂದರ್ಭ ಸೃಷ್ಟಿಯಾಗಿದ್ದಾಗ ಅದರ ವಿರುದ್ಧ ಕರವೇ ಸೆಟೆದು ನಿಂತಿತು. ಕರ್ನಾಟಕಕ್ಕೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಮಂದಿ ಉದ್ಯೋಗ ಅರಸಿಕೊಂಡು ಬಂದಿದ್ದರ ಪರಿಣಾಮವಾಗಿ ಕನ್ನಡಿಗರಿಗೆ ಉದ್ಯೋಗ ದೊರೆಯಲು ಕಷ್ಟಸಾಧ್ಯವಾಯಿತು. ಈ ಅನಿಯಂತ್ರಿತ ವಲಸೆಗೆ ರಾಜಕಾರಣಿಗಳು ಪ್ರಮುಖ ಕಾರಣ. ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ನಮ್ಮ ಜನಪ್ರತಿನಿಧಿಗಳು ವಲಸಿಗರನ್ನು ಓಲೈಸತೊಡಗಿದ್ದರು (ಈಗಲೂ ಓಲೈಸುತ್ತಾರೆ). ಇಂಥ ಸನ್ನಿವೇಶದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕದ ಹೊರತು ಕನ್ನಡಿಗರ ಸಮಸ್ಯೆಗಳು ಪರಿಹಾರವಾಗದು ಎಂಬುದನ್ನು ಕರ್ನಾಟಕ ರಕ್ಷಣಾ ವೇದಿಕೆ ಮನಗಂಡಿತ್ತು. ಹೀಗಾಗಿ ಉದ್ಯೋಗದ ಹೋರಾಟವನ್ನು ಕರವೇ ತನ್ನ ಬಹುಮುಖ್ಯ ಆದ್ಯತೆಯನ್ನಾಗಿ ಗುರುತಿಸಿತ್ತು. ಎಜಿ ಕಛೇರಿಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸುತ್ತಿದ್ದ ರೀತಿಯನ್ನು ವಿರೋಧಿಸಿ ನಡೆದದ್ದೇ ಕರ್ನಾಟಕ ರಕ್ಷಣಾ ವೇದಿಕೆಯ ಮೊದಲ ಹೋರಾಟ. ಈ ಮೊದಲ ಹೋರಾಟದಲ್ಲೇ ವೇದಿಕೆಗೆ ಜಯ ಲಭಿಸಿತು. ಕಳೆದ ಹತ್ತು ವರ್ಷಗಳಲ್ಲಿ ಇಂಥ ನೂರಾರು ಹೋರಾಟಗಳನ್ನು ವೇದಿಕೆ ಸಮರ್ಥವಾಗಿ ಮುನ್ನಡೆಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಟ್ಟಿದೆ.
ರೈಲ್ವೆ ಹೋರಾಟ
ಕರ್ನಾಟಕ ರಕ್ಷಣಾ ವೇದಿಕೆಯ ಯಶಸ್ವಿ ಹೋರಾಟಗಳಲ್ಲಿ ಬಹುಮುಖ್ಯವಾದುದು ರೈಲ್ವೆ ಹೋರಾಟ. ಕಳೆದ ಆರು ದಶಕಕ್ಕೂ ಹೆಚ್ಚು ಕಾಲ ಕೇಂದ್ರದ ರೈಲ್ವೆ ಇಲಾಖೆ ಕನ್ನಡಿಗರನ್ನು ವಂಚಿಸಿಕೊಂಡೇ ಬಂದಿದೆ. ರೈಲ್ವೆ ಇಲಾಖೆಯಲ್ಲಿ ಇಷ್ಟು ವರ್ಷಗಳ ಕಾಲ ಕನ್ನಡಿಗರಿಗೆ ಆದ್ಯತೆಯ ಮೇರೆ ಉದ್ಯೋಗ ಕೊಡುವಂತಹ ವಾತಾವರಣವೇ ಇರಲಿಲ್ಲ. ಸಿ.ಕೆ.ಜಾಫರ್ ಷರೀಫ್ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಕನ್ನಡಿಗರಿಗೆ ಉದ್ಯೋಗ ದೊರಕಿದ್ದನ್ನು ಹೊರತುಪಡಿಸಿದರೆ ಆರು ದಶಕಗಳಲ್ಲಿ ಇಲಾಖೆಗೆ ಕನ್ನಡಿಗರ ಸೇರ್ಪಡೆ ನಗಣ್ಯವಾಗಿತ್ತು. ಕರ್ನಾಟಕದ ರೈಲ್ವೆ ಸ್ಟೇಷನ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸ್ಟೇಷನ್ ಮಾಸ್ಟರ್ ಹುದ್ದೆಯಿಂದ ಹಿಡಿದು ಗ್ಯಾಂಗ್‌ಮನ್ ಗಳವರೆಗೆ ಎಲ್ಲರೂ ಪರಭಾಷಿಕರೇ ಆಗಿದ್ದಾರೆ. ಅದರಲ್ಲೂ ವಿಶೇಷವಾಗಿ ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಿಂದ ಬಂದವರೇ ಕರ್ನಾಟಕದಲ್ಲಿ ಉದ್ಯೋಗ ಹಿಡಿದಿದ್ದಾರೆ.
ದುರಂತವೆಂದರೆ, ಕರ್ನಾಟಕವನ್ನಾಳಿದ ಯಾವ ಸರ್ಕಾರಕ್ಕೂ, ಯಾವ ರಾಜಕೀಯ ಪಕ್ಷಕ್ಕೂ ಈ ಅನ್ಯಾಯದ ಅರಿವೇ ಇರಲಿಲ್ಲ (ಈಗಲೂ ಇಲ್ಲ). ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಹೋಗುವ ಜನಪ್ರತಿನಿಧಿಗಳಿಗೂ "ಇದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ" ಎಂಬ ಕನಿಷ್ಠ ತಿಳಿವಳಿಕೆಯೂ ಇರಲಿಲ್ಲ.
ರೈಲ್ವೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ವಂಚನೆಯನ್ನು ಗುರುತಿಸಿದ ಟಿ.ಎ.ನಾರಾಯಣಗೌಡರು ನಿರ್ಣಾಯಕ ಹೋರಾಟಕ್ಕೆ ವೇದಿಕೆಯ ಕಾರ್ಯಕರ್ತರನ್ನು ಸಜ್ಜುಗೊಳಿಸಿದರು. ಅದರ ಪರಿಣಾಮವಾಗಿ ನಡೆದದ್ದೇ ಐತಿಹಾಸಿಕ ರೈಲ್ವೆ ಚಳವಳಿ.
ಮೊದಲ ಬಾರಿ ದೇಶದಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಿಹಾರದ ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದರು. ಹಿಂದೆ ನಡೆದ ಸಂಪ್ರದಾಯಗಳ ಹಾಗೆಯೇ ಲಾಲೂ ಯಾದವ್ ಸಹ ತನ್ನ ರಾಜ್ಯದ ನಿರುದ್ಯೋಗಿ ಯುವಕರಿಗೆ ರೈಲ್ವೆಯಲ್ಲಿ ಉದ್ಯೋಗ ಕೊಡಿಸಲು ಮುಂದಾದರು. ಇದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಕರ್ನಾಟಕ ರಾಜ್ಯವನ್ನು. ಇತರ ರಾಜ್ಯಗಳಲ್ಲಿ ಹಿಂಡುಗಟ್ಟಲೆ ಬಿಹಾರಿಗಳನ್ನು ತುಂಬಲು ಮುಂದಾದರೆ ಪ್ರತಿರೋಧ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಕರ್ನಾಟಕವೇ ಸೂಕ್ತ ಎಂಬ ಕಾರಣಕ್ಕೆ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಕರ್ನಾಟಕದ ರೈಲ್ವೆಯಲ್ಲಿ ಸಾವಿರಾರು ಬಿಹಾರಿ ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಕಳ್ಳ ಮಾರ್ಗಗಳನ್ನು ಹಿಡಿದರು.
ನೈಋತ್ಯ ರೈಲ್ವೆ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಕಾರ್ಯ ಆರಂಭವಾಯಿತು. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಗಳಲ್ಲಿ ಏಕಕಾಲಕ್ಕೆ ಪರೀಕ್ಷೆಗಳು ಆರಂಭವಾದವು. ವಿಶೇಷವೆಂದರೆ, ಈ ಪರೀಕ್ಷೆಗಳಿಗೆ ಸಾವಿರಾರು ಬಿಹಾರಿ ಯುವಕರು ಆಗಮಿಸಿದ್ದರು. ಇವರನ್ನು ವಿಶೇಷ ರೈಲುಗಳಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಗೆ ಕರೆ ತರಲಾಗಿತ್ತು. ಇವರ ವಾಸ್ತವ್ಯ ಮತ್ತು ಊಟೋಪಚಾರದ ವ್ಯವಸ್ಥೆಗಳನ್ನು ಸಹ ಲಾಲೂ ಯಾದವ್ ಅವರ ಅಣತಿಯ ಮೇರೆಗೆ ರೈಲ್ವೆ ಇಲಾಖೆಯೇ ವಹಿಸಿಕೊಂಡಿತ್ತು. ಈ ವಿಷಯ ಟಿ.ಎ.ನಾರಾಯಣಗೌಡರಿಗೆ ಗೊತ್ತಾಗುತ್ತಿದ್ದಂತೆ ಹೋರಾಟದ ರಣಕಹಳೆಯನ್ನೇ ಮೊಳಗಿಸಿದರು.
ರೈಲ್ವೆ ಪರೀಕ್ಷೆಗಳ ನಡೆಯುತ್ತಿದ್ದ ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ಪರೀಕ್ಷಾ ಕೇಂದ್ರಗಳ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಏಕಕಾಲಕ್ಕೆ ದಾಳಿ ನಡೆಸಿದರು. ಪರೀಕ್ಷೆಗಳು ನಡೆಯದಂತೆ ತಡೆದರು. ಹೆಚ್ಚು ರಕ್ಷಣಾ ಸಿಬ್ಬಂದಿಗಳನ್ನು ಇಟ್ಟುಕೊಂಡು ಪುನಃ ಪರೀಕ್ಷೆಗಳನ್ನು ನಡೆಸಲು ಇಲಾಖೆ ಪ್ರಯತ್ನಿಸಿತು. ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಈ ಎಲ್ಲಾ ಕುತಂತ್ರಗಳನ್ನು ಕರವೇ ಕಾರ್ಯಕರ್ತರು ವಿಫಲಗೊಳಿಸಿದರು. ಈ ಹೋರಾಟದ ಸಂದರ್ಭದಲ್ಲಿ ಪೊಲೀಸರ ಲಾಠಿಗೆ ಗುರಿಯಾದ ಕಾರ್ಯಕರ್ತರು ಜೀವದ ಹಂಗು ತೊರೆದು ಚಳವಳಿ ನಡೆಸಿದರು. ಎಲ್ಲೆಡೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಕನ್ನಡಿಗರ ಪ್ರತಿರೋಧದ ನಡುವೆಯೂ ಬಿಹಾರಿ ಯುವಕರನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ನೇಮಕ ಮಾಡಲು ಯತ್ನಿಸುತ್ತಿದ್ದ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿತು.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಹಾಗೂ ಬೆಂಗಳೂರಿನ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಛೇರಿಗಳ ಮೇಲೂ ದಾಳಿಗಳು ನಡೆದವು. ಪರಿಣಾಮವಾಗಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನಡೆಯುತ್ತಿದ್ದ ಪರೀಕ್ಷೆಗಳು ಸ್ಥಗಿತಗೊಂಡವು. ಬಿಹಾರಿ ಯುವಕರು ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಿರುಗಿದರು.
ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ವಿಶೇಷ ಅರ್ಹತೆಗಳ ಅಗತ್ಯವಿಲ್ಲದೇ ಇರುವುದರಿಂದ, ಡಾ.ಸರೋಜಿನಿ ಮಹಿಷಿ ವರದಿ ಅನ್ವಯ ಈ ಹುದ್ದೆಗಳನ್ನು ಸ್ಥಳೀಯರಿಗೆ ಅರ್ಥಾತ್ ಕನ್ನಡಿಗರಿಗೆ ಕೊಡಬೇಕು ಎಂಬ ಕಾನೂನು ಇರುವುದರಿಂದ ಈ ಹುದ್ದೆಗಳಿಗೆ ಅನ್ಯ ಭಾಷಿಕರನ್ನು ನೇಮಕ ಮಾಡಬಾರದು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖ ಬೇಡಿಕೆಯಾಗಿತ್ತು. ಈ ಹುದ್ದೆಗಳಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ನೀಡಲಾಗುತ್ತಿತ್ತು. ಇದರ ಪರಿಣಾಮವಾಗಿ ಎಸ್‌ಎಸ್‌ಎಲ್‌ಸಿ ಪಾಸು ಮಾಡಿದ ನಿರುದ್ಯೋಗಿ ಕನ್ನಡದ ಯುವಕರು ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವುದು ಕಷ್ಟಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಕನ್ನಡ ಪ್ರಶ್ನೆಪತ್ರಿಕೆಗಳನ್ನು ನೀಡಬೇಕು ಎಂಬುದು ಕರವೇ ಬೇಡಿಕೆಯಾಗಿತ್ತು.
ಲಾಲೂ ಪ್ರಸಾದ್‌ಯಾದವ್ ಅವರ ಷಡ್ಯಂತ್ರವನ್ನು ಕರ್ನಾಟಕ ರಕ್ಷಣಾ ವೇದಿಕೆ ವಿಫಲಗೊಳಿಸಿತ್ತು. ಇದರಿಂದಾಗಿ ಲಾಲೂ ಯಾದವ್ ವ್ಯಗ್ರರಾಗಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಚಳವಳಿಗಾರರನ್ನು ತನ್ನ ಹೊಲಸು ಬಾಯಿಂದ ನಿಂದಿಸಿದರು. ಇದರಿಂದ ಕರ್ನಾಟಕದ ಜನತೆ ಕೆರಳಿತು. ರಾಜ್ಯಾದ್ಯಂತ ಲಾಲೂ ವಿರುದ್ಧ ಹೋರಾಟಗಳು ತೀವ್ರಗೊಂಡವು. ಚಿತ್ರದುರ್ಗಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರೈಲಿನಲ್ಲಿ ಆಗಮಿಸಿದ್ದ ಲಾಲೂಗೆ ತುಮಕೂರು ಸೇರಿದಂತೆ ಪ್ರತಿ ನಿಲ್ದಾಣಗಳಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು.
ಚಳವಳಿಗೆ ಜಯ
ನಾಲ್ಕು ಸಾವಿರಕ್ಕೂ ಹೆಚ್ಚು ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಯ ಪರೀಕ್ಷೆಗಳೇನೋ ಸ್ಥಗಿತಗೊಂಡವು. ಆದರೆ, ಇದು ತಾತ್ಕಾಲಿಕ ವಿಜಯವಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದು ಎಂದು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ, ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿ ಪರೀಕ್ಷೆಗಳನ್ನು ಸ್ಥಗಿತಗೊಳಿಸಿದ್ದರು. ಆದರೆ, ಮುಂದೆ ಕಳ್ಳ ಮಾರ್ಗದಲ್ಲಿ ಪರೀಕ್ಷೆಗಳನ್ನು ಇಲಾಖೆ ನಡೆಸುವುದಿಲ್ಲವೆಂಬ ಖಾತರಿ ಏನೂ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆ ತನ್ನ ಹೋರಾಟವನ್ನು ಸ್ಥಗಿತಗೊಳಿಸದೆ ಇಲಾಖೆಯ ಎಲ್ಲಾ ಚಟುವಟಿಕೆಗಳಿಗೂ ಒಂದು ಕಣ್ಣಿಟ್ಟುಕೊಂಡೇ ಬಂದಿತು. ಕರ್ನಾಟಕದಲ್ಲಿ ಮತ್ತೆ ಪರೀಕ್ಷೆ ನಡೆಸದಂತೆ ಒತ್ತಡ ಹೇರಿಕೊಂಡೇ ಬಂತು.
ಕರ್ನಾಟಕ ರಕ್ಷಣಾ ವೇದಿಕೆಯ ರೈಲ್ವೆ ಚಳವಳಿ ಇತರ ರಾಜ್ಯಗಳಿಗೂ ಸ್ಫೂರ್ತಿಯನ್ನು, ಪ್ರೇರಣೆಯನ್ನು ನೀಡಿತು. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ರೈಲ್ವೆ ಇಲಾಖೆಗೆ ಬಿಹಾರಿಗಳನ್ನು ತುಂಬುವ ಯತ್ನದ ವಿರುದ್ಧ ಪ್ರತಿಭಟನೆಗಳಾದವು.
ಇದೆಲ್ಲವನ್ನೂ ಕೇಂದ್ರ ಸರ್ಕಾರ ಗಮನಿಸಿತ್ತು. ಕೇಂದ್ರದಲ್ಲಿ ಎರಡನೇ ಅವಧಿಗೆ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ಬಿಹಾರದಲ್ಲೇ ಧೂಳಿಪಟವಾಗಿದ್ದರು. ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಹೊಸ ರೈಲ್ವೆ ಮಂತ್ರಿಯಾದರು. ಪ್ರಾದೇಶಿಕ ಪಕ್ಷವೊಂದರ ನೇತಾರರಾದ ಮಮತಾ ಪ್ರಾದೇಶಿಕ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು. ಹೀಗಾಗಿ ತಮ್ಮ ಪ್ರಥಮ ಬಜೆಟ್‌ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯ ಬೇಡಿಕೆಯನ್ನು ಈಡೇರಿಸಿದರು. ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ದೇಶಾದ್ಯಂತ ಏಕಕಾಲಕ್ಕೆ ನಡೆಸುವುದಾಗಿ ಅವರು ಘೋಷಿಸಿದರು. ಏಕಕಾಲಕ್ಕೆ ಪರೀಕ್ಷೆಗಳನ್ನು ನಡೆಸುವುದರಿಂದಾಗಿ ಒಂದು ರಾಜ್ಯದ ಅಭ್ಯರ್ಥಿ ಇನ್ನೊಂದು ರಾಜ್ಯದಲ್ಲಿ ಉದ್ಯೋಗ ಗಿಟ್ಟಿಸುವುದನ್ನು ತಪ್ಪಿಸುವುದು ಈ ಘೋಷಣೆಯ ಉದ್ದೇಶವಾಗಿತ್ತು. ಇದಲ್ಲದೇ, ಕರ್ನಾಟಕ ರಕ್ಷಣಾ ವೇದಿಕೆಯ ಬಹುಮುಖ್ಯ ಬೇಡಿಕೆಯಾಗಿದ್ದ ಪ್ರಶ್ನೆಪತ್ರಿಕೆಗಳನ್ನು ಸ್ಥಳೀಯ ಭಾಷೆಯಲ್ಲೇ ನೀಡುವ ಕುರಿತು ಮಮತಾ ಬ್ಯಾನರ್ಜಿ ಘೋಷಣೆ ಮಾಡಿದರು.
ಇದರಿಂದಾಗಿ ಆರು ದಶಕಗಳಿಂದ ಕನ್ನಡಿಗರ ಮೇಲೆ ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿದ್ದ ನಿರಂತರ ಶೋಷಣೆ ನಿಂತಂತಾಗಿದೆ. ಕನ್ನಡದ ಮಕ್ಕಳು ಮುಂಬರುವ ದಿನಗಳಲ್ಲಿ ನೈಋತ್ಯ ರೈಲ್ವೆಯಲ್ಲಿ ಹೆಚ್ಚುಹೆಚ್ಚು ನೌಕರಿಗಳನ್ನು ಪಡೆಯಲಿದ್ದಾರೆ. ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕನ್ನಡಿಗರು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ನೂರಾರು ಯುವಕರು ರೈಲ್ವೆಯಲ್ಲಿ ಉದ್ಯೋಗ ಪಡೆದು ಟಿ.ಎ.ನಾರಾಯಣಗೌಡರ ಬಳಿ ಬಂದು "ನಿಮ್ಮಿಂದಾಗಿಯೇ ನಮಗೆ ಉದ್ಯೋಗ ದೊರಕಿದೆ" ಎಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕು?
ಕಾವೇರಿ ಹೋರಾಟ
ಶತಮಾನಗಳ ವಿವಾದವಾಗಿರುವ ಕಾವೇರಿ ನದಿ ನೀರಿನ ಹಕ್ಕಿನ ವಿಷಯದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಲೇ ಇದೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರಾರಂಭಗೊಂಡ ಕಾಲದಿಂದಲೂ ಕಾವೇರಿ ಚಳವಳಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾ ಬಂದಿದೆ. ಈ ಹೋರಾಟದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಸೇರಿದಂತೆ ಪ್ರಮುಖ ಮುಖಂಡರು, ಕಾರ್ಯಕರ್ತರು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದಾರೆ, ಹಲವಾರು ಬಾರಿ ಜೈಲು ಸೇರಿದ್ದಾರೆ.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟವನ್ನು ಸಂಘಟಿಸಿತು. ಈ ಸಂದರ್ಭದಲ್ಲಿ ನಾರಾಯಣಗೌಡರು ಸೇರಿದಂತೆ ವೇದಿಕೆಯ ನೂರಾರು ಹೋರಾಟಗಾರರು ಬಳ್ಳಾರಿ ಜೈಲಿಗೆ ಕಳುಹಿಸಲಾಯಿತು.
ಕಾವೇರಿ ನ್ಯಾಯಮಂಡಳಿಯ ಅಂತಿಮ ವರದಿ ಹೊರಬಂದಾಗ ಅದು ಕನ್ನಡಿಗರ ಪಾಲಿಗೆ ಮರಣಶಾಸನ ಎಂಬುದನ್ನು ಸರಿಯಾಗಿಯೇ ಗ್ರಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ಈ ಸಂಬಂಧ ಪ್ರಬಲ ಹೋರಾಟಕ್ಕೆ ಸಿದ್ಧವಾಯಿತು. ನಾರಾಯಣಗೌಡರು ರಾಜ್ಯಾದ್ಯಂತ ಸಂಚರಿಸಿ ಕನ್ನಡ ಕಾರ್ಯಕರ್ತರನ್ನು ಸಂಘಟಿಸಿದರು. ಕನ್ನಡಿಗರ ಪಾಲಿಗೆ ಅಕ್ಷರಶಃ ಮರಣ ಶಾಸನದಂತೆ ಹೊರಬಿದ್ದ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ವಿರುದ್ಧ ಇಡೀ ರಾಜ್ಯಾದ್ಯಂತ ಮೊದಲು ಬೀದಿಗಿಳಿದು ಕಾವೇರಿ ಚಳವಳಿಗೊಂದು ಮೂರ್ತ ರೂಪ ನೀಡಿದ್ದೇ ರಕ್ಷಣಾ ವೇದಿಕೆ. ನ್ಯಾಯಮಂಡಳಿಯ ಅನ್ಯಾಯದ ತೀರ್ಪಿನ ವಿರುದ್ಧ ಹಳ್ಳಿಯಿಂದ ದಿಲ್ಲಿಯವರೆಗೆ ವ್ಯಾಪಕ ಮತ್ತು ಸಂಘಟಿತ ಆಂದೋಲನ ನಡೆಸಿದ ರಕ್ಷಣಾ ವೇದಿಕೆ ‘ದಿಲ್ಲಿ ದೊರೆ’ಗಳಿಗೆ ಬಿಸಿ ಮುಟ್ಟಿಸುವಲ್ಲಿಯೂ ಹಿಂದೆ ಬೀಳಲಿಲ್ಲ.
ಸುಮಾರು ೨ ಸಾವಿರಕ್ಕೂ ಹೆಚ್ಚು ವೇದಿಕೆಯ ಕಾರ್ಯಕರ್ತರು ದಿಲ್ಲಿಗೆ ತೆರಳಿ ಜಂತರ್ ಮಂತರ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಕಾವೇರಿ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ನೀಡಲೇಬೇಕೆಂದು ನಿರ್ಧರಿಸಿದ್ದ ನಾರಾಯಣಗೌಡರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ‘ಇನ್ನೇನು ಎಲ್ಲವೂ ಮುಗೀತು’ ಅಂತ ಈ ನೆಲದ ಜನನಾಯಕರು ಕೈ ಕಟ್ಟಿ ಕೂತ ಹೊತ್ತಲ್ಲೇ ಗೌಡರು ರಾಜ್ಯಾದ್ಯಂತ ಕಾವೇರಿ ಯಾತ್ರೆ ಹೊರಟರು. ಲಕ್ಷಾಂತರ ಕನ್ನಡಿಗರು ಕಾವೇರಿ ಯಾತ್ರೆಗೆ ಬೆಂಬಲ ಸೂಚಿಸಿದರು. ಅದರ ನಡುವೆಯೇ ಚಳವಳಿಯ ತೀವ್ರತೆಗೆ ರೈತ ಸಂಘಟನೆಗಳು, ದಲಿತ ಸಂಘಟನೆಗಳು ಸೇರಿದಂತೆ ಇನ್ನಿತರೆ ಸಂಘಟನೆಗಳ ಜತೆಗೂಡಿ ‘ಕೃಷ್ಣ-ಕಾವೇರಿ ಹೋರಾಟ ಸಮನ್ವಯ ಸಮಿತಿ’ ಅಡಿಯಲ್ಲಿ ಬೃಹತ್ ಹೋರಾಟಕ್ಕೆ ಸಜ್ಜುಗೊಂಡರು.
ಸುಮಾರು ಇಪ್ಪತ್ತು ಸಾವಿರ ಕಾರ್ಯಕರ್ತರೊಂದಿಗೆ ದೆಹಲಿ ಮುತ್ತಿಗೆ ನಡೆಯಿತು. ದೆಹಲಿಯ ಇತಿಹಾಸದಲ್ಲಿ ಹೀಗೆ ರಾಜ್ಯವೊಂದರಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೋರಾಟಗಾರರು ಬಂದು ರಣಕಹಳೆ ಮೊಳಗಿಸಿರಲಿಲ್ಲ. ಕನ್ನಡಿಗರ ಬೃಹತ್ ಪ್ರದರ್ಶನವನ್ನು ನೋಡಿ ದಿಲ್ಲಿ ದೊರೆಗಳೇ ದಂಗಾಗಿ ಹೋದರು. ನಾರಾಯಣಗೌಡರ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಾವೇರಿ ನ್ಯಾಯಾಧೀಕರಣ ನೀಡಿರುವ ಅಂತಿಮ ವರದಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಕಾರಣದಿಂದ ಯಾವುದೇ ಕಾರಣಕ್ಕೂ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಡಿ. ಹಾಗೊಂದು ವೇಳೆ ಪ್ರಕಟಿಸಿದ್ದೇ ಆದಲ್ಲಿ ಅದರಿಂದ ಕರ್ನಾಟಕದಲ್ಲಿ ಪ್ರತಿಕೂಲ ಪರಿಣಾಮಗಳಾಗುತ್ತದೆ ಎಂದು ಮನವಿ ಮಾಡಲಾಯಿತು.
ಇದರ ಪರಿಣಾಮ; ಕೇಂದ್ರ ಸರ್ಕಾರ ಅಂತಿಮ ತೀರ್ಪನ್ನು ಗೆಝೆಟ್‌ನಲ್ಲಿ ಪ್ರಕಟಿಸಲಿಲ್ಲ. ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು.
ಕಾವೇರಿ ವಿವಾದ ಸದ್ಯ ನ್ಯಾಯಾಲದಲ್ಲಿದೆ. ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಆದರೆ ಕರ್ನಾಟಕಕ್ಕೆ ಮಾರಣಾಂತಿಕವೇ ಆಗಿದ್ದ ನ್ಯಾಯಾಧೀಕರಣ ತೀರ್ಪು ಗೆಜೆಟ್‌ನಲ್ಲಿ ಪ್ರಕಟವಾಗದಂತೆ ಕೇಂದ್ರದ ಮೇಲೆ ತನ್ನ ‘ಕನ್ನಡ ಶಕ್ತಿ’ಯಿಂದ ಒತ್ತಡ ಹೇರಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಈ ಮೂಲಕ ವಾದರೂ ದಿಲ್ಲಿಯಲ್ಲಿ ಕನ್ನಡಿಗರು ‘ಒಂದು ಹಂತದ ಜಯ’ ಸಾಧಿಸಿದರೆಂದರೆ ಅದಕ್ಕೆ ಕಾರಣ ಕರ್ನಾಟಕ ರಕ್ಷಣಾ ವೇದಿಕೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ.
ಆಂಧ್ರ ಹಾಲಿಗೆ ಕೊಡಲಿಪೆಟ್ಟು:
ರಕ್ಷಣಾ ವೇದಿಕೆ ಯಾವುದೇ ಹೋರಾಟಗಳನ್ನು ಕೈಗೆತ್ತಿಕೊಂಡರೂ ಅದಕ್ಕೊಂದು ತಾರ್ಕಿಕ ಅಂತ್ಯ ನೀಡದೇ ವಿಶ್ರಮಿಸಿದ ಉದಾಹರಣೆಗಳಿಲ್ಲ. ಚಳವಳಿಯ ಬದ್ಧತೆ ಆ ಮಟ್ಟದ್ದು. ಹೋರಾಟದ ಆಳಕ್ಕಿಳಿದು, ಅದಕ್ಕೊಂದು ಸಂಘಟಿತ ವ್ಯಾಪಕತೆ ನೀಡುವ ಪರಿ ಸಾಮಾನ್ಯವಲ್ಲ.
ಇಂಥ ಹೋರಾಟದ ಹಲವು ಮಜಲುಗಳ ಪೈಕಿ ಆಂಧ್ರಪ್ರದೇಶದ ಹಾಲಿನ ವಿರುದ್ಧ ನಡೆದ ಚಳವಳಿಯೂ ಒಂದು;
ಆಂಧ್ರದ ಪ್ರಭಾವಿ ರಾಜಕಾರಣಿಯೊಬ್ಬರ ಒಡೆತನಕ್ಕೆ ಸೇರಿದ ಹಾಲು ಕರ್ನಾಟಕಕ್ಕೆ ಧಾಗುಂಡಿ ಇಟ್ಟಿತ್ತು. ಬೆಂಗಳೂರು, ಕೋಲಾರ ಇಲ್ಲೆಲ್ಲಾ ಈ ಕಲಬೆರಕೆ ಹಾಲಿನದ್ದೇ ಹಾಲಾಹಲ. ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟುತ್ತಿರುವ ಈ ನೆಲದ ಅಸಂಖ್ಯಾತ ರೈತ ಸಮೂಹದ ‘ಹೊಟ್ಟೆ ಮೇಲೆ ಹೊಡೆಯುವ’ ಆಂಧ್ರ ಹಾಲಿನ ವಿರುದ್ಧ ರಕ್ಷಣಾ ವೇದಿಕೆ ದಿಟ್ಟ ಹೋರಾಟವನ್ನೇ ರೂಪಿಸಿತ್ತು. ನೆರೆಯ ಕೋಲಾರದಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿದ್ದ ಆಂಧ್ರ ಹಾಲಿನ ವಿರುದ್ಧ ಅಲ್ಲಿನ ವೇದಿಕೆಯ ಕಾರ‍್ಯಕರ್ತರು ಸೆಟೆದು ನಿಂತರು. ಆರೋಗ್ಯಕ್ಕೂ ಮಾರಕವಾಗಿರುವ ಆಂಧ್ರ ಹಾಲು ಪೂರೈಕೆ ಸ್ಥಗಿತಗೊಳ್ಳಬೇಕು. ಆ ಮೂಲಕ ಸ್ಥಳೀಯ ರೈತರ ಬದುಕು ಹಸನಾಗಬೇಕು ಎಂಬುದು ವೇದಿಕೆ ಕಾರ‍್ಯಕರ್ತರ ಒಕ್ಕೊರೊಲ ದನಿಯಾಗಿತ್ತು. ಈ ಸಂಬಂಧ ವ್ಯಾಪಕ ಮತ್ತು ಉಗ್ರ ಪ್ರತಿಭಟನೆಗಳೇ ನಡೆದವು. ಕಾರ್ಯಕರ್ತರ ವಿರುದ್ಧ ಪೊಲೀಸ್ ಕೇಸುಗಳು ದಾಖಲಾದವು, ದೌರ್ಜನ್ಯ, ಹಲ್ಲೆಗಳು ಎಗ್ಗಿಲ್ಲದೇ ನಡೆಯಿತು. ಅಷ್ಟಾದರೂ ರಕ್ಷಣಾ ವೇದಿಕೆ ಬಗ್ಗಲಿಲ್ಲ. ಆಂಧ್ರ ರಾಜಕಾರಣಿಯ ಏನೆಲ್ಲಾ ಪ್ರಭಾವ, ಪ್ರಾಬಲ್ಯಗಳು ಕಾರ‍್ಯಕರ್ತರ ಕಾಠಿಣ್ಯದ ಮುಂದೆ ಕೆಲಸ ಮಾಡಲಿಲ್ಲ.
ಇದರ ಪರಿಣಾಮ; ಯಥೇಚ್ಛವಾಗಿ ಸರಬರಾಜಾಗುತ್ತಿದ್ದ ಆಂಧ್ರದ ಹಾಲು ಸ್ಥಗಿತಗೊಂಡಿತು. ಸ್ಥಳೀಯ ರೈತರು ನೆಮ್ಮದಿಯ ನಿಟ್ಟುಸಿರಿಟ್ಟರು.
ಕರವೇಯ ಹೋರಾಟದ ದಿಕ್ಕು ಕೇವಲ ಕರ್ನಾಟಕ, ಕನ್ನಡಿಗರಷ್ಟೇ ಅಲ್ಲ, ಈ ನೆಲದ ದುಡಿಯುವ ಮಂದಿ, ಬೆವರಿಳಿಸುವ ರೈತ, ಅನ್ಯಾಯಕ್ಕೊಳಗಾದ ಅಸಹಾಯಕ ಎಂಬುದಕ್ಕೆ ಈ ಹೋರಾಟ ಉದಾಹರಣೆಯಷ್ಟೆ.
ಬೆಂಗಳೂರು ವಿಮಾನ ನಿಲ್ದಾಣ
ದೇವನಹಳ್ಳಿಯಲ್ಲಿ ನಿರ್ಮಾಣಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ನಡೆದ ಹೋರಾಟ ಅವಿಸ್ಮರಣೀಯವಾದುದು.
ರೈತರ ಸಾವಿರಾರು ಎಕರೆ ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಾನು ಈ ಹಿಂದೆ ನೀಡಿದ್ದ ವಾಗ್ದಾನವನ್ನು ಮರೆಯಿತು. ಸೂಕ್ತ ಪರಿಹಾರ ನೀಡದೆ ರೈತರನ್ನು ವಂಚಿಸಿತ್ತು. ಅಷ್ಟಲ್ಲದೇ ಹಳೇ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕಟ್ಟಿಕೊಂಡಿದ್ದ ಕನ್ನಡಿಗರನ್ನು ಬೀದಿಪಾಲು ಮಾಡುವ ಹುನ್ನಾರವನ್ನೂ ಅದು ನಡೆಸಿತ್ತು.
ಇದೆಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಮನಗಂಡ ರಕ್ಷಣಾ ವೇದಿಕೆ ರೈತ ಪರ ಹೋರಾಟಕ್ಕೆ ಸಿದ್ಧಗೊಂಡಿತು. ಸ್ವಾಧೀನಪಡಿಸಿಕೊಂಡ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಮಕ್ಕಳಿಗೆ ವಿಮಾನ ನಿಲ್ದಾಣದಲ್ಲಿ ಕೆಲಸ ನೀಡಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ವೇದಿಕೆಯ ಬೇಡಿಕೆಯಾಗಿತ್ತು.
ಹೋರಾಟಕ್ಕೆ ಸಾಕಷ್ಟು ಅಡ್ಡಿ ಆತಂಕಗಳು ಎದುರಾದವು. ಆಳುವ ಸರ್ಕಾರದಿಂದಲೇ ಚಳವಳಿಯನ್ನು ನಿಯಂತ್ರಿಸುವ, ನಿಗ್ರಹಿಸುವ ಚಟುವಟಿಕೆಗಳೂ ನಡೆದವು. ಆದರೆ ವೇದಿಕೆಯ ಹೋರಾಟದ ಮುಂದೆ ಸರ್ಕಾರವೇ ಮಂಡಿಯೂರಿ ಕೂರಬೇಕಾಯಿತು.
ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರೆಯಿತು. ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಸೇವೆಯನ್ನು ಬೇರೆ ರಾಜ್ಯದ ಯುವಕರಿಗೆ ಒದಗಿಸುವ ನಿಲುವಿನಿಂದ ಸರ್ಕಾರ ಹಿಂದೆ ಸರಿಯಬೇಕಾಯಿತು. ಕನ್ನಡಿಗ ಯುವಕರಿಗೆ ಸೂಕ್ತ ಉದ್ಯೋಗಾವಕಾಶವೂ ದೊರೆಯಿತು. ಬಹುಮುಖ್ಯವಾಗಿ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕೆಂಬ ವೇದಿಕೆಯ ಮತ್ತೊಂದು ಬೇಡಿಕೆಗೆ ಜಂಟಿ ಸದನ ಸಮಿತಿ ಪೂರಕವಾಗಿಯೇ ಸ್ಪಂದಿಸಿತ್ತು.
ಕನ್ನಡ ಉದ್ದಿಮೆದಾರರ ಪರ
ರಾಜ್ಯದಲ್ಲಿ ಬೃಹತ್ ಉದ್ದಿಮೆಗಳ ಸ್ಥಾಪನೆಗೆ ಹೊರರಾಜ್ಯ, ವಿದೇಶಿ ಬಂಡವಾಳಿಗರಿಗೇ ಹೆಚ್ಚಿ ಆದ್ಯತೆ ನೀಡುತ್ತಿತ್ತು ಸರ್ಕಾರ. ಹಾಗೊಂದು ವೇಳೆ ಇದ್ದ ಒಂದಿಷ್ಟು ಕನ್ನಡಿಗ ಉದ್ದಿಮೆದಾರರ ಮೇಲೆ ಇನ್ನಿಲ್ಲದ ದಬ್ಬಾಳಿಕೆ, ನಿರ್ಲಕ್ಷ್ಯ, ದೌರ್ಜನ್ಯ ವ್ಯಾಪಕವಾಗಿಯೇ ಇತ್ತು. ಈ ಸಂದರ್ಭದಲ್ಲಿ ಸ್ಥಳೀಯ ಉದ್ದಿಮೆದಾರರ ಪರ ಮೊಟ್ಟಮೊದಲ ಬಾರಿಗೆ ದನಿ ಎತ್ತಿದ್ದು ರಕ್ಷಣಾ ವೇದಿಕೆ.
ಬೃಹತ್ ಅಥವಾ ಸಣ್ಣ ಉದ್ಯಮಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸುವುದಷ್ಟೇ ಅಲ್ಲದೆ, ಸ್ಥಳೀಯರ ಜೀವನಮಟ್ಟವನ್ನು ಸುಧಾರಿಸುತ್ತದೆ. ಕರ್ನಾಟಕದಲ್ಲಿ ಉದ್ದಿಮೆ ನಡೆಸಲು ಕನ್ನಡಿಗರಿಗೆ ಬೇಕಾದ ಸೂಕ್ತ ವಾತಾವರಣ ಕಲ್ಪಿಸಿ, ಅವರಿಗೆ ನೈತಿಕ ಬೆಂಬಲ ನೀಡುವುದು ಮತ್ತು ಅಂತಹ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವಂತೆ ನೋಡಿಕೊಳ್ಳುವುದು ವೇದಿಕೆಯ ಮುಖ್ಯ ನಿಲುವಾಗಿತ್ತು.
ಈ ನಿಟ್ಟಿನಲ್ಲಿ ಕನ್ನಡಿಗರ ಉದ್ದಿಮೆದಾರರು, ಅನಿವಾಸಿ ಕನ್ನಡಿಗರಿಗೆ ಹೆಚ್ಚಿನ ಬಂಡವಾಳ ಹೂಡಲು ಅವಕಾಶ ಕಲ್ಪಿಸುವಂತೆ ವೇದಿಕೆ ಹೋರಾಟ ನಡೆಸಿತು. ಅಷ್ಟಲ್ಲದೆ, ಉದ್ದಿಮೆದಾರರಿಗೆ ಅನ್ಯಾಯವಾದಾಗಲೆಲ್ಲಾ ಅವರ ಪರ ನಿಂತಿತು. ಸರ್ಕಾರದ ಮಟ್ಟದಿಂದಲೂ ಇದಕ್ಕೆ ಪೂರಕ ಸ್ಪಂದನೆ ವ್ಯಕ್ತವಾಯಿತು.
ಶಾಸ್ತ್ರೀಯ ಸ್ಥಾನಮಾನ
ರಕ್ಷಣಾ ವೇದಿಕೆಯ ಹೋರಾಟದ ಮಜಲುಗಳಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ನಡೆಸಿದ ಹೋರಾಟವೂ ಒಂದು. ಕನ್ನಡ ಭಾಷೆಗೆ ೨೦೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಅತೀ ಹೆಚ್ಚು ಜ್ಞಾನಪೀಠ ಪುರಸ್ಕಾರದ ಹೆಗ್ಗಳಿಕೆ ಸಿಕ್ಕಿದ್ದು ಕನ್ನಡ ಸಾಹಿತ್ಯಕ್ಕೆ. ಅತೀ ಪ್ರಾಚೀನ ಮತ್ತು ಶ್ರೀಮಂತ ಹಿನ್ನೆಲೆಯುಳ್ಲ ಕನ್ನಡಕ್ಕೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡದೆ ಪೂರ್ವಾಗ್ರಹಪೀಡಿತವಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ರಕ್ಷಣಾ ವೇದಿಕೆ ಕಾಲದಿಂದಲೂ ಕರ್ನಾಟಕದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿರುವ ಕೇಂದ್ರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿತು. ಶಾಸ್ತ್ರೀಯ ಸ್ಥಾನಮಾನಕ್ಕೆ ಆಗ್ರಹಿಸಿ ನಾಡೋಜ ಡಾ.ದೇ.ಜವರೇಗೌಡರು ಮೈಸೂರಿನಲ್ಲಿ ಉಪವಾಸ ನಿರತರಾದರು. ನಾರಾಯಣಗೌಡರು ದೇಜಗೌ ಉಪವಾಸಕ್ಕೆ ಬೆಂಬಲ ಸೂಚಿಸಿದರಲ್ಲದೆ, ರಾಜ್ಯವ್ಯಾಪಿ ಹೋರಾಟದ ಮುಂಚೂಣಿ ವಹಿಸಿದರು.
ಮತ್ತೆ ದೂರದ ದಿಲ್ಲಿಯಲ್ಲಿ ಕನ್ನಡದ ಘೋಷಣೆಗಳು ಮೊಳಗಿದವು. ಈ ಬಾರಿ ಸಾವಿರಾರು ಕನ್ನಡದ ಕಾರ‍್ಯಕರ್ತರು ದಿಲ್ಲಿಯಲ್ಲಿ ಕಾಣಿಸಿಕೊಂಡರು. ದಿಲ್ಲಿಯ ಇತಿಹಾಸದಲ್ಲೇ ಇಷ್ಟು ಪ್ರಮಾಣದಲ್ಲಿ ಕಾರ‍್ಯಕರ್ತರು ಬಂದಿಳಿದು, ಕನ್ನಡದ ಹಕ್ಕಿಗಾಗಿ ಅಬ್ಬರಿಸಿದ್ದು ಅದೇ ಪ್ರಥಮ. ದಿಲ್ಲಿಯ ಜಂತರ್ ಮಂತರ್‌ನಲ್ಲಂತೂ ಕನ್ನಡಿಗರದ್ದೇ ಕಲರವ....
ಗೌಡರ ನೇತೃತ್ವದಲ್ಲಿ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಯಿತು. ದಿಲ್ಲ್ಲಿಯ ರಾಜಕಾರಣಿಗಳು ಕನ್ನಡಿಗರ ಹಿಂಡು ಕಂಡು ಬೆಚ್ಚಿಬಿದ್ದರು. ಕನ್ನಡದ ಬದ್ಧತೆ ಇಲ್ಲೂ ಹುಸಿಯಾಗಲಿಲ್ಲ. ನವೆಂಬರ್ ಹೊತ್ತಿಗೆ ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರೆಯಿತು. ಸಮಸ್ತ ಕನ್ನಡಿಗರು ಸಂಭ್ರಮಿಸಿದರು.
ಕನ್ನಡಿಗರ ಸವಾಲು...
ವೇದಿಕೆ ಸಾಗಿ ಬಂದ ಹಾದಿ ತುಂಬಾ ಹೋರಾಟಗಳೇ ಹೋರಾಟಗಳು. ಹೋರಾಟದ ಮೂಲ ಉದ್ದೇಶ ಮಾತ್ರ
ಒಂದೇ ಕನ್ನಡ ಮತ್ತು ಕರ್ನಾಟಕ. ಬೆಂಗಳೂರಿನಲ್ಲಿ ರೇಡಿಯೋ ಸಿಟಿ ಎಂಬ ಎಫ್ ಎಂ ವಾಹಿನಿ ಅಕ್ಷರಶಃ ಕನ್ನಡ ವಿರೋಧಿ ಧೋರಣೆ ಅನುಸರಿಸಿತ್ತು. ಕನ್ನಡ ಹಾಡುಗಳನ್ನು ಕೇಳುವವರೇ ಇಲ್ಲ, ಅಂಥ ಹಾಡಿಗೆ ಮಾರುಕಟ್ಟೆಯೂ ಇಲ್ಲ ಎಂದು ಕಣ್ಣಿಗೆ ಬಟ್ಟೆ ಕಂಡ ಎಫ್‌ಎಂ ವಾಹಿನಿ ಬರೇ ಹಿಂದಿ ಹಾಡುಗಳನ್ನೇ ಕನ್ನಡದ ಕೇಳುಗರಿಗೆ ಬಲವಂತವಾಗಿ ತುರುಕುವ ಕೃತ್ಯಕ್ಕೆ ಕೈಹಾಕಿತ್ತು. ಇದರ ವಿರುದ್ಧ ಹರಿಹಾಯ್ದ ರಕ್ಷಣಾ ವೇದಿಕೆ ಮೊದಲ ಬಾರಿಗೆ ರೇಡಿಯೋ ಸಿಟಿ ವಾಹಿನಿ ವಿರುದ್ಧ ಪ್ರತಿಭಟನೆ ನಡೆಸಿತು. ಇದರ ಪರಿಣಾಮ ವಾಹಿನಿ ಕನ್ನಡ ಚಿತ್ರಗೀತೆಗಳನ್ನು ಬಿತ್ತರಿಸಿತು. ಕನ್ನಡದ ಕೇಳುಗರು ಸಂಭ್ರಮಿಸಿದರು...ಮಾರುಕಟ್ಟೆ ವಿಸ್ತರಿಸಿತು. ನೋಡನೋಡುತ್ತಿದ್ದಂತೆ ಒಂದೊರ ಹಿಂದೊಂದರಂತೆ ಎಫ್ ಎಂ ವಾಹಿನಿಗಳು ಬರತೊಡಗಿದವು. ಎಲ್ಲೆಡೆ ಕನ್ನಡದ ಹಾಡುಗಳು...ಕನ್ನಡ ಕೇಳುಗರ ಸಂಖ್ಯೆಯೂ ನಿರೀಕ್ಷೆಗೂ ಮೀರಿ ಬೆಳೆಯಿತು, ಮಾರುಕಟ್ಟೆ ವ್ಯಾಪಕವಾಯಿತು....ಹೀಗೆ ಎಫ್‌ಎಂ ವಾಹಿನಿಗಳಲ್ಲಿ ಕನ್ನಡಕ್ಕೆ, ಕನ್ನಡ ಚಿತ್ರಗೀತೆಗಳಿಗೆ ಭದ್ರ ಬುನಾದಿ ಕಲ್ಪಿಸಿದ ಹೆಗ್ಗಳಿಕೆ ರಕ್ಷಣಾ ವೇದಿಕೆಯದ್ದು.
ಅಷ್ಟಲ್ಲದೆ, ವಿಜಾಪುರ ವಿವಿಯ ಸಿಂಡಿಕೇಟ್‌ಗೆ ಆಂಧ್ರ ಮೂಲದ ಮಹಿಳೆಯನ್ನು ಸದಸ್ಯೆಯಾಗಿ ಸರ್ಕಾರ ನೇಮಕ ಮಾಡಿತ್ತು. ಕನ್ನಡದ ವಿವಿಯಲ್ಲಿ ಸದಸ್ಯೆಯಾಗಿ ನೇಮಕಗೊಳ್ಳಲು ಕನ್ನಡಿಗರ‍್ಯಾರೂ ಇಲ್ಲವೇ ಅಥವಾ ಕನ್ನಡಿಗರಿಗೆ ಅರ್ಹತೆಯೇ ಇಲ್ಲವೇ ಎಂಬುದು ವೇದಿಕೆ ಪ್ರಶ್ನೆಯಾಗಿತ್ತು. ಕರವೇ ಚಳವಳಿಯ ತೀವ್ರತೆಗೆ ಬೆದರಿದ ಸರ್ಕಾರ ನೇಮಕಾತಿಯನ್ನು ರದ್ದುಗೊಳಿಸಿತು.
ರಾಜ್ಯ ಸರ್ಕಾರ ಆನ್ ಲೈನ್ ಲಾಟರಿಯನ್ನು ಆರಂಭಿಸಿತು. ಪ್ಲೇವಿನ್ ಹೆಸರಿನಲ್ಲಿ ಆರಂಭಗೊಂಡ ಆನ್‌ಲೈನ್ ಲಾಟರಿ ಬೇರೆ ಬೇರೆ ಹೆಸರುಗಳೊಂದಿಗೆ ರಾಜ್ಯವನ್ನೇ ವ್ಯಾಪಿಸಿಕೊಂಡಿತು. ಇದರ ಪ್ರಭಾವ ಎಷ್ಟಿತ್ತೆಂದರೆ ರಾಜ್ಯಾದ್ಯಂತ ಶ್ರಮಿಕ ಜನವರ್ಗ ಇದರಿಂದಾಗಿ ದುಡಿದ ಹಣವನ್ನೆಲ್ಲ ಆನ್‌ಲೈನ್ ಜೂಜಿಗೆ ತೊಡಗಿಸಿ ದರಿದ್ರರಾಗತೊಡಗಿದರು. ಹಲವು ಸಂಸಾರಗಳು ಒಡೆದು ಹೋದವು. ಸಾಕಷ್ಟು ಮಂದಿ ತಮ್ಮೆಲ್ಲ ಗಳಿಕೆ, ಆಸ್ತಿಯನ್ನೆಲ್ಲ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದರು.
ಈ ಆನ್‌ಲೈನ್ ಲಾಟರಿ ವಿರುದ್ಧ ಅಕ್ಷರಶಃ ಸಮರವನ್ನೇ ಕರವೇ ಘೋಷಿಸಿತು. ಎಲ್ಲೆಡೆ ಕರವೇ ಕಾರ್ಯಕರ್ತರು ಆನ್‌ಲೈನ್ ಲಾಟರಿ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಲಾಟರಿಗೆ ಬಳಸುತ್ತಿದ್ದ ಕಂಪ್ಯೂಟರ್‌ಗಳನ್ನು ರಸ್ತೆಗೆ ಎಸೆದರು. ಹೋರಾಟದ ತೀವ್ರತೆಯಿಂದ ಬೆಚ್ಚಿ ಬಿದ್ದ ಸರ್ಕಾರ ಆನ್‌ಲೈನ್ ಲಾಟರಿಯನ್ನು ಸಂಪೂರ್ಣ ನಿಷೇಧಿಸಿತು.
ಶಾಸಕರ ವಿರುದ್ಧ ಕಿಡಿ
ಡೆರಿಕ್ ಫುಲಿನ್ ಫಾ ಎಂಬುವವರನ್ನು ಬಿಜೆಪಿ ಸರ್ಕಾರ ಆಂಗ್ಲೋ ಇಂಡಿಯನ್ ಕೋಟಾದಡಿ ವಿಧಾನ ಪರಿಷತ್‌ಗೆ ನೇಮಕ ಮಾಡಿತ್ತು. ದುರಂತವೆಂದರೆ ಈ ಪುಣ್ಯಾತ್ಮನಿಗೆ ಕನ್ನಡವೇ ಬಾರದು! ಕನ್ನಡ ಬಾರದ ಈ ಶಾಸಕ ವಿಧಾನಸಭೆಯಲ್ಲಿ ಇಂಗ್ಲೀಷಿನಲ್ಲಿ ಭಾಷಣ ಮಾಡತೊಡಗಿದರು. ‘ದಯಮಾಡಿ ಕನ್ನಡದಲ್ಲಿ ಮಾತನಾಡಿ’ ಅಂತ ಖುದ್ದು ವಿದಾನಸಭಾಧ್ಯಕ್ಷರೇ ಕೋರಿದರೂ ಡೆರಿಕ್ ಫುಲಿನ್ ಫಾ ಉದ್ಧಟತನದಿಂದ ವರ್ತಿಸಿದರು. ನನಗೆ ಕನ್ನಡ ಬಾರದು...ನಾನು ಇಂಗ್ಲೀಷಿನಲ್ಲಿಯೇ ಮಾತನಾಡುವುದು ಎಂದು ಉತ್ತರಿಸಿದ್ದರು.
ಇಷ್ಟಾದರೂ ಡೆರಿಕ್ ಫುಲಿನ್ ಫಾ ಅವರ ಕನ್ನಡ ವಿರೋಧಿ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದರೆ ಗಂಭೀರವಾಗಿ ಪರಿಗಣಿಸಿದ್ದು ರಕ್ಷಣಾ ವೇದಿಕೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ವ್ಯವಸ್ಥೆಗೊಳಿಸಿದ್ದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಡೆರಿಕ್ ಫುಲಿನ್ ಫಾ ಅವರಿಗೆ ವೇದಿಕೆಯ ಕಾರ‍್ಯಕರ್ತರು ಘೇರಾವ್ ಹಾಕಿದರು. ಕನ್ನಡ ಕಲಿಯುವಂತೆ ತಾಕೀತು ಮಾಡಿದರು. ರಕ್ಷಣಾ ವೇದಿಕೆ ಕಾರ‍್ಯಕರ್ತರ ಅದಮ್ಯ ಕನ್ನಡ ಪ್ರೇಮ ಕಂಡು ಖುದ್ದು ಡೆರಿಕ್ ಫುಲಿನ್ ಫಾ ಬೆಕ್ಕಸಬೆರಗಾದರು.
ಈ ಘಟನೆ ನಡೆದ ಮಾರನೇ ದಿನವೇ ಖುದ್ದು ಡೆರಿಕ್ ಫುಲಿನ್ ಫಾ ತಮ್ಮ ಪತ್ನಿಯ ಜತೆ ಗಾಂಧಿನಗರದಲ್ಲಿರುವ ರಕ್ಷಣಾ ವೇದಿಕೆಯ ಕಚೇರಿಗೆ ಭೇಟಿ ನೀಡಿ, ನಾರಾಯಣ ಗೌಡರನ್ನು ಭೇಟಿಯಾದರು. ತಮ್ಮ ನಡವಳಿಕೆಗೆ ಕ್ಷಮೆ ಕೋರಿದ್ದಲ್ಲದೆ ತಾವು ಖಂಡಿತಾ ಕನ್ನಡ ಕಲಿಯುವುದಾಗಿ ಭರವಸೆ ನೀಡಿದರು!
ಇದನ್ನೇ ಹೋಲುವ ಮತ್ತೊಂದು ಪ್ರಕರಣವೂ ರಕ್ಷಣಾ ವೇದಿಕೆಯ ಇತಿಹಾಸದ ಪುಟಗಳಲ್ಲಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿಧಾನಸಭೆ ಪ್ರವೇಶಿಸಿದ್ದರು. ಸಚಿವ ಸ್ಥಾನ ಒಲಿದು ಬಂದಾಗ ಕನ್ನಡ ಬಾರದು ಎಂಬ ಕಾರಣಕ್ಕೆ ಇಂಗ್ಲೀಷಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದರು. ಇದರ ವಿರುದ್ಧ ಪ್ರತಿಭಟಿಸಿದ ಕಾರ‍್ಯಕರ್ತರು ಸದನ ನಡೆಯುವ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಕರಪತ್ರಗಳನ್ನು ಎಸೆದು ಗಟ್ಟಿದನಿಯಲ್ಲಿ ಪ್ರತಿಭಟಿಸಿ, ಬಿಸಿಮುಟ್ಟಿಸಿದ್ದರು.
ಮೇರು ನಟ ಡಾ.ರಾಜ್ ವೀರಪ್ಪನ್ ಕಪಿಮುಷ್ಠಿಯಿಂದ ಬಿಡುಗಡೆಯಾದ ನಂತರ ರಾಜ್ಯದಲ್ಲಿದ್ದ ಕೆಲವು ತಮಿಳು ವ್ಯಾಮೋಹಿಗಳು ಬೆಂಗಳೂರಿನಲ್ಲಿ ಸಮಾವೇಶವೊಂದಕ್ಕೆ ಸಿದ್ಧತೆ ನಡೆಸಿದ್ದರು. ಈ ಸಮಾವೇಶದಲ್ಲಿ ಎಲ್‌ಟಿಟಿಇ ಬೆಂಬಲಿಗ ನೆಡುಮಾರನ್‌ಗೆ ಸನ್ಮಾನಿಸುವ ಉದ್ದೇಶವಿತ್ತು. ಅದಕ್ಕಾಗಿ ಭರದ ಸಿದ್ಧತೆಯೇ ನಡೆಯಿತು. ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದು ರಕ್ಷಣಾ ವೇದಿಕೆ. ಒಂದು ವೇಳೆ ಬೆಂಗಳೂರಿನಲ್ಲಿ ತಮಿಳು ಸಮಾವೇಶ ನಡೆದರೆ ರಕ್ತಪಾತವೇ ಆದೀತು ಎಂಬ ಸ್ಪಷ್ಟ ಎಚ್ಚರಿಕೆಯನ್ನೂ ಸಂಘಟಕರಿಗೆ ರವಾನಿಸಿತು. ಇರದ ಪರಿಣಾಮ ನೆಡುಮಾರನ್‌ಗೆ ಸತ್ಕಾರ ರದ್ದಾಯಿತು.
ಬೆಳಗಾವಿಯಲ್ಲಿ ಕನ್ನಡದ ಕಂಪು...
ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೆಳಗಾವಿಯನ್ನು ಕಾಲದಿಂದಲೂ ಆಳುವ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದವು. ಇದರ ಪರಿಣಾಮ ಬೆಳಗಾವಿ ಕರ್ನಾಟಕದಲ್ಲಿದ್ದರೂ ಅಲ್ಲಿ ಮರಾಠಿ ಭಾಷಿಕರ ಆಟೋಟಾಪ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ದ್ದೇ ಆಧಿಪತ್ಯ.
ಇದನ್ನೇ ದುರ್ಬಳಕೆ ಮಾಡಿಕೊಂಡ ಎಂಇಎಸ್‌ನ ಕಿಡಿಗೇಡಿಗಳು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿರ್ಧಾರಕ್ಕೆ ಬಂದರು. ಬೆಳಗಾವಿ ಪಾಲಿಕೆಯೂ ಇದನ್ನೇ ನಿರ್ಣಯಿಸಿತು. ಆಗ ಕಾಂಗ್ರೆಸ್‌ನ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದರು.
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಪಾಲಿಕೆ ತೀರ್ಮಾನದ ವಿರುದ್ಧ ಸೆಟೆದು ನಿಂತಿದ್ದು ರಕ್ಷಣಾ ವೇದಿಕೆ. ಈ ಸಂಬಂಧ ಉಗ್ರ ಹೋರಾಟಕ್ಕೆ ಕಾರ‍್ಯಕರ್ತರು ಸಜ್ಜಾದರು. ಬೆಂಗಳೂರಿನ ಶಾಸಕರ ಭವನಕ್ಕೆ ಬೆಳಗಾವಿ ಪಾಲಿಕೆ ಮೇಯರ್ ವಿಜಯ್ ಮೋರೆ ಬಂದಿರುವ ಮಾಹಿತಿ ಪಡೆದ ಕಾರ‍್ಯಕರ್ತರು ಆತನ ಮುಖಕ್ಕೆ ಮಸಿ ಬಳಿದರು. ಈ ಪ್ರಕರಣ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಟೀಕೆ, ಬೆಂಬಲ ಎರಡೂ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆ ಕಾರ‍್ಯಕರ್ತರ ಬೆಂಬಲಕ್ಕೆ ನಿಂತಿದ್ದು ಡಾ.ಪೂರ್ಣಚಂದ್ರ ತೇಜಸ್ವಿ. ‘ನಾಡದ್ರೋಹದ ಕೆಲಸ ಮಾಡಿರುವಾತನ ಮುಖಕ್ಕೆ ಮಸಿ ಬಳಿಯದೆ ಫೇರ್ ಅಂಡ್ ಲವ್ಲಿ ಹಚ್ಬೇಕಿತ್ತೇ?’ ಅಂತ ಕುಟುಕಿದ್ದರು. ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಧರಂಸಿಂಗ್ ಸರ್ಕಾರ ಬೆಳಗಾವಿ ಪಾಲಿಕೆಯ ಚುನಾಯಿತ ಮಂಡಳಿಯನ್ನು ವಜಾಗೊಳಿಸಿತು.
ಹೀಗೆ ಎಂಇಎಸ್‌ನ ಆಟೋಟಾಪ, ದಬ್ಬಾಳಿಕೆಯನ್ನು ನಿಯಂತ್ರಿಸಿ, ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಬಾವುಟ ಹಾರಿಸುವ ಐತಿಹಾಸಿಕ ನಿರ್ಧಾರಕ್ಕೆ ಬಂದ ನಾರಾಯಣಗೌಡರು ಇಡೀ ಬೆಳಗಾವಿಯನ್ನು ಸುತ್ತಿದ್ದರು. ಸಮಸ್ತ ಕನ್ನಡಿಗರನ್ನೂ ಒಗ್ಗೂಡಿಸಿದರು. ಕನ್ನಡೇತರರ ವಿಶ್ವಾಸ ಗಳಿಸಿದರು. ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕನ್ನಡ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಕನ್ನಡ ಅಭ್ಯರ್ಥಿಗಳ ಪ್ರಚಾರ ನಡೆಸಿ, ಅವರಿಗೆ ನೈತಿಕ ಬೆಂಬಲ ನೀಡಿದರು. ಸರ್ವ ಪಕ್ಷಗಳ ಮುಖಂಡರನ್ನೂ ಒಗ್ಗೂಡಿಸಿದರು. ಇದೆಲ್ಲದರ ಪರಿಣಾಮ ಕನ್ನಡ ಅಭ್ಯರ್ಥಿಗಳೇ ಚುನಾವಣೆಯಲ್ಲಿ ಆಯ್ಕೆಯಾದರು. ರಕ್ಷಣಾ ವೇದಿಕೆಯ ಸಾಮಾನ್ಯ ಕಾರ‍್ಯಕರ್ತೆಯಾಗಿದ್ದ ಪ್ರಶಾಂತ ಬುಡವಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾದರು!
ಬರೋಬ್ಬರಿ ೧೯ ವರ್ಷಗಳ ನಂತರ ಬೆಳಗಾವಿ ಪಾಲಿಕೆ ಕನ್ನಡಿಗರ ಕೈಗೆ!!
ಇಷ್ಟೆಲ್ಲಾ ಘಟನೆ ನಂತರವೂ ಎಂಇಎಸ್ ತನ್ ಪುಂಡಾಟಿಕೆ ಬಿಡಲಿಲ್ಲ. ಮರಾಠಿ ಮಹಾಮೇಳಾವ ಮತ್ತಿತರೆ ಚಟುವಟಿಕೆ ನಡೆಸುವ ಮೂಲಕ ಅದು ಇನ್ನಲ್ಲದ ತಗಾದೆ ತೆಗೆಯುತ್ತಲೇ ಬಂತು. ಮಹಾರಾಷ್ಟ್ರದ ಬುದ್ಧಿಗೇಡಿ ರಾಜಕಾರಣಿಗಳು, ಶಿವಸೇನೆ, ಎಂಎನ್‌ಎಸ್ ನಾಯಕರು ಉದ್ರೇಕಕಾರಿ ಭಾಷಣ ಮಾಡುವ ಮೂಲಕ ಜಗಳಕ್ಕೂ ಯತ್ನಿಸಿತ್ತು. ಆದರೆ ಅವೆಲ್ಲದ್ದಕ್ಕೂ ರಕ್ಷಣಾ ವೇದಿಕೆ ಕಾಲಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಸೂಕ್ತ ಉತ್ತರವನ್ನೇ ನೀಡುತ್ತಾ ಬಂದಿದೆ.
ಹಿಂದಿ ಸಪ್ತಾಹ ಏಕೆ?
ನಮ್ಮದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡದಷ್ಟೇ ಸ್ಥಾನಮಾನವನ್ನು ಹಿಂದಿ ಭಾಷೆ ಹೊಂದಿದ್ದರೂ ಅದನ್ನು ರಾಷ್ಟ್ರ ಭಾಷೆ ಎಂದು ಸುಳ್ಳು ಹೇಳುತ್ತಾ ಹಿಂದಿ ಹೇರಿಕೆ ಮಾಡುವ ವ್ಯವಸ್ಥಿತ ಪಿತೂರಿ ವಿರುದ್ಧ ದನಿ ಎತ್ತಿದ್ದು ರಕ್ಷಣಾ ವೇದಿಕೆ. ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಮೂಲಕ ಹಿಂದಿ ಮೇಲ್ದರ್ಜೆ ಭಾಷೆ ಇತರ ಭಾಷೆಗಳು ಕೆಳದರ್ಜೆ ಭಾಷೆ ಎಂಬ ಹುನ್ನಾರವನ್ನು ಮಟ್ಟಹಾಕಿದ್ದು ನಾರಾಯಣಗೌಡರು.
ಬಲವಂತವಾಗಿ ಹಿಂದಿ ಹೇರುವಂಥ ಈ ಬೆಳವಣಿಗೆಗಳು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಕನ್ನಡದ ಅಸ್ತಿತ್ವವೇ ಇರುವುದಿಲ್ಲ ಎಂಬ ಮುನ್ಸೂಚನೆ ಅರಿತ ವೇದಿಕೆ ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ಹೋರಾಟವನ್ನು ನಡೆಸುತ್ತಾ ಬಂದಿದೆ.
ಕರವೇಯ ಹೋರಾಟದ ಹಾದಿಗಳಾವುದೂ ಸುಗುಮವಾಗಿರಲಿಲ್ಲ. ಪೊಲೀಸರ ಲಾಠಿ ಏಟು, ಸಾವಿರಾರು ಕೇಸುಗಳು...ಸರ್ಕಾರದ ಕೆಂಗಣ್ಣು..ಹೀಗೆ ಎಲ್ಲವನ್ನೂ ಅನುಭವಿಸುತ್ತಲೇ ಬಂದಿದೆ. ಪ್ರತೀ ಹೋರಾಟಕ್ಕೆ ಸಿದ್ಧಗೊಂಡಾಗಲೆಲ್ಲಾ ಇಲ್ಲಿನ ಕಾರ‍್ಯಕರ್ತರು ಜೀವಭಯ ಎದುರಿಸುವ ಪರಿಸ್ಥಿತಿಯೂ ಸೃಷ್ಟಿಯಾಗಿದೆ. ಮನೆ, ಮಠ, ಬಂಧು, ಬಳಗ ಎಲ್ಲವನ್ನೂ ಮರೆತು ಎಷ್ಟೋ ದಿನಗಳ ಕಾಲ ಜೈಲಿನಲ್ಲಿ ರಬೇಕಾದ ಸ್ಥಿತಿಯನ್ನೂ ಅನುಭವಿಸಿದ್ದಾರೆ.
ಅಂಥವುಗಳ ಪೈಕಿ ಕಾರವಾರವನ್ನು ಗೋವಾಗೆ ಸೇರಿಸಬೇಕೆಂಬ ಕುತಂತ್ರದ ವಿರುದ್ಧ ಕರವೇ ನಡೆಸಿದ ಹೋರಾಟವೂ ಒಂದು. ಇನ್ನು ಪರಭಾಷೆ ಹಾವಳಿಯಿಂದ ಕನ್ನಡ ಚಿತ್ರರಂಗz ಕಂಗೆಟ್ಟು ಕುಳಿತಿದ್ದಾಗ ನಡೆಸಿದ ಹೋರಾಟವೂ ಐತಿಹಾಸಿಕ. ಹೋರಾಟದ ಫವಾಗಿ ಕನ್ನಡ ಚಿತ್ರಗಳಿಗೆ ಪೂರಕವಾತಾವರಣ ನಿರ್ಮಾಣವಾಯಿತಲ್ಲದೆ, ಮಲ್ಟಿಪ್ಲೆಕ್ಸ್‌ಗಳಲ್ಲೂ ಕನ್ನಡ ಚಿತ್ರಗಳು ಪ್ರದರ್ಶಿತಗೊಳ್ಳಲು ಅವಕಾಶ ದೊರೆಯಿತು. ಅಷ್ಟಲ್ಲದೆ, ಕನ್ನಡಿಗರ ಜೀವನದಿಯಾಗಿದ್ದ ಮಹಾದಾಯಿ ನದಿ ನೀರಿನಲ್ಲಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ನಡೆಸಿದ ಬೃಹತ್ ಜಾಥಾ ಕೂಡ ಐತಿಹಾಸಿಕ. ನವೆಂಬರ್ ೧ ರಂದು ಕನ್ನಡ ಬಾವುಟ ಹಾರಿಸುವಂತಿಲ್ಲ ಎಂಬ ಸರ್ಕಾರದ ಎಡಬಿಡಂಗಿ ಆದೇಶದ ವಿರುದ್ಧ ಚಳವಳಿ ನಡೆಸಿ, ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದು ಇದೇ ಕರ್ನಾಟಕ ರಕ್ಷಣಾ ವೇದಿಕೆ
ತಿರುವಳ್ಳುವರ್ ವಿವಾದ
ಇನ್ನು ತಿರುವಳ್ಳುವರ್ ಪ್ರತಿಮೆ ವಿವಾದ ಕರ್ನಾಟಕ ರಕ್ಷಣಾ ವೇದಿಕೆ ಪಾಲಿಗೆ ಅತ್ಯಂತ ಮಹತ್ವದ್ದು. ಕೆಲವು ಎಲ್‌ಟಿಟಿಇ ಬೆಂಬಲಿಗರು ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಮುಂದಾದಾಗ ಅದನ್ನು ಗಟ್ಟಿ ದನಿಯಲ್ಲಿ ವಿರೋಧಿಸಿ, ಭದ್ರ ಹೋರಾಟಕ್ಕೆ ಬುನಾದಿ ಹಾಕಿದ್ದು ಕನ್ನಡಪರ ಕಾರ್ಯಕರ್ತರು. ತಮಿಳು ಶಕ್ತಿಗಳು ತಮ್ಮ ಇನ್ನಿಲ್ಲದ ಪ್ರಾಬಲ್ಯ, ಪ್ರಭಾವ ಬಳಸಿ ಏನೆಲ್ಲಾ ಹುನ್ನಾರಗಳನ್ನು ನಡೆಸಿದರೂ ಅದಕ್ಕೆ ಜಗ್ಗದ ಕನ್ನಡ ಹೋರಾಟಗಾರರು ರಾಜ್ಯವ್ಯಾಪಿ ಹೋರಾಟಕ್ಕೆ ಮುನ್ನುಡಿ ಬರೆದದ್ದೂ ಆಯಿತು.
ಆದರೆ ಕನ್ನಡಿಗರ ಸ್ವಾಭಿಮಾನದ ಹೋರಾಟದ ಪರವಾಗಿ ನಿಲ್ಲಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಹಲವಾರು ವರ್ಷಗಳಿಂದ ಹಲಸೂರು ಕೆರೆ ಆವರಣದಲ್ಲಿ ಮುಸುಕು ಹೊತ್ತು ನಿಂತಿದ್ದ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣಗೊಳಿಸುವ ನಿರ್ಧಾರಕ್ಕೆ ಬಂದರು. ತನ್ಮೂಲಕ ಕನ್ನಡಿಗರ ಬೆನ್ನಿಗೆ ಇರಿದರು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಹೂರ್ತವನ್ನೂ ನಿಗದಿಗೊಳಿಸಿದರು. ಪ್ರತಿಮೆ ಅನಾವರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರಕ್ಷಣಾ ವೇದಿಕೆಯ ನಾರಾಯಣಗೌಡರೂ ಸೇರಿದಂತೆ ಸಾವಿರಾರು ಕಾರ‍್ಯಕರ್ತರನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿ ಜೈಲಿಗೆ ತಳ್ಳಿದರು. ತಮಿಳುನಾಡಿನಿಂದ ದೌಡಾಯಿಸಿ ಬಂದ ಮುಖ್ಯಮಂತ್ರಿ ಕರುಣಾನಿಧಿ ಯಡಿಯೂರಪ್ಪ ಅವರನ್ನು ‘ಚಿನ್ನತಂಬಿ’ ಅಂತ ಬಾಯ್ತುಂಬಾ ಕರೆದು, ನೆಟಿಕೆ ಮುರಿದು, ಪ್ರತಿಮೆ ಅನಾವರಣಗೊಳಿಸಿ ನೆಟ್ಟಗೆ ಎದ್ದುಹೋದರು.
ಕನ್ನಡಿಗರ ಆಕ್ರೋಶವನ್ನು, ಸ್ವಾಭಿಮಾನವನ್ನು ಪೊಲೀಸ್ ಬಲದ ಮೂಲಕ ನಿಯಂತ್ರಿಸಿ ಸಂಭ್ರಮಿಸಿದ ಯಡಿಯೂರಪ್ಪನವರ ದರ್ಪ, ದವಲತ್ತಿಗೆ ಕನ್ನಡಿಗರು ಮೌನ ಪ್ರತಿಭಟನೆ ವ್ಯಕ್ತಪಡಿಸಬೇಕಾಯಿತು. ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡುವ ಕನ್ನಡಿಗರ ಸಾತ್ವಿಕ ಸಿಟ್ಟಿನಿಂದ ಯಡಿಯೂರಪ್ಪ ಖಂಡಿತಾ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಕುತಂತ್ರದಿಂದ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸಿದ ಯಡಿಯೂರಪ್ಪ ಅದಕ್ಕೆ ತಕ್ಕ ಪಾಠವನ್ನು ಕಲಿತೇ ಕಲಿಯುತ್ತಾರೆ.
ಹೊಗೇನಕಲ್ ಗಡಿ ವಿವಾದ
ಕಾಲದಿಂದಲೂ ನೆರೆಯ ತಮಿಳು ನಾಡು ಕರ್ನಾಟಕದ ಜತೆ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಲೇ ಇದೆ. ಅದು ಕಾವೇರಿ ವಿವಾದವಾಗಿರಬಹುದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡುವ ಬಗ್ಗೆಯಾದರೂ ಆಗಬಹುದು ಅಥವಾ ಹೊಗೇನಕಲ್ ವಿವಾದವಾದರೂ ಆಗಿರಬಹುದು. ಆಳುವ
ಸರ್ಕಾರಗಳ ಬೇಜವಾಬ್ದಾರಿ ನಡವಳಿಕೆ, ದಿವ್ಯ ನಿರ್ಲಕ್ಷ್ಯದಿಂದ ಏನೆಲ್ಲಾ ಯಡವಟ್ಟುಗಳು ಆಗಬಹುದೋ ಅವೆಲ್ಲಕ್ಕೆ ಸೂಕ್ತ ಉದಾಹರಣೆ ಅಂದ್ರೆ ಹೊಗೇನಕಲ್ ವಿವಾದ.
ಏನೆಲ್ಲಾ ಕಾಯ್ದೆ, ಕಾನೂನು, ಇತಿಹಾಸ ಕೆದಕಿದರೂ ಹೊಗೇನಕಲ್ ಕರ್ನಾಟಕಕ್ಕೇ ಸೇರಿದ್ದು ಎಂಬ ಪುರಾವೆ ದೊರೆಯುತ್ತದೆ. ಆದರೆ ಅವೆಲ್ಲವನ್ನೂ ಉಲ್ಲಂಘಿಸುವ ಉದ್ಧಟತನ ತಮಿಳುನಾಡು ಸರ್ಕಾರದ್ದು. ಹೊಗೇನಕಲ್‌ನಲ್ಲಿ ಕಾಮಗಾರಿ ನಡೆಸುವ ಮೂಲಕ ಕರ್ನಾಟಕ್ಕೆ ಮಂಕು ಬೂದಿ ಎರಚುವ ದುಸ್ಸಾಹಸಕ್ಕೆ ರಕ್ಷಣಾ ವೇದಿಕೆ ಚಳವಳಿಗಳ ಮೂಲಕ ಸೂಕ್ತ ಉತ್ತರವನ್ನೇ ನೀಡುತ್ತಾ ಬಂದಿದೆ. ಶಿವನಸಮುದ್ರ ಯೋಜನೆಗೆ ಕಿತಾಪತಿ ಮಾಡಿದ ತಮಿಳುನಾಡಿನ ಕಿಡಿಗೇಡಿ ರಾಜಕಾರಣಿಗಳು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಹುನ್ನಾರ ಹೂಡಿದ್ದನ್ನೂ ವೇದಿಕೆ ಬೆತ್ತಲುಗೊಳಿಸಿದೆ. ಕರ್ನಾಟಕದಲ್ಲಿ ತಮಿಳನ್ನು ಎರಡನೇ ಅಧಿಕೃತ ಭಾಷೆಯನ್ನಾಗಿಸಬೇಕೆಂಬ ಧಾರ್ಷ್ಟ್ಯತನಕ್ಕೂ ಬಲವಾದ ಪೆಟ್ಟು ನೀಡಿದೆ.
ಹಾಗೆ ನೋಡಿದರೆ, ಹೊಗೇನಕಲ್ ವಿವಾದ ಅತ್ಯಂತ ಗಂಭೀರವಾದದ್ದು. ರಾತ್ರೋರಾತ್ರಿ ಹೊಗೇನಕಲ್‌ನಲ್ಲಿ ಯೋಜನೆ ಆರಂಭಿಸುವ ದುಸ್ಸಾಹಸಕ್ಕೆ ಇಳಿದ ತಮಿಳುನಾಡು ಸರ್ಕಾರದ ಕೃತ್ಯದ ಮೇಲೆ ಚಾಮರಾಜನಗರದ ರಕ್ಷಣಾ ವೇದಿಕೆ ಕಾರ‍್ಯಕರ್ತರು ಪ್ರತಿಭಟಿಸುತ್ತಲೇ ಇದ್ದಾರೆ. ರಾಜ್ಯಾದ್ಯಂತ ಹೋರಾಟ ನಡೆಯುತ್ತಲೇ ಇದೆ.
ಹೊಗೇನಕಲ್ ಯೋಜನೆಯ ವಿವಾದ ಭುಗಿಲೆಬ್ಬಿಸಿ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡುವುದು ಸಲ್ಲದು ಅಂತ ಖುದ್ದು ಹೈಕೋರ್ಟ್ ‘ಬುದ್ಧಿ’ ಮಾತು ಹೇಳಿದೆ. ವಿವಾದವನ್ನು ಸರ್ಕಾರದ ಮಟ್ಟದಲ್ಲಿಯೇ ಬಗೆಹರಿಸಿ ಅಂತಲೂ ಅದು ಸೂಚಿಸಿದೆ. ಅಷ್ಟಾದರೂ ತಮಿಳುನಾಡು ತನ್ನ ಕ್ಯಾತೆ ನಿಲ್ಲಿಸುವ ಲಕ್ಷಣಗಳು ಕಾಣುತ್ತಿಲ್ಲ. ಕರ್ನಾಟಕ ಸರ್ಕಾರಕ್ಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಮನಸ್ಸು ಇದ್ದಂತಿಲ್ಲ.
ಜೀವ ಹೋದರೂ ಸರಿ ಕರ್ನಾಟಕದ ಒಂದಿಂಚು ನೆಲವೂ ತಮಿಳುನಾಡಿನ ಪಾಲಾಗಲು ಬಿಡೆವು ಎನ್ನುವ ವೇದಿಕೆ ಧ್ಯೇಯ ವಾಕ್ಯವನ್ನ ನಮ್ಮ ಸರ್ಕಾರಗಳು, ಜನನಾಯಕರು ಅರ್ಥ ಮಾಡಿಕೊಳ್ಳಬೇಕಷ್ಟೇ.
ದಿಕ್ಕು ಬದಲಾಗದು...
ಕರ್ನಾಟಕ ರಕ್ಷಣಾ ವೇದಿಕೆಗೆ ಕನ್ನಡವೇ ಧರ್ಮ, ಕನ್ನಡವೇ ದೇವರು ಮತ್ತು ಕನ್ನಡವೇ ಜಾತಿ. ಇಲ್ಲಿ ಜಾತಿ, ಧರ್ಮದ ಗೊಡವೆಯಿಲ್ಲ. ಹಮ್ಮು ಬಿಮ್ಮು, ಬಿಗುಮಾನವಿಲ್ಲ. ಇಲ್ಲೇನಿದ್ದರೂ ಸರ್ವೋದಯ ತತ್ವ. ವಿಶ್ವಮಾನವ ಸಂದೇಶ.
‘ರೂಪರೂಪಗಳನು ದಾಟಿ
ನಾಮಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವ ದೀಂಟಿ...
ಓ ನನ್ನ ಚೇತನ
ಆಗು ನೀ ಅನಿಕೇತನ....’
-ಎಂಬಂತೆ ಮಹಾನ್ ಕವಿ ಕುವೆಂಪು ಅವರ ಚಿಂತನೆಗಳ ಒಂದಿಷ್ಟಾದರೂ ಪಸರಿಸುವ ಅದಮ್ಯ ಕನಸು ನಾರಾಯಣಗೌಡರದ್ದು.
ಇಲ್ಲಿ ಯಾರನ್ನೂ ದೂಷಿಸುವುದಿಲ್ಲ, ದೂರೀಕರಿಸುವುದೂ ಇಲ್ಲ. ಇಲ್ಲೇನಿದ್ದರೂ ಒಕ್ಕೊರೊಲ ಕನ್ನಡ ಮಂತ್ರ. ಕನ್ನಡ...ಕನ್ನಡ...ಮತ್ತು ಕನ್ನಡ. ಕಾರ‍್ಯಕರ್ತರೇ ಇಲ್ಲಿ ಸೇವಕರು ಮತ್ತು ಅವರೇ ಯಜಮಾನರು. ಪ್ರತಿಯೊಬ್ಬ ಕಾರ‍್ಯಕರ್ತನೊಳಗೂ ಒಬ್ಬ ಅದಮ್ಯ ಸಂಘಟಕ ಇದ್ದೇ ಇರ‍್ತಾನೆ ಅಂತ ನಂಬಿದವರು ನಾರಾಯಣಗೌಡರು. ಆ ಕಾರಣಕ್ಕಾಗೇ ಸರ್ವರಿಗೂ ಮನ್ನಣೆ, ಸರ್ವರಿಗೂ ವಂದನೆ.
ಯಾವುದೇ ಕಾರಣಕ್ಕೂ ರಕ್ಷಣಾ ವೇದಿಕೆಯಲ್ಲಿ ಜಾತಿ, ಮತ, ಧರ್ಮ, ಭಾಷೆಗಳ ಗೋಡೆ ಇಲ್ಲವೇ ಇಲ್ಲ. ಕನ್ನಡತನಕ್ಕೆ ಬದ್ಧರಾಗಿ ಯಾರೇ ಬಂದರೂ ಅವರಿಗೆ ಸ್ವಾಗತ. ವಿಶೇಷವೆಂದರೆ, ಬೇರೆ ಮಾತೃಭಾಷೆಗಳನ್ನು ಹೊಂದಿದವರೂ ವೇದಿಕೆಯ ಹಲವು ಘಟಕಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕನ್ನಡ ಕಟ್ಟುವ ಕೆಲಸಕ್ಕೆ ಹೃದಯಪೂರ್ವಕವಾಗಿ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ.
‘ಇವನಾರವ ಇವನಾರವ ಎನ್ನದಿರು
ಇವ ನಮ್ಮವ ಇವ ನಮ್ಮವ ಎನ್ನು’

-ಎಂದು ಶುದ್ಧ ಮನಸ್ಸುಗಳನ್ನು, ವಿಶಾಲ ಹೃದಯಿಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ಒಪ್ಪಿಕೊಳ್ಳುವ ಔದಾರ‍್ಯ ಗೌಡರದ್ದು.
ಇನ್ನು ಕಪ್ಪೆ ಆರಭಟ್ಟ ಹೇಳಿದಂತೆ ಕನ್ನಡಿಗರು ‘ಸಾಧುಂಗೆ ಸಾಧು ಮಾಧುರ‍್ಯಂಗೆ ಮಾಧುರ‍್ಯ...ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್...’ ಎನ್ನುವಂತೆ ವೇದಿಕೆಯ ಕಾರ‍್ಯಕರ್ತರು ಸಾಧುಗಳಿಗೆ ಸಾಧು ಮತ್ತು ಬಾಧಿಸುವವರಿಗೆ, ಸುಖಾಸಮ್ಮನೆ ದಬ್ಬಾಳಿಕೆ ನಡೆಸುವವರಿಗೆ ಅಕ್ಷರಶಃ ಕಲಿಗಳೇ.
ರಕ್ಷಣಾ ವೇದಿಕೆಯಲ್ಲಿ ವ್ಯಕ್ತಿ ಮುಖ್ಯವಲ್ಲ. ಇಲ್ಲೇನಿದ್ದರೂ ವಿಚಾರಗಳಿಗಷ್ಟೇ ಆದ್ಯತೆ. ಕನ್ನಡ ವಿಚಾರ, ಕನ್ನಡ ಆಲೋಚನೆ ಮತ್ತು ಕನ್ನಡದ ಅಭಿವೃದ್ಧಿಗಷ್ಟೇ ಕಾರ‍್ಯಕರ್ತರು ಬದ್ಧ. ವೇದಿಕೆಯ ದಶಕದ ಹೋರಾಟ, ಚಳವಳಿಗಳನ್ನು ಸೂಕ್ಷ್ಮವಾಗಿ ಬಲ್ಲವರಿಗಷ್ಟೇ ಇದು ಅರ್ಥವಾದೀತು. ಯಾವುದೇ ಕಾರಣಕ್ಕೂ, ಎಂಥದ್ದೇ ಸಂದರ್ಭದಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯ ಆಲೋಚನೆಯ ದಿಕ್ಕು, ಹೋರಾಟದ ಶೈಲಿ, ಚಳವಳಿಯ ತೀವ್ರತೆ ಬದಲಾಗದು.
ಬೆಂಗಳೂರು ಕೇಂದ್ರಿತವಾಗಿದ್ದ ಕನ್ನಡ ಚಳವಳಿಯನ್ನು ದಶದಿಕ್ಕುಗಳಿಗೆ ವ್ಯಾಪಿಸುವಂತೆ ಮಾಡಿದ್ದು ನಾರಾಯಣಗೌಡರು. ಹಾಗೆ ನೋಡಿದರೆ ಚಳವಳಿಯ ಮೂಲಕವೇ ಇಡೀ ರಾಜ್ಯವನ್ನು ಭಾವನಾತ್ಮಕವಾಗಿ ಬೆಸೆಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಹಿಂದೆಲ್ಲ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಹಳೇ ಮೈಸೂರು ಭಾಗದ ಚಳವಳಿಗಾರರು ಸ್ಪಂದಿಸಿದ್ದು ಕಡಿಮೆ. ಆದರೆ ಕೃಷ್ಣಾ, ಮಹದಾಯಿ ನದಿ ವಿವಾದಗಳೂ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಉತ್ತರ ಕರ್ನಾಟಕದ ಸುತ್ತಗಲಕ್ಕೂ ಪ್ರವಾಸ ಮಾಡಿ, ಅಲ್ಲಿನ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು ನಾರಾಯಣಗೌಡರ ಹೆಗ್ಗಳಿಕೆ. ಬೆಳಗಾವಿಯಲ್ಲಿ ಮತ್ತೆ ಕನ್ನಡಿಗರು ಸ್ವಾಭಿಮಾನದಿಂದ ತಲೆ ಎತ್ತಿ ಬಾಳುವಂತೆ ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಹೀಗಾಗಿ ಬೆಳಗಾವಿ ಕನ್ನಡಿಗರು ನಾರಾಯಣಗೌಡರನ್ನು, ಕರ್ನಾಟಕ ರಕ್ಷಣಾ ವೇದಿಕೆಯನ್ನು ವಿಶೇಷ ಅಭಿಮಾನದಿಂದ ನೋಡುತ್ತಾರೆ.
ಕನ್ನಡಿಗರ ಮುಖವಾಣಿ....
ಕನ್ನಡಿಗರ ಸ್ವಾಭಿಮಾನದ ಸಂಕೇತದಂತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಯಶಸ್ವಿ ನಡಿಗೆಯಲ್ಲಿ ಕರವೇ ನಲ್ನುಡಿ ಮಾಸ ಪತ್ರಿಕೆಯದ್ದು ಮಹತ್ವದ ಹೆಜ್ಜೆ ಗುರುತು. ಕರವೇ ನಲ್ನಡಿ ಕನ್ನಡಿಗರ ಧೀಶಕ್ತಿಯ ಅನಾವರಣ. ಇದು ಕೇವಲ ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಷ್ಟೇ ಅಲ್ಲ ಸಮಸ್ತ ಕನ್ನಡಿಗರ ಮುಖವಾಣಿ, ಎದೆಯ ದನಿ.
ನಲ್ನುಡಿ ನಡಿಗೆ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಅದರ ವ್ಯಾಪಕತೆ ಬೆರಗು ಮೂಡಿಸಿದೆ. ಇದು ಕನ್ನಡ ಮತ್ತು ಕನ್ನಡಿಗರಿಗಾಗಿಯೇ ರೂಪುಗೊಂಡ ಅಪರೂಪದ ಪತ್ರಿಕೆ. ಕನ್ನಡ ಪತ್ರಿಕೋದ್ಯಮದ ಮಟ್ಟಿಗಂತೂ ವಿಶಿಷ್ಟ ಪ್ರಯೋಗ. ‘ಹೀಗೂ ಮಾಡಬಹುದೇ’ ಎಂಬ ಬೆರಗುಗಣ್ಣುಗಳ ನಡುವೆಯೇ ರಕ್ಷಣಾ ವೇದಿಕೆ ತನ್ನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಂತಿದೆ.
ಟೀಕೆಗಳು-ಟಿಪ್ಪಣಿಗಳು
ಕಳೆದ ಹತ್ತು ವರ್ಷಗಳಿಂದ ಸಮರೋಪಾದಿಯಲ್ಲಿ ಕನ್ನಡ ಕಾಯಕದಲ್ಲಿ ತೊಡಗಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಟೀಕೆ-ಟಿಪ್ಪಣಿಗಳನ್ನೂ ಎದುರಿಸುತ್ತ ಬಂದಿದೆ. ಆರೋಗ್ಯಕರ ಟೀಕೆಗಳಿಗೆ ವೇದಿಕೆ ಸ್ಪಂದಿಸುತ್ತದೆ. ಮುಕ್ತ ಸಲಹೆಗಳಿಗೆ ವೇದಿಕೆ ಯಾವತ್ತಿಗೂ ತೆರೆದುಕೊಂಡೇ ಇದೆ. ಕೆಲವರಿರುತ್ತಾರೆ; ಟೀಕೆಗಳಿಗಾಗಿ ಟೀಕಿಸುತ್ತಾರೆ. ಅಂಥವರನ್ನು ವೇದಿಕೆ ಗಂಭೀರವಾಗಿ ಪರಿಗಣಿಸುವುದಿಲ್ಲ. ಮತ್ತೆ ಕೆಲವರು ಜಾಣ ಜಾಣೆಯರೆಂದು ಬೋರ್ಡು ತಗುಲಿಸಿಕೊಂಡವರು, ಅವರಿಂದ ಹೊರಡುವುದು ಕೇವಲ ಅಮೇಧ್ಯದ ವಾಸನೆ. ಮೀರ್ ಸಾಧಕ್, ಮಲ್ಲಪ್ಪಶೆಟ್ಟಿಗಳಂಥ ಕೊಳಕುಪಿಂಡಗಳಿಂದ ಭಕ್ಷೀಸು ಪಡೆದು ರಕ್ಷಣಾ ವೇದಿಕೆಯ ಮೇಲೆ ಕಲ್ಲು ಒಗೆದು ಹೊಲಸು ಕಾರುವ ಇಂಥ ಕ್ರಿಮಿಗಳು ಎಲ್ಲ ಕಾಲದಲ್ಲೂ ಇರುತ್ತಾರೆ. ‘ಕೊಚ್ಚೆಗೆ ಕಲ್ಲು ಎಸೆಯಬೇಡಿ; ಅದು ನಿಮಗೇ ಸಿಡಿಯುತ್ತದೆ’ ಎಂದು ಹಿರಿಯರು ಎಚ್ಚರಿಸಿದ್ದಾರೆ. ಹೀಗಾಗಿ ಅಂಥವರಿಗೂ ಪ್ರತಿಕ್ರಿಯಿಸುವುದನ್ನು ವೇದಿಕೆ ಇತ್ತೀಚಿಗೆ ಬಿಟ್ಟಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು ಎಂದರು ರಾಷ್ಟ್ರಕವಿ ಕುವೆಂಪು. ನಾರಾಯಣಗೌಡರ ಮೂಲಮಂತ್ರವೂ ಇದೆ. ಕನ್ನಡಕ್ಕೆ, ಕನ್ನಡಿಗನಿಗೆ, ಕರ್ನಾಟಕಕ್ಕೆ ಧಕ್ಕೆ ತರುವ ಯಾರೇ ಆದರೂ ಮೊದಲು ನಮ್ಮನ್ನು ಎದುರಿಸಿ ಎಂದು ರಣವೀಳ್ಯ ಕೊಟ್ಟವರು ನಾರಾಯಣಗೌಡರು. ಕನ್ನಡದ ಶತ್ರುಗಳನ್ನು ಯಾವ ಬೆಲೆ ತೆತ್ತಾದರೂ ಮಣಿಸುವ ಧೈರ್ಯ, ಶಕ್ತಿ, ಲಕ್ಷಾಂತರ ಕಾರ್ಯಕರ್ತರ ಬೆಂಬಲ ಅವರಿಗಿದೆ. ಈ ಕ್ಷಾತ್ರ ತೇಜಸ್ಸೇ ಸಂಘಟನೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು, ಈ ನೆಲದ ಸುಖ, ಸಂಪತ್ತು ಎಲ್ಲವೂ ಕನ್ನಡಿಗನಿಗೇ ದೊರೆಯಬೇಕು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಗುರಿ. ಈ ಗುರಿಯ ಮಾರ್ಗದಲ್ಲೇ ವೇದಿಕೆ ಮುನ್ನಡೆಯುತ್ತದೆ.
ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ನಿಮ್ಮ ಮುಂದೇ

ಇಂದಿನ (12-12-2010) ವಿಶೇಷ 2 ಲೇಖನಗಳು
 
ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ನಿಮ್ಮ ಮುಂದೇ

ಇಂದಿನ (06-12-2010) ವಿಶೇಷ ಲೇಖನ
ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ನಿಮ್ಮ ಮುಂದೇ

ಇಂದಿನ (05-12-2010) ವಿಶೇಷ ಲೇಖನ

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ನಿಮ್ಮ ಮುಂದೇ

ಇಂದಿನ (25-11-2010) ವಿಶೇಷ ಲೇಖನ

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ನಿಮ್ಮ ಮುಂದೇ

ಇಂದಿನ (11-10-2010) ವಿಶೇಷ ಲೇಖನ


ಕುವೆಂಪು ಕಣ್ಣಲ್ಲಿ ಕನ್ನಡ, ಕರ್ನಾಟಕ
ದ್ವಾರನಕುಂಟೆ ಪಾತಣ್ಣ

ವಿಶ್ವಮಾನವ ತತ್ವದ ಪ್ರತಿಪಾದಕರೂ, ಪ್ರಕೃತಿಯ ಆರಾಧಕರೂ ಆಗಿರುವ ಕುವೆಂಪುರವರು ಜಗದ ಕವಿಯೂ ಹೌದು, ಯುಗದ ಕವಿಯೂ ಹೌದು. ಅವರಲ್ಲಿ ಸರ್ವೋದಯ ಸಮನ್ವಯ ಹಾಗೂ ಬದುಕಿನ ಶ್ರದ್ಧೆ ಪೂರ್ಣದೃಷ್ಠಿ, ಇವೆಲ್ಲಾ ಮೇಳೈಸಿದೆ. ಅವರ ವ್ಯಕ್ತಿತ್ವ ಕರ್ನಾಟಕದ ಬಗೆಗಿನ ಉತ್ಕಟವಾದ ಅಭಿಮಾನ ಮತ್ತು ಬದ್ಧತೆಗೆ ಹಿಡಿದ ಕನ್ನಡಿ ಆಗಿತ್ತು.
ಹದಿನೆಂಟರ ಹರೆಯದ ಪುಟ್ಟಪ್ಪನವರು ತಮ್ಮ ಸ್ನೇಹಿತರ ಮತ್ತು ಉಪಾಧ್ಯಾಯರುಗಳ ಒತ್ತಾಯದ ಮೇರೆಗೆ ೧೯೨೨ರಲ್ಲಿ ಬಿಗಿನರ‍್ಸ್ ಮ್ಯೂಸ್ ಎಂಬ ಕವನ ಸಂಕಲನವನ್ನು ಹೊರತಂದರು. ಕುವೆಂಪು ಸಾಹಿತ್ಯಕ ಬದುಕಿನಲ್ಲಿ ಅನಿರೀಕ್ಷಿತ ತಿರುವು ಪಡೆದ ಅಪರೂಪದ ಪ್ರಸಂಗ ಜರುಗಿತು. ಸುಪ್ರಸಿದ್ಧ ಐರಿಶ್ ಕವಿ ಜೇಮ್ಸ್.ಹೆಚ್.ಕಸಿನ್ಸ್‌ರವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿಶೇಷ ಉಪನ್ಯಾಸ ನೀಡಲು ಬಂದಿದ್ದರು. ಆಗ ಪ್ರೊ.ಎಂ.ಹೆಚ್.ಕೃಷ್ಣಯ್ಯಂಗಾರ್‌ರವರ ಸಲಹೆ ಮೇರೆಗೆ ಐರಿಶ್ ಕವಿಯನ್ನು ಭೇಟಿ ಮಾಡಿ ತಮ್ಮ ಇಂಗ್ಲೀಷ್ ಕವನ ಸಂಕಲನವನ್ನು ಅವರಿಗೆ ತೋರಿಸಿ ಅವರಿಂದ ಅಭಿಪ್ರಾಯ ಕೋರಿದರು. ಆಗ ಐರಿಶ್ ಕವಿ ಕುವೆಂಪುರವರು ಬರೆದ ಕವನವನ್ನು ಮೆಚ್ಚಿಕೊಂಡರು. ಕುವೆಂಪುರವರನ್ನು ಕುರಿತು ಅವರಾಡಿದ ಮಾತು-
ಇಂಗ್ಲೀಷ್‌ನಲ್ಲಿ ಪದ್ಯ ಬರೆಯಲು ಆಂಗ್ಲರಿದ್ದಾರೆ ನೀನು ಇಂಗ್ಲಿಷ್ನಲ್ಲಿ ಎಷ್ಟೇ ಉತ್ತಮವಾಗಿ ಪದ್ಯ ಬರೆದರೂ ಆಂಗ್ಲರ ದೃಷ್ಟಿಯಲ್ಲಿ ಅದು ಅಧಮ ಪದ್ಯವೇ ಸರಿ. ಕನ್ನಡದಲ್ಲಿ ಉತ್ತಮವಾದ ಬರವಣಿಗೆ ಇದ್ದರೆ ಅದನ್ನು ಬೇರೆ ಭಾಷೆಗೆ ತಿರುಗಿಸಿಕೊಳ್ಳಬಹುದು ಆಗ ನಿನ್ನ ಹತ್ತಿರಕ್ಕೆ ಆಂಗ್ಲರೇ ಬಂದಾರು, ರಷ್ಯನ್ನರೇ ಬಂದಾರು. ನಿನಗೆ ತಿಳಿದ ಭಾಷೆಯಲ್ಲೇ ಬರೆ. ನೀನು ನೋಡಿದರೆ ಅಡಿಯಿಂದ ಮುಡಿಯವರೆಗೆ ಸ್ವದೇಶಿ. ನಿನ್ನ ಬರವಣಿಗೆ ಮಾತ್ರ ವಿದೇಶಿ ಎಂದರು. ಕಸಿನ್ನರ ಮಾತು ತಕ್ಷಣಕ್ಕೆ ರುಚಿಸದೆ ಹೋದರು ಕನ್ನಡದಲ್ಲೇ ಬರೆದರೆ ಓದುವರ‍್ಯಾರು ಎಂದು ಪ್ರಶ್ನಿಸಿದಾಗ ಐರಿಸ್ ಕವಿಯು ಪ್ರತಿಯಾಗಿ ಭಾಷೆ ತಾನಾಗಿ ಬೆಳೆಯುವುದಿಲ್ಲ. ನಿನ್ನಂತಹ ಸಮರ್ಥರು ಭಾಷೆಯನ್ನು ಬೆಳೆಸಬೇಕು. ರವೀಂದ್ರರು ಬಂಗಾಳಿಯಲ್ಲಿ ಬರೆಯುವುದಕ್ಕೆ ಮೊದಲು ಆ ಭಾಷೆ ಯಾರಿಗೂ ತಿಳಿದಿರಲಿಲ್ಲ. ರವೀಂದ್ರರು ಆ ಭಾಷೆಗೆ ಜೀವ ತುಂಬಿದರು. ಆ ಭಾಷೆಗೆ ಶಕ್ತಿ ಬಂತು. ರವೀಂದ್ರರ ಕೃತಿಗಳು ವಿಶ್ವವಿಖ್ಯಾತವಾದವು. ನೀನು ಸಹ ಹಾಗೆ ಕನ್ನಡ ಭಾಷೆಯನ್ನು ಬೆಳೆಸಬೇಕು. ಉತ್ತಮ ಸೃಜನ ಶೀಲ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲ ಎಂದು ಪುಟ್ಟಪ್ಪನವರಿಗೆ ಮನವರಿಕೆ ಮಾಡಿಕೊಟ್ಟರು.
ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮಿರುವುದು.
ಕಾಮನಬಿಲ್ಲನು ಕಾಣುವ ಕವಿಯೊಲು
ತೆಕ್ಕನೆ ಮೈಮರೆಯುವುದು
ಎಂದು ಮನ ತುಂಬಿ ಹಾಡಿದನು.ಕರ್ನಾಟಕ ಏಕೀಕರಣ ಹೋರಾಟದ ಜೊತೆಜೊತೆಗೆ ಸ್ವಾತಂತ್ರ್ಯ ಸಂಗ್ರಾಮವೂ ತುಂಬಾ ತೀವ್ರಗತಿಯಲ್ಲಿರುವ ಸಂದರ್ಭದಲ್ಲಿ, ಹುಯಿಲುಗೋಳ ನಾರಾಯಣರಾಯರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬರೆದ ಸಮಯದಲ್ಲೇ ಕುವೆಂಪುರವರು ೧೯೩೦ರಲ್ಲಿ ಭಾರತ ಜನನಿಯ ತನುಜಾತೆ ಬರೆದರು.
ಜಯ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ!
ಜಯಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮುಕುಟದ ನವಮಣಿಯೆ,
ಗಂಧದ ಹೊನ್ನಿನ ಗಣಿಯೆ;ಹೀಗೆ ಕರ್ನಾಟಕಾಂತರ್ಗತವಾಗಿ ಭಾರತವನ್ನು ನೋಡುವಾಗ ಅಖಿಲ ಭಾರತ ವ್ಯಾಪ್ತಿಯ ಸಂಸ್ಕೃತಿಯ ಪರಂಪರೆಗಳ ಪ್ರತೀಕಗಳನ್ನು ಅದರ ಒಡಲಲ್ಲಿ ಗುರುತಿಸಬಹುದು. ಕನ್ನಡ ಪ್ರೇಮ ಭಾರತ ಪ್ರೇಮಕ್ಕೆ ವಿರುದ್ಧವಲ್ಲ. ಒಂದರ ಹಿತ ಮತ್ತೊಂದರ ಹಿತದಲ್ಲಿದೆ. ಒಂದನ್ನು ಪ್ರೀತಿಸುವವರು ಮತ್ತೊಂದನ್ನು ಪ್ರೀತಿಸುತ್ತಾರೆ. ಇದು ರಾಜ್ಯ ಗೀತವೂ ಹೌದು. ರಾಷ್ಟ್ರಗೀತೆಯೂ ಹೌದು. ದಿ ೭.೧.೨೦೦೪ರಂದು ಕರ್ನಾಟಕ ಸರ್ಕಾರವು ನಾಡಗೀತೆಯಾಗಿ ಘೋಷಿಸಿದೆ. ಈ ಹಾಡನ್ನು ಹಾಡುವಾಗ ಎಲ್ಲರೂ ಎದ್ದು ನಿಂತು ನಾಡಗೀತೆಗೆ ಗೌರವವನ್ನು ನೀಡಬೇಕೆಂದು ಆದೇಶಿಸಲಾಗಿದೆ. ಜೊತೆಗೆ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳ ಆರಂಭವಾಗುವ ಮುನ್ನ ಹಾಗೂ ಎಲ್ಲಾ ಸಾಂಸ್ಕೃತಿಕ ಸಾಹಿತ್ಯಿಕ ಇತರೆ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡುವಂತೆ ನಿರ್ದೇಶಿಸಲಾಗಿದೆ. ಶಂಕರ-ಮಾಧ್ವ ಪದಗಳನ್ನು ನಾಡಗೀತೆಯಿಂದ ತೆಗೆಯಬೇಕೆಂದು ಈಗಲೂ ಹಲವರ ಒತ್ತಾಯವಿದೆ. ನಾಡಗೀತೆಯನ್ನು ಕಾಲ ಮಿತಿಯಲ್ಲಿ ಹಾಡಬೇಕು, ಅದಕ್ಕಾಗಿ ಸರ್ಕಾರ ಸಮಿತಿಯೊಂದನ್ನು ರಚಿಸಿದೆ, ಅದರ ವರದಿ ಆಧರಿಸಿ ನಾಡಗೀತೆಯನ್ನು ಅನುಷ್ಠಾನ ಮಾಡಬೇಕಾಗಿದೆ.
ಕನ್ನಡ ನಾಡಿನ ಅತ್ಯಗತ್ಯ ಶ್ರೇಯೋಭಿವೃದ್ಧಿಗೆ ಪ್ರಾಥಮಿಕ ಶಿಕ್ಷಣದಲ್ಲಿ, ಕನ್ನಡ ಮಾದ್ಯಮವಾಗಬೇಕು. ಅದರ ಮೂಲಕ ಕನ್ನಡ ಭಾಷೆ, ಕನ್ನಡ ಮಕ್ಕಳ ಭವಿಷ್ಯ ಉತ್ತಮವಾಗಬೇಕೆಂದು ಹಗಲಿರುಳು ಹಂಬಲಿಸಿದರು. ಕನ್ನಡ ಜಾಗೃತಿ ನಿರೀಕ್ಷಿಸಿದ ಮಟ್ಟದಲ್ಲಿ ಆಗುತ್ತಿಲ್ಲ ಎಂಬ ವಾಸ್ತವಾಂಶವನ್ನು ಕುವೆಂಪು ಕಂಡುಕೊಂಡರು. ಒಂದು ರೀತಿಯ ನಿರಾಸೆ ಕಾರ್ಮೋಡ ನಾಡಿನಾದ್ಯಂತ ಕವಿದಿತ್ತು. ಆ ಹಿನ್ನೆಲೆಯಲ್ಲಿ ಒಂದು ಅರಿಕೆ ಸ್ವರೂಪದ ಕವನವೇ ಕನ್ನಡಮ್ಮನ ಹರಕೆ.
ಕನ್ನಡಕೆ ಹೋರಾಡು ಕನ್ನಡದ ಕಂದಾ;
ಕನ್ನಡವ ಕಾಪಾಡು ನನ್ನ ಆನಂದಾ!
ಜೋಗುಳದ ಹರಕೆಯಿದು ಮರೆಯಿದಿರು ಚಿನ್ನಾ;
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ!
ತಾಯಿಯ ಹಾಲಿನ ಸವಿ, ಕನ್ನಡದಿಂದ ಸಿದ್ಧಿಸುವ ಸಿದ್ದಿ ಯಾವುದು ಎನ್ನುವುದನ್ನು ಮುಂದಿನ ಸಾಲಿನಲ್ಲಿ ಮನವರಿಕೆ ಮಾಡಿಕೊಡುತ್ತಾರೆ.
ಮೊಲೆಯ ಹಾಲೆಂತಂತೆ ಸವಿಜೇನು ಬಾಯ್ಗೆ;
ತಾಯಿಯಪ್ಪುಗೆಯಂತೆ ಬಲು ಸೊಗಸು ಮೆಯ್ಗೆ;
ಗುರುವಿನೊಳ್ನುಡಿಯಂತೆ ಶ್ರೇಯಸ್ಸು ಬಾಳ್ಗೆ;
ತಾಯ್ನುಡಿಗೆ ದುಡಿದು ಮಡಿ ಇಹಪರಗಳೇಳ್ಗೆ!
ಮೊಲೆಯ ಹಾಲಿನಂತೆ ಸವಿ ಜೇನು, ತಾಯಿ ಅಪ್ಪುಗೆಯಂತೆ ಸೊಗಸು, ಗುರುವಿನ ಒಳ್ಳೆಯ ಮಾತಿನಂತೆ ಶ್ರೇಯಸ್ಸು, ಈ ನಾಡಿಗಾಗಿ ದುಡಿದು ಮಡಿದಲ್ಲಿ ಇಹಪರಗಳ ಏಳಿಗೆ ಎಂದು ಕುವೆಂಪು ಕೊಂಡಾಡಿದ್ದಾರೆ.
ಏಕೀಕರಣಕ್ಕೆ ಹತ್ತು ಹಲವು ಸಾಧಕ-ಭಾದಕಗಳು, ಆತಂಕಗಳು, ಎದುರಾದಾಗ ಕುವೆಂಪು ಅಂತಹ ಕವಿ ಹೀಗೆ ನುಡಿಯುತ್ತಾರೆ.
ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು
ನೀ ಮೆಟ್ಟುವ ನೆಲ ಅದೆ ಕರ್ನಾಟಕ;
ನೀನೇರುವ ಮಲೆ-ಸಹ್ಯಾದ್ರಿ
ನೀ ಮುಟ್ಟುವ ಮರ-ಶ್ರೀಗಂಧದ ಮರ;
ನೀ ಕುಡಿಯುವ ನೀರ್-ಕಾವೇರಿ.
ಎಂಬ ವಿಶಾಲ ಮನೋಭಾವನೆಯಲ್ಲಿ ಸಮಾಧಾನವನ್ನು ತಾಳುತ್ತಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಅದು ಕರ್ನಾಟಕ ಪಾಲಿಗೆ ಸಂತೋಷವಾದರೂ, ಕರ್ನಾಟಕ ಪ್ರಾಂತ್ಯವು ರೂಪಗೊಳ್ಳದೆ ಆ ಸಂತೋಷ ಪೂರ್ಣಗೊಳ್ಳುವಂತಿರಲಿಲ್ಲ. ಆಗ ಅಧಿಕಾರದಲ್ಲಿದ್ದ ಕೆ.ಸಿ.ರೆಡ್ಡಿ ಜವಾಬ್ದಾರಿ ಸರ್ಕಾರ ಅಧಿಕಾರದಲ್ಲಿತ್ತು. ಕುವೆಂಪುರವರು ಬಹಿರಂಗವಾಗಿ ಏಕೀಕರಣವನ್ನು ಬೆಂಬಲಿಸಿ ಅನೇಕ ಬಹಿರಂಗ ವೇದಿಕೆಗಳಿಂದ ಸರ್ಕಾರವನ್ನು ಕಟುವಾಗಿ ಟೀಕಿಸಿ ಭಾಷಣ ಮಾಡಿದ್ದರು. ಕುವೆಂಪುರವರಿಗೆ ವಿದ್ಯಾ ಇಲಾಖೆಯ ಮೂಲಕ ಶಿಸ್ತು ಕ್ರಮ ಏಕೆ ಕೈಗೊಳ್ಳಬಾರದು, ಎಂಬುದಕ್ಕೆ ಸಮಾಜಾಯಿಷಿ ಕೊಡಬೇಕೆಂದು ಕಾರಣ ಕೇಳಿ ನೊಟೀಸು ಕೊಡಲಾಗಿತ್ತು. ಅದಕ್ಕೆ ಉತ್ತರವಾಗಿಯೋ ಏನೋ ಎಂಬಂತೆ ಅಖಂಡ ಕರ್ನಾಟಕ ಕವಿತೆಯನ್ನು ಬರೆದರು. ಅದೊಂದು ಸಾಹಿತ್ಯ ರೂಪದ ಅಣು ಬಾಂಬು. ಅಠಾರಾ ಕಛೇರಿಯ ಬುನಾದಿಯನ್ನು ಅಲ್ಲಾಡಿಸಿತು. ಕರ್ನಾಟಕವು ನಿತ್ಯವಾದುದೆಂದು ಅದು ಆಗಲೇ ಕನ್ನಡಿಗ ಮನಸ್ಸಿನಲ್ಲಿ ರೂಪುಗೊಂಡಿದೆಯೆಂದು ಹೇಳಿದ್ದರು.
ಅಖಂಡ ಕರ್ನಾಟಕ
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯದ ನಾಟಕ!
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ;
ಸರಸ್ವತಿಯೆ ರಚಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!
ಮೈಸೂರು ಪ್ರಜಾಪ್ರತಿನಿಧಿ ಸಭೆ (ನವೆಂಬರ್ ೧೯೪೯) ಏಕೀಕರಣಕ್ಕೆ ಇದು ಸಕಾಲವಲ್ಲ ಎಂಬ ನಿರ್ಣಯವನ್ನು ಅಂಗೀಕರಿಸಿತು. ಭಾಷಾವಾರು ಪ್ರಾಂತ್ಯ ರಚನೆಯನ್ನು ಮುಂದೂಡಿದ್ದನ್ನು ದಕ್ಷಿಣ ಭಾರತದವರು ಖಂಡಿಸಿದರು. ಮುಂದೆ ಜೆ.ವಿ.ಪಿ (ಜವಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತರಾಮಯ್ಯ) ಸಮಿತಿಯ ವರದಿಯನ್ನು ಧಿಕ್ಕರಿಸಿ ಹೋರಾಟವನ್ನು ತೀವ್ರಗೊಳಿಸುತ್ತಾರೆ. ಆಗ ಕುವೆಂಪುರವರು ಕನ್ನಡಿಗ ದಿಟ್ಟ ಸಂಕಲ್ಪ ಮಾಡದೆ ಹೊರತು ಈ ಕಾರ್ಯ ಕೈಗೊಡುವುದಿಲ್ಲವೆಂದು ಭಾವಿಸಿ ಕರ್ನಾಟಕ ಜನತೆಗೆ ಕರ್ನಾಟಕ ಮಂತ್ರ ದೀಕ್ಷೆ ಕವನದ ಮೂಲಕ ನಿವೇಧಿಸಿಕೊಳ್ಳುತ್ತಾರೆ.
ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೆ!
ಕನ್ನಡ ಜನರೆಲ್ಲರ ಮೇಲಾಣೆ
ಕನ್ನಡ ನಾಡೊಂದಾಗದೆ ಮಾಣೆ
ತೊಡು ದೀಕ್ಷೆಯ! ಇಡು ರಕ್ಷೆಯ
ಕಂಕಣ ಕಟ್ಟಿಂದೇ!
ಶಂಕರಗೌಡ ಪಾಟೀಲ ೧೯೫೩ರಲ್ಲಿ ಹುಬ್ಬಳ್ಳಿ ಬಳಿ ಏಕೀಕರಣ ಜಾರಿಯಾಗಬೇಕೆಂದು ಅಮರಣ ಉಪವಾಸ ಹೂಡಿದರು. ಸಾವಿರಾರು ಜನರು ಕೆ.ಪಿ.ಸಿ.ಸಿ. ಸಭೆಯನ್ನು ನಡೆಯದಂತೆ ಪ್ರತಿಭಟನೆ ಮಾಡಿದರು. ಹಿಂಸಾಚಾರವೂ ಆಯಿತು. ಆಗ ಅಣ್ಣೂ ಗುರೂಜಿ ಶಾಂತನಾಥ ಇರಗಳೆ, ವಾಲಿ ಚೆನ್ನಪ್ಪ, ಚಿನ್ನಯ ಸ್ವಾಮಿ, ಓಂಕಾರ ಮಠ, ವೀರಭದ್ರಪ್ಪ, ಶಂಕರಗೌಡ ಇನಾಂದಾರ, ಮುಂತಾದವರು ಶಾಸನ ಸಭೆ, ಪಾರ್ಲಿಮೆಂಟ್ ಸದಸ್ಯತ್ವಗೆ ರಾಜೀನಾಮೆ ನೀಡಲು ಮುಂದಾದರು. ಇದೇ ಕಾಲಕ್ಕೆ ಮೈಸೂರಿನ ಕಡಿದಾಳ್ ಮಂಜಪ್ಪ, ಟಿ.ಚನ್ನಯ್ಯ, ಹೆಚ್.ಕೆ.ವೀರಣ್ಣಗೌಡ ಮುಂತಾದ ನಾಯಕರು ಏಕೀಕರಣವನ್ನು ವಿರೋಧಿಸಿದರು. ಡಿ.ವಿ.ಗುಂಡಪ್ಪ ನಾಲ್ಕು ಕರ್ನಾಟಕವಾಗಬೇಕೆಂದರು. ಆದರೆ ಕೆಂಗಲ್ ಹನುಮಂತಯ್ಯ ಮಾತ್ರ ಏಕೀಕರಣಕ್ಕೆ ಬೆಂಬಲಿಸಿದರಲ್ಲದೆ, ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದರು. ಆಗ ಕುವೆಂಪುರವರು ಕಚ್ಚಾಡುವ ಈ ನಾಯಕ ಮಣಿಗಳನ್ನು ಬೇಸತ್ತು ಮನನೊಂದು ಅವರಿಗಾಗಿಯೇ ಕನ್ನಡ ಡಿಂಡಿಮ ನಗಾರಿಯನ್ನು ಬಾರಿಸಿದರು, ಅವರ ಡಮರುಗ ನಿನಾದ ಇಲ್ಲಿದೆ.
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ!
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು!
ಕ್ಷಯಿಸೆ ಶಿವೇತರ ಕೃತಿಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!
ಎಂದು ಹಾಡಿನ ಮೂಲಕ ಕಚ್ಚಾಡುವರಿಗೆ ಸಂದೇಶವನ್ನು ನೀಡುವ ಮೂಲಕ ಏಕೀಕರಣದ ಅಗತ್ಯವನ್ನು ಸಮರ್ಥವಾಗಿ ಪ್ರತಿಪಾದಿಸಿದರು.
ಆಂಧ್ರದ ಗಾಂಧಿವಾದಿಯೆಂದೇ ಹೆಸರುವಾಸಿಯಾಗಿದ್ದ ಪೊಟ್ಟಿಶ್ರೀರಾಮುಲು ಅಮರಣಾಂತ ಉಪವಾಸ ನಂತರ ಪ್ರಾಣತ್ಯಾಗ ಫಲವಾಗಿ ೧೯೫೩ ಅಕ್ಟೋಬರ್ ೧ರಂದು ಆಂಧ್ರ ರಾಜ್ಯ ಅಸ್ತಿತ್ವಕ್ಕೆ ಬಂತು. ಬಳ್ಳಾರಿ ಜಿಲ್ಲೆಯ ಕೆಲವು ಪ್ರದೇಶಗಳನ್ನು ಬಿಟ್ಟು ಮೈಸೂರು ಪ್ರಾಂತ್ಯದಲ್ಲಿ ವಿಲೀನಗೊಂಡ ದಿನ ಕುವೆಂಪುರವರಿಗೆ ಇನ್ನಿಲ್ಲದ ಸಂತೋಷದ ಸಂಗಾತಿಯಾಗಿತ್ತು. ಬಳ್ಳಾರಿ ಪಟ್ಟಣ ಮೈಸೂರಿಗೆ ಸೇರ್ಪಡೆಗಿಂತ ಹಂಪಿ ಕ್ಷೇತ್ರವನ್ನು ಉಳಿಸಿಕೊಂಡಿದ್ದು ತುಂಬಾ ಸಂತೋಷದ ದಿನವಾಯ್ತು. ಇನ್ನು ಕರ್ನಾಟಕ ಏಕೀಕರಣ ದೂರವಿಲ್ಲವೆಂದು ಘೋಷಿಸಿದರು. ತರುವಾಯ ೧೯೫೬ ನವೆಂಬರ್ ೧ರಂದು ಕರ್ನಾಟಕ ಏಕೀಕರಣವಾದಗಲಂತೂ ಅವರ ಆನಂದ, ಸಂತೋಷಕ್ಕೆ ಪಾರವೇ ಇರಲಿಲ್ಲ. ಕನ್ನಡಿಗರ ಪಾಲಿಗೆ ಕರ್ನಾಟಕ (ಮೈಸೂರು) ರಾಜ್ಯೋದಯ ಸುದಿನದ ಸಂಗತಿಯಾಗಿತ್ತು. ರಾಜ್ಯೋತ್ಸವ ಬಂದ ಹಿನ್ನೆಲೆಯಲ್ಲಿ ಕುವೆಂಪುರವರ ‘ಕರ್ನಾಟಕ ರಾಜ್ಯೋದಯ ಶ್ರೀಗೀತೆಯನ್ನು ರಚಿಸಿದರು.
ಬರಿಯ ಚದರ ಮೈಲಿಗಳಲ್ತು ಕರ್ನಾಟಕ ದೇಶ ವಿಸ್ತೀರ್ಣಂ!
ನೆನೆ, ನೆನೆ ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಂ
ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಂ
ಪ್ರಾಣಮಯ ಭಾವಪ್ರದೇಶ ವಿಸ್ತೀರ್ಣಂ;
ಕರ್ನಾಟಕ ಏಕೀಕರಣ ನಂತರ ಮಹಾಜನ ವರದಿ ಜಾರಿಯಾಗಬೇಕು. ಕನ್ನಡ ಚಿತ್ರಗಳು ಕಡ್ಡಾಯವಾಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಬೇಕು. ಆಡಳಿತ ಕನ್ನಡ ಭಾಷೆಯಾಗಬೇಕು. ಕೇಂದ್ರ ಉದ್ದಿಮೆ ಮತ್ತು ಇಲಾಖೆಗಳಲ್ಲಿ ಕನ್ನಡ ಕನ್ನಡಿಗರಿಗೆ ಉದ್ಯೋಗ ಕೊಡಬೇಕು. ಕಾಸರಗೋಡು, ಸೊಲ್ಲಾಪುರ, ಕೃಷ್ಣಗಿರಿ, ಊಟಿ, ತಾಳವಾಡಿ, ಆದಿವಾನಿ, ರಾಯದುರ್ಗ ಮುಂತಾದವು ನಮ್ಮ ರಾಜ್ಯಕ್ಕೆ ಸೇರಿಸಬೇಕು ಮತ್ತು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಬೇಕೆಂದು ಕನ್ನಡ ಹೋರಾಟಗಾರರು ಬೇಡಿಕೆಯನ್ನು ಮುಂದಿಟ್ಟುಕೊಂಡು-ಸಭೆ ಸಮಾರಂಭ ಮಾಡಿ ಪ್ರತಿಭಟನೆಗಳನ್ನು ಮಾಡುತ್ತಿದ್ದರು.
ಅದೇ ಕಾಲಕ್ಕೆ ಕುವೆಂಪು ಕರ್ನಾಟಕ ಎಂಬ ಹೆಸರು ಅತ್ಯಂತ ಸಮಂಜಸವೂ, ಉಚಿತವೂ ಆಗಿರುವುದನ್ನು ಮನಗಂಡು ತುಂಬಾ ಭಾವುಕತೆಯಿಂದ ಆಡಿದ ಮಾತುಗಳು ಹೀಗಿವೆ
ಕರ್ನಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿಕಣಾ!
ಋಷಿಯ ಕಾಣ್ಬಕಣ್ಣಿಗೆ!
ಕರ್ನಾಟಕವು ಮೃತ ರಾಷ್ಟ್ರವಲ್ಲ ಅದು ಜೀವಂತ ರಾಷ್ಟ್ರ. ಕರ್ನಾಟಕ ಎಂಬ ಹೆಸರು ಇದು ನೆನ್ನೆಯದಲ್ಲ ಶತಮಾನಗಳಾಚೆಯಿಂದ ತನ್ನ ಹೆಸರಿನ ಸಾರ್ಥಕ್ಯ ಹಾಗೂ ಪರಂಪರೆಯನ್ನು ಕಾಯ್ದುಕೊಂಡು ಬಂದಿದೆ. ಕರ್ ಮತ್ತು ನಾಡು ಕರ್ನಾಟಕ ಆಯ್ತು. ಅಂದರೆ ಕರಿಯ ಮಣ್ಣಿನ ನಾಡು, ಎತ್ತರದ ನಾಡು ಎಂಬ ಅರ್ಥವನ್ನು ಮೂಡಿತೆಂದು ಹೇಳುತ್ತಾರೆ. ಕವಿ ಕುವೆಂಪು ಅವರು ತಮ್ಮ ಸಾಹಿತ್ಯ ಪ್ರಚಾರ ಭಾಷಣ ಮಾಲೆ ಎಂಬ ಪುಸ್ತಕದಲ್ಲಿ ಕನ್ನಡ ನಾಡನ್ನು ಉದ್ದೇಶಿಸಿ ಹೀಗೆ ಕವನ ರಚಿಸಿದ್ದಾರೆ.
ಕನಸು ನನಸಾಗುತ್ತದೆ ಏಕೈಕ ಕರ್ನಾಟಕ
ಕಣ್ ನಟ್ಟು ಬಯಸಿ ಕಾಣ್ ದಿಕ್ಕು ತಟಧ್ವಜಪಟ
ಏಕೀಕರಣವಾಯ್ತು ಏಕೀಕೃತ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವೂ ಆಯ್ತು. ಇದರಿಂದ ಕುವೆಂಪು ತೃಪ್ತರಾಗಲಿಲ್ಲ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮವಾಗಬೇಕು. ಆಡಳಿತದಲ್ಲಿ ಕನ್ನಡ ಜಾರಿಯಾಗಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಬೇಕು ಇಂಗ್ಲಿಷ್ ಎಂಬ ಮಹಾಕಂಟಕ ದೂರವಾಗಬೇಕು. ಜೊತೆಗೆ ಕನ್ನಡ ಭಾಷೆಯ ಮೇಲೆ ಭಾರತ ಸರ್ಕಾರವು ತ್ರಿಭಾಷ ಸೂತ್ರದ ಯುಕ್ತಿಯ ಅಡಿಯಲ್ಲಿ ಅನ್ಯಭಾಷೆಗಳನ್ನು ಹೇರುತಿದ್ದುದ್ದನ್ನು ತೀವ್ರವಾಗಿ ಟೀಕಿಸುತ್ತಾರೆ. ಈ ಟೀಕೆಯಲ್ಲಿ ದೈನ್ಯಾವಸ್ಥೆಗೆ ಮುಟ್ಟುತ್ತಿರುವ ಕನ್ನಡದ ವಾಸ್ತವ ಮತ್ತು ಅದರ ಉಳಿವಿನ ಮೂಲಕ ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕೆಂಬ ಆಶಯ ಸಮರ್ಥವಾಗಿ ವ್ಯಕ್ತವಾಗಿದೆ. ೧೯೩೫ರಲ್ಲೇ ಇಂಗ್ಲೀಷ್ ಭಾಷೆಯನ್ನು ಕನ್ನಡದ ಕಂದಮ್ಮಗಳ ಮೇಲೆ ಬಲತ್ಕಾರವಾಗಿ ಹೇರುವುದನ್ನು ಮನಗಂಡಿದ್ದ ಕುವೆಂಪು ಸಂಭವಿಸಬಹುದಾದ ಅಪಾಯವನ್ನು ತೊಡೆದು ಹಾಕುವ ನಿಟ್ಟಿನಿಂದ ತನ್ನ ವ್ಯಥೆಯನ್ನು ವ್ಯಕ್ತಪಡಿಸಿದ್ದರು.
ಸಾಯುತ್ತಿದೆ ನಿನ್ನ ನುಡಿ ಓ ಕನ್ನಡದ ಕಂದರಿರಾ
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ
ಎಂದು ಎಚ್ಚರಿಸುವ ಕವಿ
ರಾಜನುಡಿಯೆಂದೊಂದು, ರಾಷ್ಟ್ರ ನುಡಿಯೆಂದೊಂದು
ದೇವ ನುಡಿಯೆಂದೊಂದು ಹತ್ತಿ ಜಗ್ಗಿ
ನಿರಿನಿಟಲು ನಿಟಿಲೆಂದು ಮುದಿಮೊಳೆ ಮುರಿಯುತಿದೆ
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ!
ಇಂಗ್ಲಿಷ್ ಹೆಮ್ಮಾರಿಯ ಜೊತೆಗೆ ಹಿಂದಿಯ ಹೇರಿಕೆಯ ವಿರುದ್ಧ ಕನ್ನಡಿಗರು ದನಿ ಎತ್ತಬೇಕೆಂದು ಕರೆಕೊಡುತ್ತಾರೆ. ಕುವೆಂಪುರವರು ಕನ್ನಡದ ನೆತ್ತಿಯ ಮೇಲೆ ನೃತ್ಯಮಾಡುವುದನ್ನು ವಿರೋಧಿಸಿ ಇದೇ ಕವನದಲ್ಲಿ ಕವಿ
ಉತ್ತರದ ಕಾಶಿಯಲ್ಲಿ ಕತ್ತೆಮಿಂದೈತರಲು
ದಕ್ಷಿಣದ ದೇಶಕದು ಕುದುರೆಯಹುದೆ?
ತಾಯಿತ್ತು ಮೊಲೆಹಾಲೆ ನಿಮ್ಮ ಮೈಗಾಗದಿರೆ
ಹೊತ್ತ ಹೊರೆ ಬಲಕಾರಿ ನೆತ್ತರಹುದೆ?
ಪರಭಾಷೆಯ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದು ವಿಷವುಣಿಸಿದಂತೆ, ಬುದ್ಧಿಶಕ್ತಿಯನ್ನೆಲ್ಲಾ ಕುಂಠಿತಗೊಳಿಸುವ ಮಾರಕವೆಂದು ಕವಿಯ ಆಶಯ ಅದಕ್ಕಾಗಿಯೇ
ಪಾರು ಮಾಡೆಮ್ಮ ನೀ ಇಂಗ್ಲೀಷಿನಿಂದ
ಪೂತನಿಯ ಅಸುವೀಂಟ ಕೊಂದ ಗೋವಿಂದ!
ಇಂಗ್ಲಿಷ್‌ನ ವಿಷವನ್ನು ಕನ್ನಡದ ಮಕ್ಕಳಿಗೆ ಕುಡಿಸುವ ಘೋರ ದುರಂತವೆನ್ನುತ್ತಾರೆ.
ಹಿಂದಿ ಕಲಿಯದಿದ್ದರೆ ಹೊರ ರಾಜ್ಯದಲ್ಲಿ ನೌಕರಿ ಹೇಗೆ ಸಿಗುತ್ತದೆ? ಇಂಗ್ಲಿಷ್ ಕಲಿಯದಿದ್ದರೆ ವಿದೇಶಗಳಿಗೆ ರಾಯಭಾರಿಗಳಾಗಿ ಹೋಗುವುದು ಹೇಗೆ ಸಾಧ್ಯ? ಎಂದು ಇಂಗ್ಲಿಷ್, ಹಿಂದಿಯ ಪಟ್ಟಭದ್ರ ಹಿತಾಸಕ್ತರು ಅದರ ಅವಶ್ಯಕತೆಗಳ ಕುರಿತು ವಾದಿಸುವ ಸಂದರ್ಭದಲ್ಲಿ ಕುವೆಂಪು ಈ ರೀತಿ ಉತ್ತರಿಸುತ್ತಾರೆ.
ಮುಂದೆ ಇಂಗ್ಲೆಂಡಿನಲ್ಲಿ ನೀ ರಾಯಭಾರಿ?
ಬೇಡವೆಂಬುವರಾರು?
ಹೊಡೆ ಬಿರಿಯೆ ಕುಡಿಯೊ ಇಂಗ್ಲಿಷಿನ ಹೆಂಡ ಹೀರಿ!
ನನ್ನ ಮೇಲೇತಕ್ಕೆ ಮಾಡುವೆ ಬಲಾತ್ಕಾರ ಸವಾರಿ?
ನೀನು ಅಂತರಾಷ್ಟ್ರೀಯ ಕೀರ್ತಿಯಂ ಪೊತ್ತುಗರ್ಜಿಸುವ
ಜಗತ್ ಪ್ರಸಿದ್ಧ ಹುಲಿಯೆ?
ಕನ್ನಡದ ಸ್ಥಾನವನ್ನು ಇಂಗ್ಲಿಷ್ ಅತಿಕ್ರಮಿಸಿಕೊಂಡಾಗ, ಇಂಗ್ಲಿಷ್‌ಗಿರುವಷ್ಟು ಭರವಸೆ ಭವಿಷ್ಯದಲ್ಲಿ ಅದಕ್ಕಿರುವ ಭದ್ರತೆ ಮತ್ತು ಅದಕ್ಕಿರುವ ನಂಬಿಕೆಯನ್ನು ಮನಗಂಡ ಕವಿಯು ರಾಜ್ಯಭಾಷೆಯಾದ ಕನ್ನಡಕ್ಕೆ ಅಂತಹ ಯಾವ ಪೋಷಿಸುವ ಸ್ಥಿತಿಯಲ್ಲಿಲ್ಲದ ಅಸಹಾಯಕತೆಯನ್ನು ಪ್ರದರ್ಶಿಸುವ ಸ್ಥಿತಿಗೆ ದೂಡಲ್ಪಟ್ಟಿದ್ದು, ಇಂತಹ ದಮನೀಯ ಸ್ಥಿತಿಗೆ ಆಡಳಿತಗಾರರು, ಕನ್ನಡ ಜನರೇ ಕಾರಣವೆಂದು ನೊಂದಿದ್ದರು. ಈ ಹಿನ್ನಲೆಯಲ್ಲಿ
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೇ ಹದಹಾಕಿ ತಿವಿದರದು ಹೂವೆ;
ಎಂಬ ವ್ಯಂಗ್ಯಪೂರಿತ ಮಾತನ್ನು ನುಡಿದಿದ್ದರು. ಎಂದೆಂದಿಗೂ ಮರೆಯದೆ ಕನ್ನಡಿಗರು ಮೆಲುಕಾಕುತ್ತಾ ತಂತಮ್ಮ ಆತ್ಮ ಶೋಧನೆ ಮಾಡಿಕೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ ಹಿಂದೆಂದಿಗಿಂತ ಇಂದಿದೆ ಎಂದೆಷ್ಟೆ ಹೇಳಬಹುದಾಗಿದೆ.
ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ!
ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ!
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು
ಇಂದು ಅದೇ ಗೋವರ್ಧನ ಗಿರಿಧಾರೆಯಾಗುತ್ತದೆ.......
ಕನ್ನಡದ ಮಕ್ಕಳಿಗೆ ಕನ್ನಡದ ಬಗ್ಗೆ, ಕನ್ನಡ ಕಿಚ್ಚನ್ನು ಹೋರಾಟದ ಮನೋಭಾವವನ್ನು ಬೆಳೆಸಲು ಕನ್ನಡ ದೀಕ್ಷೆ ತೊಡಲು ಕರೆ ನೀಡುತ್ತಾರೆ.
ಕನ್ನಡ ನಾಡು-ನುಡಿಗೆ ಕುಂದುಂಟಾದಾಗ, ನಾಡ ರಕ್ಷಣೆಗಾಗಿ ಬೀದಿಗಿಳಿದು ಪ್ರತಿಭಟನೆಯ ಮೂಲಕ ನಾಡ ಪ್ರಭುಗಳನ್ನು ಎಚ್ಚರಿಸುವ ಸಂದರ್ಭದಲ್ಲಿ ಚಳವಳಿಗಾರರು ಕಲ್ಲು ಹೊಡೆಯುವವರು ಎಂದು ಮೂದಲಿಸುತ್ತಿದ್ದವರಿಗೆ ಕುವೆಂಪು....
ಕಲ್ಲೊ ಸೊಲ್ಲೋ, ಅದು ಕನ್ನಡಕ್ಕೆ ಅನಿವಾರ್ಯ
ಅಂದಿದ್ದು ಚಳವಳಿಗಾರರಿಗೆ ಧೈರ್ಯ ಮತ್ತು ಸ್ಪೂರ್ತಿ ತುಂಬಿತ್ತು.
ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಾದರೂ ಮಾನ್ಯ ಸ್ಥಾನ ದೊರೆಯಬೇಕಾದರೆ ಅದು ಇಲ್ಲೆ, ಕರ್ನಾಟಕದಲ್ಲೇ. ಇನ್ನೆಲ್ಲಿಯೂ ಅಲ್ಲ. ಪ್ರಪಂಚದಲ್ಲಿ ಸಹಸ್ರಾರು, ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಇದ್ದಾರೆ. ನಾವಿಲ್ಲಿ ಅವರುಗಳಿಗೆ ಅಷ್ಟು ಎಡೆ ಕೊಡದಿದ್ದರೂ ಅದರಿಂದ ಅವರಿಗಾಗಲಿ ಶಾಸ್ತ್ರಗಳಿಗಾಗಲಿ ಏನೊಂದು ನಷ್ಟ ಆಗುವುದಿಲ್ಲ. ಅವರಿಗೆ ಉಳಿದ ಜಗತ್ತು ಇದ್ದೇ ಇದೆ...
ನೀವು ಇಲ್ಲಿ ಕನ್ನಡಕ್ಕೆ ಕನ್ನಡದವರಿಗೆ ಎಡೆ ಕೊಡದಿದ್ದರೆ, ಸ್ಥಾನಮಾನ ಕೊಡದಿದ್ದರೆ ಜಗತ್ತಿನ ಮತ್ಯಾವ ಭಾಗವೂ ಕನ್ನಡದ ಕೈ ಹಿಡಿಯುವುದಿಲ್ಲ. ನೀವು ಕೈ ಬಿಟ್ಟರೆ ಅದಕ್ಕೆ ಸಮುದ್ರವೇ ಗತಿ (ಸಮಗ್ರ ಗದ್ಯ ಸಂ೧, ಪು ೭೧೧) ಎಂದು ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಕುವೆಂಪುರವರು ನೀಡಿದ ಕರೆ ಮಹತ್ವ ಪೂರ್ಣವಾದದ್ದು.
ಹೀಗೆ ತಮ್ಮ ಬದುಕಿನುದ್ದಕ್ಕೂ ಕನ್ನಡ ನಾಡಿನ ಜನರ ಕಲ್ಯಾಣಕ್ಕಾಗಿ ಹಾತೊರೆದ ಕವಿ, ಕುವೆಂಪು, ಕನ್ನಡ-ಕರ್ನಾಟಕದ ನೆಲೆಯಲ್ಲಿ ತಾವೂ ಬೆಳೆದು ಇತರರನ್ನೂ ಬೆಳೆಯಿಸಿದರು. ತಮ್ಮ ಸಮಕಾಲೀನ ಅನೇಕ ಕವಿಗಳು ಮಾಡದಿದ್ದು ಅನೇಕ ಕನ್ನಡ ಪರ, ಕರ್ನಾಟಕ ಪರ ಕೆಲಸವನ್ನು ತುಂಬಾ ಧೈರ್ಯ ಸಾಹಸ, ಎಂತಹ ಅಡೆ ತಡೆ ಬಂದರೂ, ಕುಗ್ಗದೆ ಕೈಗೊಂಡರು. ಬೇರೆಯವರಿಗೆ ಆಧಾರ ಸ್ತಂಭವಾಗಿ ನಿಂತರು. ಇಂತಹ ಅಸಾಧಾರಣ ದೈತ್ಯ ಪ್ರತಿಭೆ, ಬಹುಶಃ ರಾಷ್ಟ್ರದಲ್ಲೇ ಭಾರತೀಯ ಭಾಷೆಗಳಲ್ಲಿ ಇಲ್ಲ. ಅತೀ ಹೆಚ್ಚು ಪ್ರಶಸ್ತಿ ಪುರಸ್ಕಾರ ಪಡೆದ ಕನ್ನಡದ ಧೀಮಂತ ಕವಿ ಕುವೆಂಪು. ಕುವೆಂಪು ಅವರಲ್ಲಿ ಕನ್ನಡ ಅರಿವನ್ನು ಮೂಡಿಸಿ ಕನ್ನಡಕ್ಕೆ ಕುವೆಂಪು ಅವರನ್ನು ಕೊಟ್ಟ ಕೀರ್ತಿ ಐರಿಶ್ ಕವಿ ಜೇಮ್ಸ್ ಕಸಿನ್ಸ್ ಅವರಿಗೆ ಸಲ್ಲುತ್ತದೆ. ಅಂತಹ ಕುವೆಂಪು ಅವರೇ ಕನ್ನಡದ ಬಗೆಗಿನ ತನ್ನ ಅಳಲನ್ನು ಈ ರೀತಿ ವ್ಯಕ್ತ ಪಡಿಸಿದ್ದಾರೆ.
ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವ ತನಕ ನನ್ನ ಪ್ರಾಣವಿರುವ ತನಕ ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ದುಡಿಯಲು ವ್ಯಕ್ತಿಗಳನ್ನು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲಾ ತಪಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡ ಸೇವೆಗಾಗಿ ಮೀಸಲಿಡುತ್ತೇನೆ. ಎಂದು ಹೇಳುತ್ತಾರೆ. ಕುವೆಂಪು ಕನ್ನಡದ ಪ್ರೀತಿ ಪ್ರಶ್ನಾತೀತವಾದದ್ದು. ಅವರಲ್ಲಿನ ಕನ್ನಡ ನಿಷ್ಠೆ ಕನ್ನಡದ ಸ್ಥಾನಮಾನಕ್ಕಾಗಿ ಅವರು ನಡೆಸಿದ ಹೋರಾಟ ನೀಡಿದ ನಾಯಕತ್ವ ಬಹುದೊಡ್ಡದು.

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಲೇಖನ ಗಳಿಗಾಗಿ
ನಿರೀಕ್ಷಿಸಿ
ಇಂತಿ
ನಿಮ್ಮ
ನಂದಿ ಜೆ. ಹೂವಿನಹೊಳೆ
ಚಿತ್ತಾರದುರ್ಗ.ಕಾಂ, ಮತ್ತು itkannadigas.com
ಸಂಚಾಲಕ, ದೂ:9035177234,
E-MAIL: nimmanandi@gmail.com
web:www.chitharadurga.com

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿಮ್ಮ ಮುಂದೇ
ಇಂದಿನ (19-08-2010) ವಿಶೇಷ ಲೇಖನಗಳು

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿಮ್ಮ ಮುಂದೇ
ಇಂದಿನ (02-08-2010) ವಿಶೇಷ ಲೇಖನಗಳು




ಸ್ನೇಹದ ಬದುಕು ಅಮರ!


ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿಮ್ಮ ಮುಂದೇ

ಇಂದಿನ (29-07-2010) ವಿಶೇಷ ಲೇಖನಗಳು




ಪ್ರತಿಗ್ರಾಮದಲ್ಲಿ ಭಾರತದ ಕೇಂದ್ರ ಇದೆ

ಇವತ್ತಿನ ಕರ್ನಾಟಕದ ಸಂದರ್ಭದಲ್ಲಿ ಕನ್ನಡಿಗರ ಆತ್ಮಸಾಕ್ಷಿಯಂತೆ ಮಾತನಾಡುವ ಡಾ.ಯು.ಆರ್.ಅನಂತಮೂರ್ತಿ ‘ಕರವೇ ನಲ್ನುಡಿ’ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು. ನಂತರ ಅವರ ಮಾತುಗಳು ಚೌಡಯ್ಯ ಸ್ಮಾರಕ ಭವನದಲ್ಲಿ ಅನುರಣಿಸಿದವು. ಕನ್ನಡವನ್ನು ಉಳಿಸುವ ಬಗೆ ಹೇಗೆ ಎಂಬುದು ಅವರ ಒಟ್ಟು ಭಾಷಣದ ಕೇಂದ್ರಪ್ರಜ್ಞೆಯಾಗಿತ್ತು. ಅನಂತಮೂರ್ತಿಯವರ ಮಾತುಗಳು ಕನ್ನಡ ಚಳವಳಿಗಾರರಿಗೆ, ಕನ್ನಡ ಶ್ರೀಸಾಮಾನ್ಯನಿಗೆ ಹೊಸ ಮಾರ್ಗವೊಂದರ ದರ್ಶನವನ್ನು ಮಾಡಿಸಿತು. ಅವರ ಭಾಷಣದ ಯಥಾವತ್ತು ಇಲ್ಲಿದೆ.

ಕನ್ನಡದ ಮಾತನ್ನ ಎತ್ತುವುದೇ ಅಪಾಯಕಾರಿಯಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿದ ಹಿರಿಯರ ಸಂಸ್ಥಾನಕ್ಕೆ ಸೇರಿದ ಪೂಜ್ಯರಾದ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅವರೇ, ಇಂಥ ಒಂದು ಬೃಹತ್ ಸಭೆಯನ್ನು ಬೆಂಗಳೂರಿನಲ್ಲಿ ಕನ್ನಡಕ್ಕಾಗಿ ಏರ್ಪಾಡು ಮಾಡುವುದನ್ನು ಸಾಧ್ಯವಾಗುವಂತೆ ಮಾಡಿದ ಶ್ರೀ ಟಿ.ಎ. ನಾರಾಯಣಗೌಡರೇ, ಮಹಾಪೌರರಾದ ಎಸ್.ಕೆ ನಟರಾಜ್ ಅವರೇ, ನಮಗೆಲ್ಲರಿಗೂ ಬಹಳ ಪ್ರೀತಿಪಾತ್ರರಾದ ಶ್ರೀಮತಿ ಮೋಟಮ್ಮ ನವರೇ, ನಮ್ಮ ಅತ್ಯಂತ ಮುಖ್ಯವಾದ ಕನ್ನಡದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್‌ರವರೇ, ನನಗೆ ಬಹಳ ಕಾಲದಿಂದ ವಿಶ್ವಾಸವನ್ನು ಇಟ್ಟಿರುವ ಮನುಬಳಿಗಾರ್ ಅವರೇ, ಪತ್ರಿಕೆಯ ಸಂಪಾದಕರಾದ ಶ್ರೀಮತಿ ವಿಶಾಲಾಕ್ಷಿ ಅವರೆ ಮತ್ತು, ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಪರಮೇಶ್ವರ್‌ರವರೆ,
ಯಾವ ಬಂಗಾಳಿ ಆದರೂ ಪ್ರಪಂಚದಲ್ಲಿ ಎಲ್ಲೇ ಇದ್ದರೂ, ನೀನು ಯಾರು ಅಂದರೆ, ನಾನು ಬಂಗಾಳಿ ಅಂತಾನೆ. ಇಂಥ ಜಾತಿ ಅಂಥ ಹೇಳಲ್ಲ. ಒಬ್ಬ ತಮಿಳರವನು ಎಲ್ಲಿದ್ದರು ನೀನು ಯಾರು ಅಂದರೆ ನಾನು ತಮಿಳವನು ಎನ್ನುತ್ತಾನೆ. ಕನ್ನಡದವರ ಮಟ್ಟಿಗೆ ಅಮೆರಿಕದಲ್ಲಿದ್ದರೆ ನೀವು ಯಾರು ಅಂದರೆ, ನಾವು ವೀರಶೈವರು, ನಾವು ಗೌಡರು, ನಾವು ಬ್ರಾಹ್ಮಣರು ಅಂತಾರೆ. ಆಮೇಲಿಂದ ಒತ್ತಾಯಪೂರ್ವಕವಾಗಿ ನೋಡಿದರೆ ಐ ಆಮ್ ಎ ಕನ್ನಡಿಗ ಅಂಥ ಇಂಗ್ಲಿಷ್‌ನಲ್ಲಿ ಹೇಳ್ತಾರೆ. ಇದು ಬಹಳ ದುರದೃಷ್ಟದ ವಿಷಯ. ನಾವು ಮೊದಲು ಗುರುತಿಸಿಕೊಳ್ಳಬೇಕಾದುದು ನಮ್ಮನ್ನ ಕನ್ನಡಿಗರು ಅಂಥ. ಯಾಕೆಂದರೆ ಭಾರತದಲ್ಲಿ ಇರೋದು ಫೆಡರಲ್ ವ್ಯವಸ್ಥೆ, ಕೇಂದ್ರ ಸರ್ಕಾರ ಅಂತೀವಲ್ಲ ಅದು ತಪ್ಪು ಶಬ್ದ, ಭಾರತ ಬಹುಕೇಂದ್ರಿತ ರಾಷ್ಟ್ರ, ಎಲ್ಲಾ ರಾಜ್ಯಗಳಲ್ಲೂ ಭಾರತದ ಕೇಂದ್ರ ಇದೆ. ಗಾಂಧೀಜಿ ಅವರು ಕಲ್ಪಿಸಿದ್ದು ಸಹ ಇದನ್ನೇ. ಭಾರತದ ಪ್ರತಿ ಗ್ರಾಮದಲ್ಲೂ ಭಾರತದ ಕೇಂದ್ರ ಇದೆ. ಕೊನೆಪಕ್ಷ ನಾವು ಪ್ರತಿ ರಾಜ್ಯದಲ್ಲೂ ಭಾರತದ ಕೇಂದ್ರ ಇದೆ ಅಂಥ ಅರ್ಥಮಾಡಿಕೊಳ್ಳಬೇಕು. ಇದು ಫೆಡರಲ್ ಆದ್ದರಿಂದಲೇ ರೈಲ್ವೆಯಲ್ಲಿ ಇತ್ಯಾದಿ ನೌಕರಿಯಲ್ಲಿ ಪ್ರತಿಯೊಂದರಲ್ಲೂ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಗಲೇಬೇಕು.
ಇಲ್ಲದೇ ಹೋದರೆ ಏನಾಗತ್ತೆ ಅಂದರೆ, ನೀವು ಅಸ್ಸಾಂನಲ್ಲಿ ನೋಡಿದ್ರೆ, ಅಸ್ಸಾಂನಲ್ಲಿ ಅಸ್ಸಾಂನ ಜನರೇ ಇಲ್ಲದಂತ ರಾಜಕಾರಣ ನಡೀತಿದೆ. ನನ್ನನ್ನ ೨-೩ ವರ್ಷಗಳ ಹಿಂದೆ ನಮ್ಮಲ್ಲಿ ಸಾಹಿತ್ಯ ಸಮ್ಮೇಳನ ನಡೆಯತ್ತಲ್ಲ ಅಂಥದ್ದೇ ಒಂದು ಅಸ್ಸಾಂ ಭಾಷೆಯ ಸಮ್ಮೇಳನಕ್ಕೆ ನನ್ನನ್ನ ಉದ್ಘಾಟನೆ ಮಾಡೋದಕ್ಕೆ ಕರೆದಿದ್ದರು. ನಾನು ಹೋಗಿ ನೋಡಿದರೆ ಒಂದು ದೊಡ್ಡ ಮೈದಾನದಲ್ಲಿ ಲಕ್ಷೋಪಲಕ್ಷ ಅಸ್ಸಾಮಿ ಜನರು ಸೇರಿದ್ದರು. ಅಸ್ಸಾಂನಲ್ಲಿ ಅವರು ನಿಜವಾಗಲೂ ತಮ್ಮನ್ನ ಗುರುತಿಸಿಕೊಳ್ಳುವುದು ನಾವು ಅಸ್ಸಾಮಿ ಎಂದೇ. ಯಾಕೆಂದರೆ ಅಸ್ಸಾಮಿನ ಭಾಷೆಗೆ ಒಂದು ದೊಡ್ಡ ಅಪಾಯ ಬಂದೊದಗಿದೆ. ಬೆಂಗಳೂರಿನಲ್ಲಿ ಕನ್ನಡಕ್ಕೆ ಇಂಥ ಅಪಾಯ ಬಂದೊದಗಿದೆ. ನನ್ನ ಸ್ನೇಹಿತರು, ನನ್ನ ಮಗುವನ್ನ ಒಂದು ಒಳ್ಳೆಯ ಕನ್ನಡ ಶಾಲೆಗೆ ಕಳಿಸಬೇಕು, ಕನ್ನಡ ಮಾಧ್ಯಮದ ಶಾಲೆಗೆ ಕಳಿಸಬೇಕು ಅಂದರೆ ಇಲ್ಲಿ ಒಂದೆ ಒಂದು ಕನ್ನಡ ಮಾಧ್ಯಮ ಶಾಲೆ ಸಿಗುತ್ತಿಲ್ಲ; ಬೆಂಗಳೂರಿನಲ್ಲಿ ಎನ್ನುತ್ತಾರೆ. ಹೀಗೆ ಆಗಬಾರದು. ಇದು ನಮ್ಮ ರಾಜಧಾನಿ ಮತ್ತು ಕೆಲವು ವಿಷಯಗಳಲ್ಲಿ ನಾರಾಯಣಗೌಡರಿಗೆ ಸಂಪೂರ್ಣ ಬೆಂಬಲ ನಿಂತು ನಾವು, ನಾವು ಅಂದರೆ ಪ್ರಜ್ಞಾವಂತರಾದವರು ಕೆಲಸ ಮಾಡಬೇಕು.
ಉದಾಹರಣೆಗೆ ಇಲ್ಲಿ ಯಾವ ಬಹುರಾಷ್ಟ್ರೀಯ ಕಂಪನಿ ಬಂದರೂ ಕನ್ನಡವನ್ನೂ ಒಂದು ಭಾಷೆಯನ್ನಾಗಿ ಅವರು ಬಳಸಬೇಕು, ಕನ್ನಡವನ್ನೇ ಅಲ್ಲ. ಕನ್ನಡವನ್ನೂ ಒಂದು ಭಾಷೆಯಾಗಿ. ಯಾಕೆಂದರೆ ಅವರಿಗೆ ಬೇರೆ ಭಾಷೆ ಗೊತ್ತಿಲ್ಲ. ಯಾಕೆಂದರೆ ಇದೇ ಬಹುರಾಷ್ಟ್ರೀಯ ಕಂಪನಿ ಹಾಲೆಂಡ್‌ಗೆ ಹೋದರೆ ಅಲ್ಲಿನ ಭಾಷೆಯನ್ನ ಉಪಯೋಗಿಸುತ್ತಾರೆ. ಫ್ರಾನ್ಸ್‌ಗೆ ಹೋದರೆ ಅಲ್ಲಿನ ಭಾಷೆ ಉಪಯೋಗಿಸುತ್ತಾರೆ. ಕರ್ನಾಟಕಕ್ಕೆ ಬಂದರೆ, ಅವರು ಕನ್ನಡವನ್ನು ಬಳಸಲ್ಲ. ನಮ್ಮ ಸರ್ಕಾರ ಇಂಥಹ ಒಂದು ಒತ್ತಾಯವನ್ನು ಅವರ ಮೇಲೆ ಹಾಕಬೇಕು. ನಿಮಗೆ ಜಾಗ ಕೊಡಬೇಕಾದರೆ ನಿಮ್ ಆಫೀಸಿನಲ್ಲಿ ಕನ್ನಡವನ್ನೂ ಒಂದು ಭಾಷೆಯಾಗಿ ಬಳಸಬೇಕು ಎಂದು ಕಟ್ಟಳೆ ಹೇರಬೇಕು. ಕನ್ನಡವನ್ನೂ ಅಂತೀನಿ,ಕನ್ನಡವನ್ನೇ ಅಲ್ಲ .ಯಾಕೆಂದರೆ ಬೇರೆ ಬೇರೆ ಕಡೆ ಅವರು ವ್ಯವಹಾರ ಮಾಡಬೇಕಾಗುತ್ತೇ. ಕನ್ನಡವಿಲ್ಲದೇ ಅಲ್ಲ.
ಹಾಗೇನೆ ಇಷ್ಟು ಜನ ಕನ್ನಡಿಗರಿಗೆ ಕೆಲಸ ಸಿಗಲೇಬೇಕು ಅನ್ನೋದನ್ನ ಮಾಡಬೇಕು. ಜೊತೆಗೆ ಇದೊಂದು ದೊಡ್ಡ ಚಳವಳಿ ಅಂಥ ತಿಳಿದುಕೊಂಡಿದ್ದೇನೆ ನಾನು. ಕರವೇ ಅವರು ಕನ್ನಡಿಗರನ್ನ ಎಲ್ಲಾ ಕೆಲಸವನ್ನು ಮಾಡಬಲ್ಲಂತಹ ತರಬೇತಿ ಕೊಡುವಂತಹ ಒಂದು ಚಳವಳಿಯನ್ನ ಮಾಡಬೇಕು. ನಮ್ಮಲ್ಲಿ ಮನೆ ಕಟ್ಟಬೇಕು ಅಂದರೆ ತಮಿಳರೆ ಸಿಗೋದು, ಇವತ್ತೇನಾದರು, ನಾವು ಮರಗೆಲಸ ಮಾಡಬೇಕು ಅಂದರೆ ರಾಜಸ್ಥಾನಿಗಳೇ ಸಿಗೋದು. ಹಿಂದಿನ ಕಾಲದಲ್ಲಿ ಚಿನ್ನದ ಕೆಲಸ, ಮರಗೆಲಸವನ್ನ, ಮಡಿಕೆಗಳನ್ನ ಏನನ್ನಾದರು ಮಾಡಬಲ್ಲಂಥ ಶಕ್ತಿ ಕರ್ನಾಟಕದಲ್ಲಿತ್ತು. ಅದು ಹೋಗ್ತಾ ಇದೆ, ನಾವು ಸೋಮಾರಿಗಳಾಗುತ್ತಿದ್ದೇವೆ. ಅದು ಎಲ್ಲಾ ದೇಶದಲ್ಲೂ ಆಗುತ್ತೆ, ಏನಾಗತ್ತೆ ಅಂದರೆ ನಾವು ಅನೇಕ ಸಲ ಸ್ವಲ್ಪ ಶ್ರೀಮಂತರಾಗಿಬಿಟ್ಟರೆ ಸೋಮಾರಿಗಳಾಗಿಬಿಡುತ್ತೇವೆ. ಬಂಗಾಳದಲ್ಲಿ ಏನಾದರೂ ಬೇರೆ ಕೆಲಸ ಮಾಡಬೇಕು ಅಂದರೆ ಬಿಹಾರಿಗಳು ಅಲ್ಲಿಗೆ ಹೋಗಬೇಕು. ಬೇರೆಯವರು ಹೋದರೆ ಆಗಲ್ಲ. ನಾನು ಕೇರಳದಲ್ಲಿ ವೈಸ್ ಚಾನ್ಸಲರ್ ಆಗಿದ್ದೆ, ಅಲ್ಲಿ ಒಂದು ಎಲೆಕ್ಟ್ರಿಕ್ ರಿಪೇರಿ ವರ್ಕ್ ಮಾಡಕ್ಕೆ ಮಾಲಯಾಳಿ ಸಿಗೋದಿಲ್ಲ. ಯಾವುನೋ ತಮಿಳೋನೋ ಬಂದು ಮಾಡ್ತಾನೆ. ಕಷ್ಟದ ಕೆಲಸವನ್ನ ನಾವು ಮಾಡಲ್ಲ. ಹಾಗೇನೆ ಪಾಪ ಬೀದರ್ ಕಡೆಯವರು ಗೋವಾಗೆ ಹೋಗದೆ ಇದ್ದರೆ ಯಾವ ಕೆಲಸವೂ ಆಗಲ್ಲ.
ಹೀಗೆ ನಾವು ನಮ್ಮ ಎಲ್ಲ ಕೆಲಸವನ್ನು ಮಾಡೋದಕ್ಕೆ ಇನ್ನೊಂದು ಭಾಷೆ ಜನರನ್ನು ಬಳಸಿಕೊಳ್ಳುತ್ತೇವೆ. ಆದ್ದರಿಂದಲೇ ಇನ್ನೊಂದು ಭಾಷೆ ಜನರು ಹೆಚ್ಚೆಚ್ಚು ನಮ್ಮೊಳಗೆ ಬರಬೇಕಾಗತ್ತೆ. ನಾವು ಸ್ವಲ್ಪ ಸ್ವತಂತ್ರವಾಗಿ ಒಂದು ರಾಜ್ಯವಾಗಿ ಗಟ್ಟಿಯಾಗಿ ಇರಬೇಕು ಅಂದರೆ ನಮ್ಮಲ್ಲೇ ಎಲ್ಲಾ ಕೆಲಸವನ್ನ ಮಾಡುವಂತಹ ಸೋಮಾರಿಗಳಲ್ಲದಂತಹ, ನೆಚ್ಚಿಕೆ ಉಳ್ಳಂತಹ ಜನರನ್ನು ತಯಾರಿಮಾಡುವ ಒಂದು ಚಳವಳಿಯೂ ಈ ಕರವೇ ಮೂಲಕ ಆಗಬೇಕು ಅಂತ ನಾನು ಬಯಸುತ್ತೇನೆ. ಕನ್ನಡ ಸ್ವಾಭಿಮಾನ ಬೆಳೆಯೋದಕ್ಕೆ ನಾವು ಎಲ್ಲಾ ಕೆಲಸವನ್ನೂ ಮಾಡಬಲ್ಲವೆ ಅನ್ನೋದು ಕೂಡ ಬಹಳ ಮುಖ್ಯ. ಕನ್ನಡದವರನ್ನು ಬೇರೆಯವರು ಕರೆಯಬೇಕು, ಆ ರೀತಿಯ ಕೆಲಸವನ್ನು ಮಾಡಬಲ್ಲಂತಹವರು ನಮ್ಮಲ್ಲಿ ಇರಬೇಕು.
ಜ್ಞಾನದ ಮೂಲಕ ಮಾತ್ರದ ಕೆಲಸವಲ್ಲ, ದೇಹದ ಮೂಲಕ ಮಾಡುವ ಕೆಲಸಗಳನ್ನು ಮಾಡುವಂತಹವರು ದೊರೆಯುವಂತೆ ನೋಡಬೇಕು. ಅವರಿಗೆ ಬೇಕಾದಂತಹ ಶಿಕ್ಷಣವನ್ನು ಕೊಡುವುದನ್ನು ನಾರಾಯಣಗೌಡರು ಶುರು ಮಾಡಿದ್ದಾರೆ. ಅದು ಬರೀ ಹೋರಾಟ ಅಲ್ಲ. ಗಾಂಧೀಜಿ ಮಾಡ್ತಾ ಇದ್ರಲ್ಲ ಚರಕ, ಅದು ಇದು ಅಂಥ ಈ ರೀತಿಯ ಸಮಾಜವನ್ನೂ ಬೆಳೆಸುವಂತಹ ಕೆಲಸಗಳನ್ನು ಹಚ್ಚಿಕೊಳ್ಳಬೇಕು. ಆಗ ನಿಮ್ಮ ಶಕ್ತಿಯೂ ಹೆಚ್ಚಾಗುತ್ತೆ. ನಿಮಗೆ ಇರುವ ಶಕ್ತಿಯೂ ಹೆಚ್ಚಾಗುತ್ತೆ. ನಿಮಗೆ ಇರೋ ಗೌರವವೂ ಹೆಚ್ಚಾಗತ್ತೆ, ಕನ್ನಡದ ಸ್ವಾಭಿಮಾನವೂ ಬೆಳೆಯುತ್ತೆ. ನಾವು ಇವತ್ತು ಅನಕೃ ಅವರಿಂದ ಪ್ರಾರಂಭವಾದ ಕನ್ನಡ ಚಳವಳಿಯನ್ನ ನೆನೆಯಬೇಕು. ಬಹಳ ದೊಡ್ಡವರಿಂದ ಶುರುವಾಗಿದೆ. ಕುವೆಂಪು ಇದ್ದಾರೆ. ನಿಮ್ಮ ಮ್ಯಾಗಜಿನ್ ನೋಡಿದರೆ ಗೊತ್ತಾಗತೆ.
ರಾಜ್‌ಕುಮಾರ್ ಇದ್ದರು. ಅನಕೃರವರು ಇದ್ದರು. ಮಾಸ್ತಿ, ಬೇಂದ್ರೆ ಇದ್ದರು. ರಾಜ್‌ಕುಮಾರ್ ಎಷ್ಟು ಮುಖ್ಯ ಅಂಥ ನಾನು ಒಂದು ಕಡೆ ಬರೆದೆ. ಇಡೀ ಕರ್ನಾಟಕದಲ್ಲಿ ನಾವು ಎಲ್ಲರೂ ಬೇರೆ ಬೇರೆ ಕನ್ನಡಗಳನ್ನು ಮಾತನಾಡುತ್ತೀವಿ. ಬೆಳಗಾವಿಗೆ ಒಂದು ಕನ್ನಡ ಇದೆ, ನಮಗೊಂದು ಕನ್ನಡ ಇದೆ, ಬೀದರ್‌ಗೆ ಒಂದು ಕನ್ನಡ ಇದೆ. ರಾಜ್‌ಕುಮಾರ್ ಖ್ಯಾತರಾದ ಮೇಲೆ ಅವರು ಎಲ್ಲರಿಗೂ ಆಗಬಹುದಾದ ಒಂದು ಕನ್ನಡವನ್ನು ಮಾತನಾಡುತ್ತಿದ್ದರು. ಈಗ ಜರ್ಮನಿಯಲ್ಲಿ ಅಂತ ಒಂದು ಜರ್ಮನ್ ಸೃಷ್ಟಿ ಯಾಯಿತು, ಇಂಗ್ಲೆಂಡ್‌ನಲ್ಲಿ ನೂರು ಇಂಗ್ಲಿಷ್ ಇವೆ. ಆದರೆ ಒಂದು ಇಂಗ್ಲಿಷ್ ಬೇಕು ಅದೊಂದು ಭಾಷೆಯಾಗಬೇಕಾದರೆ, ಅದೊಂದು ರಾಜ್ಯವಾಗಬೇಕಾದರೆ, ಸಾರ್ವಜನಿಕ ಭಾಷೆಯಾಗಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಬೇಂದ್ರೆ ಹೇಳಿದರು.
ನಮಗೆ ಅನೇಕ ಒಳದಾರಿಗಳಿವೆ, ಬೇರೆ ಬೇರೆ ಕನ್ನಡಗಳಿವೆ. ಅದನ್ನ ದೊಡ್ಡ ಹಾದಿಯಾಗುವ ಕನ್ನಡವನ್ನ ನಮ್ಮ ಕವಿಗಳು ಮಾಡಿದರು. ಅದನ್ನ ಭಾಷೆಯಲ್ಲಿ ಮಾಡಿದವರು ರಾಜ್‌ಕುಮಾರ್. ಆದರಿಂದ ಕರ್ನಾಟಕ ಅನ್ನೋದಕ್ಕೆ ಭಾಷೆಯ ಶಕ್ತಿಯನ್ನು ತಂದವರು ರಾಜ್‌ಕುಮಾರ್. ಅವರನ್ನೆಲ್ಲಾ ಇಂದು ನೆನಪಿಸಿಕೊಳ್ಳೋಣ. ಮತ್ತು ಇದು ಬಹುಕೇಂದ್ರಿತ ರಾಷ್ಟ್ರವಾದ್ದರಿಂದ ಭಾರತದ ರಾಷ್ಟ್ರಕ್ಕೆ ಕರ್ನಾಟಕವು ಒಂದು ಕೇಂದ್ರ, ಸ್ವಾಭಿಮಾನ ಕೇಂದ್ರ ಹೇಗಾಗಬಲ್ಲದು? ಕುವೆಂಪು ಅವರು ಹೇಳಿದ ಹಾಗೆ ಅದರ ಜೊತೆ ಹೊಂದಿಕೊಂಡು. ಭಾರತದ ಜೊತೆ ಹೊಂದಿಕೊಂಡು ನಮ್ಮನ್ನು ನಾವು ಬಿಟ್ಟುಕೊಡದೆ ಇರೊದನ್ನ ನಾವು ಕಲಿಯಬೇಕು. ನಾವು ಹೊಂದಿಕೊಳ್ಳುತ್ತಾ ಹೋಗಿ ಕನ್ನಡವನ್ನೆ ಬಿಡೋದು, ಕನ್ನಡವನ್ನೆ ಕಟ್ಟಿಕೊಂಡು ಭಾರತವನ್ನು ಮರೆಯೋದು, ಎರಡೂ ಕೂಡ ಅಪಾಯಕಾರಿ. ಈ ಹೊಂದಾಣಿಕೆಯನ್ನು ಮಾಡೋದು ಹೇಗೆ ಅನ್ನೋದು ಇದೆಯಲ್ಲಾ ಅದು ಬಹಳ ಕಷ್ಟ ಸಾಧ್ಯವಾದದ್ದು.
ಈ ಸಂದರ್ಭದಲ್ಲಿ ಎಲ್ಲಾ ಕನ್ನಡಿಗರಿರೋದ್ರಿಂದ ನನ್ನ ಕನಸನ್ನು ನಾನು ಹೇಳಿಬಿಡ್ತೀನಿ. ನನಗೆ ವಯಸ್ಸಾಗಿದೆ. ಸಾಯೋದ್ರೋಳಗೆ ನೋಡಬೇಕು ಅಂತ ಬಯಸೋದು ಏನನ್ನ ಅಂದ್ರೆ ಎಲ್ಲಾ ಮಕ್ಕಳಿಗೂ ಸಮಾನವಾದ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಸಿಗುವಂತೆ ಆಗಬೇಕು. ಎಲ್ಲಾ ಮಕ್ಕಳಿಗೂ ಅಂದ್ರೆ ಇಲ್ಲಿ ಫ್ರಾನ್ಸ್‌ನವನು ಒಬ್ಬ ಬಂದು ೧೦-೨೦ ವರ್ಷ ಇಲ್ಲಿ ಇರೋದಾದ್ರೆ, ಅವನ ಮಗು ಇಲ್ಲಿ ಬೆಳೆಯೋದಾದ್ರೆ ಫ್ರಾನ್ಸ್‌ನವನ ಮಗು ಕೂಡ ಕನ್ನಡವನ್ನ ಕಲಿಯಬೇಕು. ಯಾಕೆಂದರೆ ಒಂದು ಮಗು ಜ್ಞಾನವನ್ನ ಕಲಿಯೋದು ಶಾಲೆಯಲ್ಲಿ ಮಾತ್ರವಲ್ಲ, ಬೀದಿಯಲ್ಲಿ ಕೂಡ. ಯಾವುದು ಬೀದಿಯ ಭಾಷೆಯೋ ಅದನ್ನ ಕಲಿಯದೇ ಇದ್ದರೆ ಮಗುವಿನ ಜ್ಞಾನ ಬೆಳೆಯೋಲ್ಲ. ಆದರೆ ನನ್ನ ಮಗುವೊಂದು ತಮಿಳುನಾಡಿನಲ್ಲಿದ್ದರೆ ಅದು ತಮಿಳಿನಲ್ಲಿ ಕಲಿಯಬೇಕು. ನಾನು ಕನ್ನಡಿಗನಿರಬಹುದು ನಾನು ತಮಿಳುನಾಡಿನಲ್ಲಿ ಇದ್ದರೆ ತಮಿಳಿನಲ್ಲಿ ಕಲಿಯಬೇಕು. ತಮಿಳಿನವನೊಬ್ಬ ಕನ್ನಡನಾಡಿನಲ್ಲಿ ಇದ್ದರೆ ಕನ್ನಡದಲ್ಲಿ ಕಲಿಯಲಿ. ಯಾಕೆಂದರೆ ಇದು ಸಾರ್ವತ್ರಿಕವಾಗಿ ಒಬ್ಬ ಶಿಕ್ಷಣ ವೇದಿತನಾಗಿ ನಾನು ಹೇಳೋದು. ನಾನು ಸ್ಪೇನ್‌ನಲ್ಲಿದ್ದರೆ ಸ್ಪ್ಯಾನಿಷ್‌ನಲ್ಲಿ ಕಲಿಯಬೇಕು. ಏಕೆಂದರೆ ಇಡೀ ಬೀದಿಯಲ್ಲಿ ಸ್ಪ್ಯಾನಿಷ್ ಮಾತಾಡುತ್ತಾರೆ. ನನ್ನ ಮಗುಗೆ ಸ್ಪ್ಯಾನಿಷ್ ಬರದೇ ಇದ್ದರೆ?
ಇದನ್ನ ಹೆಂಗಸರು ಕಲಿತಿರುತ್ತಾರೆ, ಅವರು ಅಂಗಡಿಯಲ್ಲಿ ಸಾಮಾನು ತಗೋಬೇಕಾಗಿರೋತ್ತೆ. ಹಾಗಾಗಿ ಅವರು ಯಾವ ಭಾಷೆಯವರಾಗಿದ್ದರೂ ಸ್ವಲ್ಪ ಕನ್ನಡ ಕಲಿತಿರುತ್ತಾರೆ. ಆದರೆ ಈಗ ಬಹುರಾಷ್ಟ್ರೀಯ ಕಂಪನಿಗಳ ದೊಡ್ಡ ದೊಡ್ಡ ಮಾಲ್‌ಗಳು ಬರೋದಕ್ಕೆ ಶುರುವಾಗಿರೋದರಿಂದ ಆ ಅಗತ್ಯವೂ ಕೂಡ ಹೋಗಿ ಬಿಟ್ಟಿದೆ. ಈಗ ಹೆಂಗಸರು ಕೂಡ ಕನ್ನಡವನ್ನು ಕಲಿಯೋದಿಲ್ಲ. ಮಕ್ಕಳು ಕಲಿಯೋದಿಲ್ಲ. ಹಿಂದೆ ಹಾಗಲ್ಲ, ತರಕಾರಿಯವನ ಹತ್ತಿರ ವಾದ ಮಾಡೊದಕ್ಕೆ ಅವನು ೧೦ ರೂಪಾಯಿ ಅಂದರೆ ೫ ರೂಪಾಯಿಗೆ ಇಳಿಸೋದಕ್ಕೆ ಉತ್ತರ ಭಾರತದವರಿಗೂ ಕನ್ನಡ ಬರುತ್ತಿತ್ತು, ತಮಿಳರಿಗೂ ಕನ್ನಡ ಬರುತಿತ್ತು. ಈಗ ಕನ್ನಡದ ಅಗತ್ಯವೇ ಇಲ್ಲದಂತಹ ಸ್ಥಿತಿ ಬಂದಿದೆ. ಆದ್ದರಿಂದ ಇವತ್ತು ಹುಟ್ಟುವ ಮಕ್ಕಳಿಗೆಲ್ಲಾ ಎಷ್ಟು ಶ್ರೀಮಂತನ ಮಗುವಾಗಿರಲಿ, ಯಾವ ಭಾಷೆಯವನ ಮಗುವಾಗಿರಲಿ ಸಮಾನ ಶಿಕ್ಷಣ ಸಾಮಾನ್ಯ ಶಾಲೆಯಲ್ಲಿ ಸಿಗಬೇಕು. ಮನೆಮಾತಾಗಿ ಎಲ್ಲಾ ಭಾಷೆಗಳು ಉಳಿಯಬೇಕು.
ಕರ್ನಾಟಕದ ಒಂದು ಹೆಚ್ಚುಗಾರಿಕೆ ಏನು ಅಂಥ ನೀವು ನನ್ನ ಕೇಳಿದರೆ, ಬೇರೆ ಎಲ್ಲಾ ಭಾಷೆಗಳಿಗಿಂತಲೂ ಹೆಚ್ಚುಗಾರಿಕೆ ಏನಂದರೆ ನಾನು ಒಬ್ಬ ಬರಹಗಾರನಾಗಿ ನಿಮಗೆ ಹೇಳ್ತೀನಿ ಇವತ್ತು ಕನ್ನಡದ ಒಂದು ನಾವೆಲ್ ತಗೊಂಡರೆ, ಆ ನಾವೆಲ್‌ನನ್ನು ಒಬ್ಬ ಕೊಂಕಣಿ ಮಾತನಾಡುವವನು ಬರೆದಿದ್ದರೆ, ಈ ಯಶವಂತ ಚಿತ್ತಾಲರು ಅಂಥವರು ಬರೆದಿದ್ದರೆ ಅಲ್ಲಿರುವ ಪಾತ್ರಗಳೆಲ್ಲಾ ಮಾತನಾಡುತ್ತಿರುವುದು ಕೊಂಕಣಿಯಲ್ಲೇ. ಆದರೆ ಅದು ಬರೆದಿರುವುದು ಕನ್ನಡದಲ್ಲಿ. ಕೊಂಕಣಿ ಕನ್ನಡದಲ್ಲಿ ಸಾನ್ನಿಧ್ಯವನ್ನು ಪಡೆದಿದೆ. ಚೋಮನದುಡಿ ಬಹಳ ದೊಡ್ಡ ಕಾದಂಬರಿ ಕಾರಂತರದ್ದು. ಚೋಮನದುಡಿಯಲ್ಲಿ ಎಲ್ಲಾ ನಡೆಯುವ ಘಟನೆಗಳು, ಅಲ್ಲಿರುವ ಪಾತ್ರಗಳೆಲ್ಲಾ ಮಾತನಾಡುತ್ತಿರುವುದು ತುಳುವಿನಲ್ಲಿ, ಆದರೆ ಅದು ಇರೋದು ಕನ್ನಡದಲ್ಲಿ. ಮರಾಠಿ ಮಾತು ಕನ್ನಡದ ಒಳಗೆ ಬಂದಿದೆ. ತುಳುವಿನ ಮಾತು ಕನ್ನಡದ ಒಳಗೆ ಬಂದಿದೆ. ಕೊಂಕಣಿ ಮಾತು ಕನ್ನಡದ ಒಳಗೆ ಬಂದಿದೆ, ಅಂದರೆ ಕನ್ನಡ ಹಲವು ಭಾಷೆಗಳನ್ನ ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡಿದೆ. ಇದು ತಮಿಳಿನ ಬಗ್ಗೆ ಅಥವಾ ಮರಾಠಿ ಬಗ್ಗೆ ನಿಜವಲ್ಲ. ಇದು ಕನ್ನಡದ ಬಗ್ಗೆ ನಿಜ. ಆದ್ದರಿಂದ ಕನ್ನಡವನ್ನು ನಾನು ಮಿನಿ ಇಂಡಿಯಾ ಅಂತ ಕರೆಯುತ್ತೇನೆ. ನಿಜವಾಗಿಯೂ ನಾನು ಒಬ್ಬ ಭಾಷಾತಜ್ಞನಾಗಿ ಹೇಳ್ತಾ ಇದೀನಿ. ಒಂದು ಸರಿ ಈ ಚೋಮನ ದುಡಿ ತುಳುವಿಗೆ ಟ್ರಾನ್ಸ್‌ಲೇಟ್ ಆಯ್ತು. ಟ್ರಾನ್ಸ್‌ಲೇಟ್ ಆದಾಗ ನಾನು ಹೇಳಿದೆ, ಇದು ಮೂಲ ಭಾಷೆಗೆ ಹೋಯ್ತು ಅಂತ. ಮೂಲ ಇರುವುದು ತುಳುವಿನಲ್ಲಿ ಆದರೆ ಇರೋದು ಕನ್ನಡದಲ್ಲಿ. ಆದ್ದರಿಂದ ಈ ಕನ್ನಡಕ್ಕೆ ಇರುವ ವಿಶಿಷ್ಟತೆಯನ್ನ ಕನ್ನಡ ಚಳವಳಿಗಾರರು ಅರಿಯಬೇಕು. ಏಕೆಂದರೆ ಕನ್ನಡ ಒಳಗೊಳ್ಳುವ ಭಾಷೆ. ಇದನ್ನ ನನ್ನ ಸ್ನೇಹಿತರೊಬ್ಬರು ಬರೆಯುತ್ತಾರೆ. ಸಾವಿರ ವರ್ಷದ ಹಿಂದೆ ನಮ್ಮಲ್ಲಿ ಕವಿರಾಜಮಾರ್ಗ ಹುಟ್ಟಿಕೊಂಡಿತು.
ಸುಮಾರು ಒಂದು ಸಾವಿರ ವರ್ಷದ ಹಿಂದೆ ನಮ್ಮ ಭಾಷೆಯಲ್ಲಿ ಬರೆಯೋದೆ ಆದರೆ ಬರವಣಿಗೆ ಹೇಗಿರಬೇಕು, ಅದರ ಲಕ್ಷಣಗಳೇನು? ಎನ್ನುವ ಗ್ರಂಥ ಪ್ರಪಂಚದ ಯಾವ ಭಾಷೆಯಲ್ಲೂ ಇಲ್ಲ. ತಮಿಳಿನಲ್ಲೊಂದು ತೊಲಕಾಪಿಯಂ ಅಂತಿದೆ. ಆದರೆ ಆ ಗ್ರಂಥದ ಲಕ್ಷಣ ಬೇರೆ. ನಮ್ಮದು ಹೇಗೆ ಬರೆಯಬೇಕು ಅಂತಿದೆ, ಅದು ಕವಿರಾಜಮಾರ್ಗ; ಸಾವಿರ ವರ್ಷದ ಹಿಂದಿನದು. ನೀವು ಅದನ್ನು ತಗೊಂಡು ದೊಡ್ಡ ಸಭೆಯನ್ನು ಮಾಡಬೇಕು. ಕವಿರಾಜಮಾರ್ಗನಿಗೆ ಜೈ ಎನ್ನಬೇಕು. ಏಕೆಂದರೆ ಕನ್ನಡ ಕೊಟ್ಟವನು ಅವನು. ಆ ಸಾವಿರ ವರ್ಷ ಹಿಂದೆ ಹುಟ್ಟಿಕೊಂಡ ಕನ್ನಡದ ಬೆಳವಣಿಗೆ ಸತತವಾಗಿ ನಡೆದುಕೊಂಡು ಬಂದಿದೆ.
ಇವತ್ತು ಭಾರತೀಯ ಭಾಷೆಗಳಲ್ಲಿ ಅತ್ಯಂತ ಮೇಲಿರುವ ಭಾಷೆಗಳ ಪೈಕಿ ಕನ್ನಡವೂ ಒಂದು. ಹಿಂದೆ ಬಂಗಾಳಿಗೆ ಆ ಸ್ಥಾನವಿತ್ತು. ಈಗ ನಾವು ಹೆಚ್ಚು ಕಡಿಮೆ ಆ ಸ್ಥಾನದಲ್ಲಿದ್ದೇವೆ. ಏಕೆಂದರೆ ನಮ್ಮದು ಸ್ವೀಕಾರದ ಭಾಷೆ. ಆ ಸ್ವೀಕಾರದ ಭಾಷೆ ಅನ್ನೋದಕ್ಕೆ ಒಂದೇ ಒಂದು ಉದಾಹರಣೆ ಕೊಡುತ್ತೇನೆ. ತಮಿಳಿನಲ್ಲಿ ಕ್ಲಿಂಟನ್ ಅಂತ ಬರೆಯೋಕೆ ಆಗಲ್ಲ, ಗ್ಲಿಂಟನ್ ಆಗ್ತಾನೆ. ತಮಿಳಿನಲ್ಲಿ ಗಾಂಧಿ ಕಾಂತಿ ಆಗ್ತಾನೆ. ಕನ್ನಡದಲ್ಲಿ ಗಾಂಧಿ ಅಂತ ಬರೀಬಹುದು ಕ್ಲಿಂಟನ್ ಅಂತ ಬರಿಬಹುದು, ಯಾಕೆಂದರೆ ನಮಗೆ ಬೇಕಾಗಿಲ್ಲದ ಅಕ್ಷರಗಳನ್ನು ಮೊದಲೇ ತೆಗೆದುಕೊಂಡಿದ್ದೀವಿ. ಕನ್ನಡ ಭಾಷೆಯನ್ನ ಬರೆಯೋದಕ್ಕೆ ಅಗತ್ಯವಿಲ್ಲದ ಅಕ್ಷರಗಳೂ ಕೂಡ ನಮ್ಮ ೫೨ ಅಕ್ಷರದಲ್ಲಿ ಇದೆ.
ಆದ್ದರಿಂದ ಯಾವ ಭಾಷೆ, ಯಾವ ಶಬ್ದವನ್ನಾದರೂ ಕನ್ನಡದಲ್ಲಿ ಬರೆಯೋದಕ್ಕೆ ಸಾಧ್ಯ. ಇದು ಕನ್ನಡದ ಸ್ವೀಕಾರದ ಶಕ್ತಿಯನ್ನ ಹೆಚ್ಚಿಸಿದೆ. ನಾನು ಭಾಷೆಗಳಲ್ಲಿ ಎರಡು ತರಹ ಅಂತೀನಿ: ಒಂದು ಚಲಿಸುವ ಭಾಷೆ, ಇನ್ನೊಂದು ಚಲಿಸದ ಭಾಷೆ. ನಮ್ಮದು ಚಲಿಸುವ ಭಾಷೆಯಲ್ಲ. ಇದು ಕರ್ನಾಟಕಕ್ಕೆ ಸೀಮಿತವಾದದ್ದು. ಕೆಲವು ಭಾಷೆಗಳು ಊರಿಂದ ಊರಿಗೆ ಚಲಿಸುತ್ತಾ ಹೋಗುತ್ತವೆ. ಆದರೆ ಚಲಿಸದ ಭಾಷೆಯಾದರೂ ಕೂಡ ಕವಿರಾಜ ಮಾರ್ಗ ಕನ್ನಡದ ಕಾವೇರಿಯಿಂದ ಗೋದಾವರಿವರೆಗೂ ಹರಡಿ ಇಡೀ ಪ್ರಪಂಚದಲ್ಲೇ ಪ್ರತಿಫಲಿತವಾಗಿದೆ. ನಮ್ಮ ಗೋವಿನ ಹಾಡು ಬರೆದವರು ‘ಧರಣಿ ಮಂಡಲ ಮದ್ಯದೊಳಗೆ ಮೆರೆಯುತಿಹ ಕರ್ನಾಟಕದೊಳು ದೇಶವನು’ ಎಂದರು. ಅಂದರೆ ಪ್ರಪಂಚದ ನಡುವಿನಲಿ ಕರ್ನಾಟಕ ಇದೆ ಅಂತ. ಆ ರೀತಿಯ ಒಂದು ಭಾವನೆ ನಮ್ಮಲ್ಲಿದೆ.
ನಮ್ಮಲ್ಲಿ ನೊಬೆಲ್ ಪ್ರೈಜ್ ಬರುವಂತಹ ಯೋಗ್ಯತೆಯುಳ್ಳ ಬಹಳಷ್ಟು ರೈಟರ್ ಬಂದಿದ್ದಾರೆ. ಅವರಿಗೆ ಸಿಗದೆ ಇರೋದು ಮುಖ್ಯ ಅಂತ ನೀವು ತಿಳಿಯಬಾರದು. ಆ ಯೋಗ್ಯತೆ ಇರೋರು ಇದಾರಾ? ಇದ್ದಾರೆ. ಕನ್ನಡ ಬೆಳೆದಿದೆಯಾ ಬೆಳೆದಿದೆ. ಭಾರತದ ಬಹುಮುಖ್ಯ ಭಾಷೆಗಳಲ್ಲಿ ಒಂದಾ? ಹೌದು. ಹಾಗೆ ಉಳಿದಿದೆಯೋ ಇಲ್ಲೋ.. ಯಾಕೆಂದರೆ ನಮಗೆ ಕನ್ನಡ ಶಾಲೆಗಳಿಲ್ಲ. ನಾವೆಲ್ಲಾ ಕನ್ನಡ ಶಾಲೆಗಳಲ್ಲಿ ಓದಿ ಬಂದವರು, ನಾನು ಕನ್ನಡ ಮಾದ್ಯಮದಲ್ಲಿ ಓದಿದವನು. ಆಮೇಲೆ ಇಂಗ್ಲೆಂಡ್‌ನಲ್ಲಿ ಹೋಗಿ ಓದಿ ಬಂದವನು. ನಾನು ಇಂಗ್ಲೆಂಡ್‌ನಲ್ಲಿ ಇಂಗ್ಲಿಷ್ ಫ್ರೊಫೆಸರ್ ಆಗಬಹುದಾದಷ್ಟು ವಿದ್ಯೆಯನ್ನು ಪಡೆದವನು. ಇದು ಒಂದು ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಇದು ಸಾಧ್ಯವಿತ್ತು. ಮೂರ್ತಿರಾಯರು, ಬಿ.ಎಂ ಶ್ರೀಕಂಠಯ್ಯನವರಿದ್ದರು, ಮಾಸ್ತಿ ಅವರಿದ್ದರು, ಎಲ್ಲರೂ ಇದ್ದರು. ಇವತ್ತು ಅದು ಸಾಧ್ಯವೇ ಆಗದೆ ಇರೋ ಹಾಗೆ ಆಗ್ತಿದೆ. ಈ ತಪ್ಪಿಗೆ ಕಾರಣ ಬೇರೆ ಯಾರು ಅಲ್ಲ, ನಮ್ಮ ಅಭಿಮಾನ ಶೂನ್ಯತೆ. ನಮ್ಮ ಮಕ್ಕಳು ಕನ್ನಡವನ್ನು ಕನ್ನಡದಲ್ಲಿ ಬರೆಯಬೇಕು.
ನಾನು ಇಂಗ್ಲಿಷ್ ಕಲಿಯಿರಿ ಕನ್ನಡದಲ್ಲಿ ಕಲಿಸಿರಿ ಅಂದಿದ್ದೆ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಿರಿ ಅಂದಿದ್ದೆ. ಕನ್ನಡದಲ್ಲಿ ಕಲಿತಾಗ ಜ್ಞಾನ ಕೂಡ ಚೆನ್ನಾಗಿ ಬೆಳೆಯುತ್ತೆ. ಇನ್ನೊಂದು ಬಹಳ ಮುಖ್ಯವಾದ ವಿಷಯವನ್ನು ಹೇಳಿಬಿಡ್ತೀನಿ. ಆಮೇಲೆ ನನ್ನ ಮಾತು ಸಾಕು. ಇಲ್ಲಿ ಮನುಬಳಿಗಾರ್ ಇದ್ದಾರೆ. ಅವರಲ್ಲೂ ಕೂಡ ನಾನು ಸಂಕಟವನ್ನು ತೊಡಿಕೊಂಡಿದ್ದೇನೆ. ೮೦ ಎಕರೆ ಭೂಮಿಯನ್ನು ಕನ್ನಡ ವಿಶ್ವವಿದ್ಯಾಲಯದಿಂದ ಅವರು ತೆಗೆದುಕೊಂಡು ಬಿಟ್ಟಾಗ ಒಂದು ಚಳವಳಿ ಆಯ್ತು, ಆ ಚಳವಳಿಗೆ ನಿಜವಾಗಲು ಬೆನ್ನೆಲುಬಾಗಿ ನಿಂತವರು ಕರ್ನಾಟಕ ರಕ್ಷಣಾ ವೇದಿಕೆಯವರು. ಅದರ ಜೊತೆಯಲ್ಲೇ ನಾನು ಹೇಳಬೇಕು; ನಮ್ಮ ಮುಖ್ಯಮಂತ್ರಿಗಳು ಬಹಳ ದೊಡ್ಡ ಮನಸ್ಸು ಮಾಡಿ ಇದಕ್ಕೆ ಸ್ಪಂದಿಸಿ ೮೦ ಎಕರೆಯನ್ನು ಹಿಂದಕ್ಕೆ ಕೊಟ್ಟರು. ಅವರಿಗೆ ನಮ್ಮ ವಂದನೆಯನ್ನು ಹೇಳಬೇಕು. ಇದು ನಾನು ಯಾಕೆ ಹೇಳ್ತಿದೀನಿ, ಅಂದರೆ ಕನ್ನಡಕ್ಕೆ ಒಂದು ದನಿ ಇದೆ. ಅದನ್ನು ನಾವು ಉಳಿಸಿಕೊಳ್ಳಬೇಕು.
ನಾನು ಒಂದು ಮಾತು ಹೇಳಿ ಮುಗಿಸುತ್ತೇನೆ. ಕರ್ನಾಟಕದಲ್ಲಿ ಅಪಾರವಾದ ಆಸ್ತಿ ಇದೆ. ಅಂದರೆ ಅದನ್ನ ನಮ್ಮ ಗಣಿಗಾರಿಕೆ ಮಾಡುವ ನಮ್ಮ ಮಂತ್ರಿಗಳು ಸತತವಾಗಿ ಚೀಪಾಗಿ ಮಾರಿ, ಮೋಸ ಮಾಡಿ ಕನ್ನಡದ ಸಂಪತ್ತನ್ನೆಲ್ಲಾ ಲೂಟಿ ಮಾಡಿದ್ದಾರೆ. ಕನ್ನಡದ ಇಡೀ ಸಂಘಟನೆ ಇದಕ್ಕೆ ವಿರೋಧವಾಗಬೇಕು.
ಯಾಕೆ ಈ ಕರೆಯನ್ನು ನಾನು ಕೋಡುತ್ತಿದ್ದೇನೆ ಅಂದರೆ, ಲ್ಯಾಟಿನ್ ಅಮೆರಿಕದಲ್ಲಿ ನೀವು ಕೇಳಿರಬೇಕು ಕೆನಡಾ ಮತ್ತು ಅಮೆರಿಕದವರು ಗಣಿಗಾರಿಕೆ ಸಂಸ್ಥೆಗಳು ಪೆರುವಿನಲ್ಲಿ, ಚಿಲಿಯಲ್ಲಿ ಅವರ ಪ್ರತಿಯೊಂದು ಊರಿನಲ್ಲಿ ಎಲ್ಲಿ ಬಂಗಾರ ಸಿಗತ್ತೋ, ಪೆಟ್ರೋಲ್ ಸಿಗತ್ತೋ ಎಲ್ಲಿ ಯಾವ ಅದಿರು ಸಿಗತ್ತೋ ಅದನ್ನ ಅಗೆದು ಬಗೆದು ಅದನ್ನ ಚೀಪಾಗಿ ಮಾರಿ ಆ ದೇಶದಲ್ಲಿ ಜನ ವೇಶ್ಯಾವೃತ್ತಿಯಿಂದಲೇ ಬದುಕುವ ಹಾಗೆ ಮಾಡಿ ಅವರನ್ನ ದರಿದ್ರರನ್ನಾಗಿ ಮಾಡಿದ್ದಾರೆ. ಇವತ್ತು ಲ್ಯಾಟಿನ್ ಅಮೆರಿಕ ಮತ್ತೆ ತಲೆಎತ್ತಿ ನಿಂತು ಜಗಳವಾಡಕ್ಕೆ ಸಿದ್ಧವಾಗಿದೆ. ಲ್ಯಾಟಿನ್ ಅಮೆರಿಕದ ಇಡೀ ಸಂಸ್ಕೃತಿಯನ್ನ ಅಮೆರಿಕ ಮತ್ತು ಕೆನಡಾ ನಾಶ ಮಾಡಿತು. ಕರ್ನಾಟಕದ ಸಂಸ್ಕೃತಿಯನ್ನ ಇವತ್ತು ಗಣಿಗಾರಿಕೆಯವರು ನಾಶ ಮಾಡುತ್ತಿದ್ದಾರೆ. ನಮ್ಮ ಸಂಪತ್ತನ್ನ ನಾಶ ಮಾಡುತ್ತಿದ್ದಾರೆ. ಇನ್ನೊಂದು ೧೦ ವರ್ಷದಲ್ಲಿ ಏನು ಉಳಿದಿರೋಲ್ಲ.
ಇದನ್ನು ನಿಲ್ಲಿಸಬೇಕು. ನಮ್ಮ ಮೊಮ್ಮಕ್ಕಳಿಗೆ ಕನ್ನಡನೂ ಉಳಿಬೇಕು, ಗಣಿ ಅದಿರೂ ಸಹ ಉಳಿಬೇಕು ಅನ್ನೋದಾದರೆ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು. ಒಂದು, ಗಣಿಗಾರಿಕೆ ನಡೆಸುವುದು ಅಗತ್ಯವಾದರೆ ಅದನ್ನ ಸರ್ಕಾರವೇ ನಡೆಸಬೇಕು. ಎರಡನೇದು ಅನಿವಾರ‍್ಯವಾಗಿ ಗಣಿಗಾರಿಕೆ ಮಾಡಬೇಕಾಗಿ ಬಂದರೆ ನಾವೇ ಉಕ್ಕನ್ನು ತಯಾರಿಸುವ ಸಾಧ್ಯತೆಯನ್ನು ನೋಡಿಕೊಳ್ಳಬೇಕು. ಅಥವಾ ನಮಗೆ ಯಾವುದೋ ಒಂದು ಅದಿರು ಬೇಕಾಗಿರುತ್ತೆ, ಅದು ನಮ್ಮಲ್ಲಿ ಇಲ್ಲದಿದ್ದರೆ ನಮ್ಮ ಅದಿರನು ಕೊಟ್ಟು ಇನ್ನೊಂದು ಅದಿರನ್ನು ತೆಗೆದುಕೊಳ್ಳಬೇಕು. ಒಂದು ರಾಜ್ಯಕ್ಕೆ ನೈತಿಕವಾದ ಸ್ವಾರ್ಥವು ಇರಬೇಕು. ಇದು ನೈತಿಕವಾದ ಸ್ವಾರ್ಥದಿಂದ ನಾನು ಹೇಳುತ್ತಿದ್ದೇನೆ. ನಮ್ಮ ನಾಡು ಗಟ್ಟಿಯಾಗಿ ಉಳಿಯಬೇಕು ಅನ್ನುವ ಆಸೆಯಿಂದ ಹೇಳುತ್ತಿದ್ದೇನೆ. ಆದ್ದರಿಂದ ಇವತ್ತು ನಡೆಯುತ್ತಿರೋ ಗಣಿ ಲೂಟಿಯಿಂದ ನಮ್ಮ ಡೆಮಾಕ್ರಸಿ ಕೂಡ ಅರ್ಥಹೀನವಾಗಿ ಕೆಟ್ಟುಹೋಗಿದೆ. ನಮ್ಮ ಡೆಮಾಕ್ರಸಿಯನ್ನ ಮತ್ತೆ ನಾವು ಸ್ಕ್ಯಾನರ್ ಕೆಳಗೆ ಇಟ್ಟು ನೋಡಬೇಕಾಗುತ್ತೆ.
ನಕ್ಸಲೈಟರು ಅಲ್ಲಿ ವಿಜೃಂಭಿಸುತ್ತಿದ್ದಾರೆ ಯಾಕೆ ? ಅಲ್ಲೂ ಕೂಡ ಗಣಿಗಾರಿಕೆ, ಬಾಕ್ಸೈಟ್ ಅದಿರಿದೆ. ಅದು ಸಿಗೋದು ಗುಡ್ಡದಲ್ಲಿ ಹಾಗಾಗಿ ಗುಡ್ಡಗಳಲ್ಲಿ ಹೋಗಿ ಅಗೆಯಬೇಕು. ಆದ್ದರಿಂದ ಅಲ್ಲಿರುವ ಟ್ರೈಬಲ್ಸ್‌ನ ಅವರು ಓಡಿಸಬೇಕು. ಅವರು ಹೋಗಲ್ಲ ಅಂತಾರೆ, ಅಲ್ಲಿ ಹೋಗಿ ಇವರು ಕೂತಿದ್ದಾರೆ. ಯಾಕೆಂದರೆ ಅವರಿಗೆ ಆ ಬೆಟ್ಟಗಳು ದೇವತೆಗಳು. ನಾವು ಎಲ್ಲಾ ದೇವರನ್ನು ನಾಶಮಾಡುತ್ತಿದ್ದೇವೆ.
ಮುಸ್ಲಿಂರ ಮಸೀದಿಯನ್ನು ನಾಶ ಮಾಡಿದ್ರು.. ಸಿಕ್ಕರ ದೇವಸ್ಥಾನದ ಮೇಲೆ ದಾಳಿ ಆಯಿತು. ಈಗ ಆದಿವಾಸಿಗಳ ದೇವರನ್ನು ನಾಶ ಮಾಡಕ್ಕೆ ಹೊರಟಿದ್ದಾರೆ. ಆ ಹಕ್ಕು ನಮಗಿಲ್ಲ, ಅವರ ಜೀವನ ಕ್ರಮವನ್ನು ಬದಲಿಸುವ ಹಕ್ಕು ನಮಗಿಲ್ಲ. ಆದ್ದರಿಂದ ಪ್ರಪಂಚದಲ್ಲೆಲ್ಲಾ ಒಂದು ಎಚ್ಚರ ಇದೆ, ಅದು ಗಣಿಗಾರಿಕೆ ನಡೆಯುವುದು ಅನಿವಾರ‍್ಯವಾದರೆ ಅದು ಹೇಗೆ ನಡೆಯಬೇಕು, ಎಷ್ಟು ಶುದ್ಧವಾಗಿ ನಡೆಯಬೇಕು, ಯಾವ ಹದದಲ್ಲಿ ನಡೆಯಬೇಕು, ಯಾವ ಕಾರಣಕ್ಕಾಗಿ ನಡೆಯಬೇಕು. ಅದು ಎಷ್ಟು ಕಾಲ ಉಳಿದಿರಬೇಕು. ಇದೆಲ್ಲವನ್ನೂ ನಾವು ಯೋಚಿಸಬೇಕು. ಸಂಪತ್ತು ನಮ್ಮ ಮೊಮ್ಮಕ್ಕಳ ಕಾಲಕ್ಕೂ ಉಳಿದಿರೋ ಹಾಗೆ ನೋಡಬೇಕು.
ಅಮೆರಿದಲ್ಲಿ ಸಿಕ್ಕಾಪಟ್ಟೆ ಪೆಟ್ರೋಲ್ ಇದೆ. ಅವರು ಅದನ್ನು ತೆಗೆದು ಮಾರುತ್ತಾರೇನು? ಯಾಕೆಂದರೆ ಮುಂದೆ ಆಪತ್ತು ಕಾಲ ಬಂದರೆ ಅಂತ ಪೆಟ್ರೋಲ್ ಅನ್ನು ಉಳಿಸಿಕೊಂಡಿದ್ದಾರೆ. ಕರ್ನಾಟಕಕ್ಕೆ ಮತ್ತೆ ಆರೀತಿಯ ನೈತಿಕವಾದ ಸ್ವಾರ್ಥದ ಚಿಂತೆ ಬೇಕು. ಅದನ್ನ ಕನ್ನಡಿಗರು ಒತ್ತಾಯ ಮಾಡಿ ನಮ್ಮ ಸರ್ಕಾರದ ಮೇಲೆ ಹೇರಬೇಕು. ಕನ್ನಡ ಉಳಿಯುವುದೇ ಆದರೆ, ಕನ್ನಡದ ಅದಿರು ಉಳಿದಿರಬೇಕು, ಕನ್ನಡದ ಮಾನವು ಉಳಿದಿರಬೇಕು.
ಕೊನೆ ಮಾತು; ನಂದೊಂದು ಆಸೆ ಇದೆ, ಒಂದು ಕಾಲದಲ್ಲಿ ಕರ್ನಾಟಕದವರು ಗವರ್ನರ್‌ಗಳು ಆಗುತ್ತಿದ್ದರು, ಐಎಎಸ್ ಆಫೀಸರ್‌ಗಳಾಗುತ್ತಿದ್ದರು, ಹೀಗೆಲ್ಲಾ ಆಗೊದ್ರಿಂದ ಅಲ್ಲಿ ನಮ್ಮ ದೆಹಲಿಯಲ್ಲಿ ನಮ್ಮದೊಂದು ಶಕ್ತಿ ಇರುತ್ತೆ, ಬಲ ಇರುತ್ತೆ. ಈಗ ಬಿಹಾರ್‌ನವರಿಗೆ ಬಲ ಇದೆ, ನಮ್ಮ ಕೇರಳದವರಿಗೆ ಬಲ ಇದೆ, ತಮಿಳವರಿಗೆ ಬಲ ಇದೆ. ಕನ್ನಡದವರಿಗೆ ಬಲವೇ ಇಲ್ಲ. ನಮ್ಮ ಮಾತನ್ನು ಆಡುವವರು ಬಹಳ ಕಡಿಮೆ ಆಗಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚುವ ಹಾಗೆ ಮಾಡಬೇಕು. ಯಾಕೆಂದರೆ ಭಾರತ ಬಹು ಕೇಂದ್ರೀತ ರಾಷ್ಟ್ರ ಅಂದರೆ ಫೆಡರಲ್ ವ್ಯವಸ್ಥೆ ಇದೆ, ಈ ರಾಜ್ಯಕ್ಕೂ ಒಂದು ಬೆಲೆ ಬರಬೇಕು ಅಂದರೆ ಫೆಡರಲ್ ವ್ಯವಸ್ಥೆಯಲ್ಲಿ ನಮ್ಮವರು ದೆಹಲಿಯಲ್ಲಿ ಕೂಡ ಇರಬೇಕು. ಅದಕ್ಕೋಸ್ಕರವಾಗಿ ಈ ಸಂಘಟನೆ ಹೋರಾಡಲಿ, ಮತ್ತು ಬೇರೆ ಭಾಷೆಯ ಜನರನ್ನು ಕನ್ನಡಿಗರನ್ನಾಗಿ ಮಾಡುವ ಕೆಲಸ ಮಾಡಲಿ.
ಒಂದೇ ಒಂದು ಡೆಫನೇಷನ್ ಕನ್ನಡಿಗ ಅಂದರೆ ಕನ್ನಡ ಬಲ್ಲವನು ಕನ್ನಡಿಗ. ತಮಿಳಿನವನಿಗೆ ಕನ್ನಡ ಬಂದರೆ, ಅವನು ಕನ್ನಡ ಮಾತನಾಡಿದರೆ ಅವನು ಕನ್ನಡಿಗ. ಯಾವ ಭಾಷೆಯವನೇ ಆಗಲಿ ಕನ್ನಡ ಭಾಷೆ ಕಲಿತಕೂಡಲೇ, ಬಳಸೋದಕ್ಕೆ ಶುರು ಮಾಡಿದ್ರೆ ಅವನು ಕನ್ನಡಿಗ. ಆವಾಗ ಅನಗತ್ಯವಾದ ಹಿಂಸೆ ಯಾವುದು ಇರೋದಿಲ್ಲ. ಆದರೆ, ಕನ್ನಡ ಮಾತ್ರ ಕಡ್ಡಾಯ. ಅದು ನಮ್ಮ ಘೋಷಣೆ ಆಗಬೇಕು.
ಈ ಪತ್ರಿಕೆ ಬಹಳ ಚೆನ್ನಾಗಿ ಬಂದಿದೆ. ನನ್ನದೇ ಎರಡು ಲೇಖನ ಬಳಸಿಕೊಂಡಿದ್ದಾರೆ. ನಾರಾಯಣಗೌಡರು ಈ ಪತ್ರಿಕೆಯನ್ನು ತುಂಬಾ ಚೆನ್ನಾಗಿ ಸಿದ್ಧಪಡಿಸಿದ್ದಾರೆ. ಅದರ ಸಂಪಾದಕ ವರ್ಗದವರು ಬಹಳ ಚೆನ್ನಾಗಿ ದುಡಿದಿದ್ದಾರೆ. ಇದು ಪ್ರತಿ ತಿಂಗಳು ಬಂದು ಕನ್ನಡದವರನ್ನು ಬರೀ ಹೋರಾಟಕ್ಕೆ ಮಾತ್ರ ಎಚ್ಚರಿಸದೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಕೂಡ ಮೂಡಿಸುವಂತಹ ಕೆಲಸವನ್ನು ಮಾಡಲಿ ಅಂತ ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಜೈ ಕರ್ನಾಟಕ.
ಡಾ.ಯು.ಆರ್.ಅನಂತಮೂರ್ತಿ

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿಮ್ಮ ಮುಂದೇ

ಇಂದಿನ (28-07-2010)ಲೇಖನಗಳು


ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ಪ್ರತಿ ದಿನ ನಿಮ್ಮ ಮುಂದೇ

ಇಂದಿನ (27-07-2010)ಲೇಖನಗಳು